ನವದೆಹಲಿ: “ಬೀದಿನಾಯಿಗಳು ನನ್ನನ್ನು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರಸಿದ್ಧನನ್ನಾಗಿ ಮಾಡಿವೆ. ಅದಕ್ಕಾನಿ ನಾನು ಅವುಗಳಿಗೆ ಆಭಾರಿಯಾಗಿದ್ದೇನೆ.”
ಇದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ನೀಡಿರುವ ಹಾಸ್ಯಭರಿತ ಹೇಳಿಕೆ. ಬೀದಿನಾಯಿಗಳ ಕುರಿತ ತಮ್ಮ ಇತ್ತೀಚಿನ ಆದೇಶದಿಂದ ಜಾಗತಿಕವಾಗಿ ತಮ್ಮ ಹೆಸರಿಗೆ ಮನ್ನಣೆ ಸಿಕ್ಕಿದ್ದರ ಬಗ್ಗೆ ಅವರು ಈ ರೀತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ನಡೆದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಇದುವರೆಗೂ ನಾನು ಮಾಡುವ ಸಣ್ಣಪುಟ್ಟ ಕೆಲಸಗಳಿಂದಾಗಿ ಕೇವಲ ಕಾನೂನು ವಲಯದಲ್ಲಿ ಪರಿಚಿತನಾಗಿದ್ದೆ. ಆದರೆ, ಈಗ ಇಡೀ ನಾಗರಿಕ ಸಮಾಜಕ್ಕೆ ನನ್ನನ್ನು ಪರಿಚಯಿಸಿದ್ದಕ್ಕಾಗಿ ನಾನು ಬೀದಿನಾಯಿಗಳಿಗೆ ಧನ್ಯವಾದ ಹೇಳುತ್ತೇನೆ,” ಎಂದಿದ್ದಾರೆ. “ಶ್ವಾನಪ್ರಿಯರಲ್ಲದೆ, ನಾಯಿಗಳೂ ಸಹ ನನಗೆ ಆಶೀರ್ವಾದ ಮತ್ತು ಶುಭ ಹಾರೈಸುತ್ತಿವೆ ಎಂದು ನನಗೆ ಸಂದೇಶಗಳು ಬರುತ್ತಿವೆ,” ಎಂದು ಅವರು ನಗೆಚಟಾಕಿ ಹಾರಿಸಿದ್ದಾರೆ.
ಆಗಸ್ಟ್ 22 ರಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ತ್ರಿಸದಸ್ಯ ಪೀಠವು ಬೀದಿನಾಯಿಗಳಿಗೆ ಸಂಬಂಧಿಸಿ ಮಹತ್ವದ ತೀರ್ಪೊಂದನ್ನು ನೀಡಿತ್ತು. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಹಿಡಿದ ಬೀದಿನಾಯಿಗಳನ್ನು ಮತ್ತೆ ಅವುಗಳ ಮೂಲ ಸ್ಥಳಕ್ಕೆ ಬಿಡುವುದನ್ನು ನಿಷೇಧಿಸಿ ಈ ಹಿಂದೆ ದ್ವಿಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಈ ಪೀಠ ತಡೆ ನೀಡಿತ್ತು. ಬದಲಾಗಿ, ಬೀದಿನಾಯಿಗಳಿಗೆ ಲಸಿಕೆ ಮತ್ತು ಸಂತಾನಶಕ್ತಿಹರಣ ಚಿಕಿತ್ಸೆ ನೀಡಿದ ನಂತರ ಅವುಗಳನ್ನು ಅವುಗಳ ಮೂಲ ಸ್ಥಳಗಳಿಗೇ ತಂದು ಬಿಡಬೇಕು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ಪೀಠವು ಆದೇಶಿಸಿತ್ತು.
ಈ ತೀರ್ಪು, ಪ್ರಾಣಿಪ್ರಿಯರು ಮತ್ತು ಬೀದಿನಾಯಿಗಳ ಹಾವಳಿಯಿಂದ ತೊಂದರೆಗೊಳಗಾದವರ ಹಿತಾಸಕ್ತಿಗಳ ನಡುವೆ ಒಂದು ಸಮತೋಲನವನ್ನು ಕಂಡುಕೊಂಡಿದ್ದರಿಂದ ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಅಲ್ಲದೇ, ಈ ಹಿಂದಿನ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ತೀರ್ಪಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಾಣಿ ಪ್ರಿಯರು, ನಂತರದ ತೀರ್ಪನ್ನು ಸ್ವಾಗತಿಸಿದ್ದರು. ಅಲ್ಲದೇ, ಈ ತೀರ್ಪಿನ ಕುರಿತು ದೇಶಾದ್ಯಂತ ಭಾರೀ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಭರಪೂರ ಪ್ರತಿಕ್ರಿಯೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನ್ಯಾ.ವಿಕ್ರಮ್ ನಾಥ್ ಅವರು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು 2027 ರಲ್ಲಿ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸರದಿಯಲ್ಲಿದ್ದಾರೆ.



















