ಬೆಂಗಳೂರು: ದೇಶದ ಬ್ಯಾಂಕ್ ಗಳಲ್ಲಿ ವಾರಸುದಾರರಿಲ್ಲದ ಕಾರಣ ಹಾಗೆಯೇ ಉಳಿದಿರುವ 67,270 ಕೋಟಿ ರೂಪಾಯಿಯನ್ನು ಖಾತೆದಾರರ ವಾರಸುದಾರರಿಗೆ ಹಿಂತಿರುಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ. ಹಕ್ಕುದಾರರಿಗೆ ಬ್ಯಾಂಕ್ ಗಳಲ್ಲಿ ಠೇವಣಿ ಇರುವ ಮೊತ್ತವನ್ನು ವಾಪಸ್ ನೀಡುವ ದೃಷ್ಟಿಯಿಂದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಭಿಯಾನ ಕೈಗೊಳ್ಳಬೇಕು ಎಂದು ಎಲ್ಲ ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚನೆ ನೀಡಿದೆ.
ಕಳೆದ 10 ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಹಿವಾಟು ಇಲ್ಲದ ಉಳಿತಾಯ ಅಥವಾ ಕರೆಂಟ್ ಅಕೌಂಟ್ ಗಳು, ಮೆಚ್ಯೂರಿಟಿ ಅವಧಿ ಮುಗಿದರೂ ಹಣ ಪಡೆಯದ ಸ್ಥಿರ ಠೇವಣಿಗಳು, ವಾಪಸ್ ಪಡೆಯದ ಡಿವಿಡೆಂಡ್ಗಳು ಅಥವಾ ಬಡ್ಡಿ ಹಣವನ್ನು ವಾರಸುದಾರರಿಲ್ಲದ ಠೇವಣಿ ಎಂದು ವರ್ಗೀಕರಿಸಲಾಗುತ್ತದೆ. ಈ ಮೊತ್ತವೇ ಈಗ 67,270 ಕೋಟಿ ರೂಪಾಯಿ ಆಗಿದೆ. ಬ್ಯಾಂಕ್ ಗಳು ನಿಗದಿತ ಅವಧಿವರೆಗೆ ಹಣ ಹಿಂಪಡೆಯದ್ದನ್ನು ಗಮನಿಸಿ, ಅದನ್ನು ಆರ್ ಬಿ ಐಗೆ ವರ್ಗಾಯಿಸುತ್ತವೆ. ಇದನ್ನು ಈಗ ಜನರಿಗೆ ನೀಡಲು ಆರ್ ಬಿ ಐ ಅಭಿಯಾನ ಆರಂಭಿಸಿದೆ.
ಕಡಿಮೆ ಸಾಕ್ಷರತೆ ಹೊಂದಿರುವ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವುದಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಅದರಂತೆ ಬ್ಯಾಂಕುಗಳು ಸ್ಥಳೀಯ ಭಾಷೆಗಳಲ್ಲಿ ಜಾಹೀರಾತು ನೀಡುವುದು, ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನ ನಡೆಸುವುದು ಸೇರಿ ಹಲವು ರೀತಿಯ ಜಾಗೃತಿ ಮೂಡಿಸುತ್ತದೆ.
ಇದರೊಂದಿಗೆ ಖಾತೆದಾರರು ಹಾಗೂ ಅವರ ಕುಟುಂಬದ ಸದಸ್ಯರು ತಮ್ಮ ಹಕ್ಕಿನ ಹಣವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡಲಾಗುತ್ತದೆ. ಬ್ಯಾಂಕ್ ಗಳಲ್ಲಿ ಠೇವಣಿ ಇರಿಸುವವರು ಮೃತಪಟ್ಟಿದ್ದರೆ, ಅಂತಹವರಿಗೆ ಯಾರಾದರೂ ನಾಮಿನಿಯಾಗಿ ಇದ್ದರೆ, ಅವರು ಬ್ಯಾಂಕ್ ಗಳಿಗೆ ತೆರಳಿ, ಅಗತ್ಯ ದಾಖಲೆ ನೀಡುವ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.



















