ಉಡುಪಿ: ಜ್ಞಾನ ದಾಹವು ಭೌತಿಕ ಉದ್ದೇಶಕ್ಕಷ್ಟೇ ಸೀಮಿತವಾಗದೆ ಸತ್ಯ ಶೋಧನೆಯಲ್ಲೂ ಇರಬೇಕು. ಬನ್ನಂಜೆ ಗೋವಿಂದಾಚಾರ್ಯರು ಈ ವಿಷಯದಲ್ಲಿ ಎಲ್ಲರಿಗೂ ಪ್ರೇರಕ ಶಕ್ತಿ. ಯಾವುದೇ ವಿಷಯವಿದ್ದರೂ ಶೋಧಿಸಿ ಮುನ್ನೆಡೆಯುವ ಪ್ರವೃತ್ತಿ ಅವರದ್ದಾಗಿತ್ತು. ಗೋವಿಂದಾಚಾರ್ಯರಂತೆ ಯುವ ಜನತೆ ಜ್ಞಾನ ದಾಹಿಗಳಾಗಬೇಕು ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಡಾ| ಬನ್ನಂಜೆ ಗೋವಿಂದಾಚಾರ್ಯ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಅಂಬಲಪಾಡಿ ಈಶವ್ಯಾಸ ಪ್ರತಿಷ್ಠಾನದಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯ ನವತಿ ಜನ್ಮ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಶ್ರೀಪಾದರು ಆಶೀರ್ವಚನ ನೀಡಿದ್ದಾರೆ.
ಲೌಕಿಕ, ಅಲೌಕಿಕ ವಿಚಾರಗಳನ್ನು ಶೋಧಿಸುತ್ತ ಹೋದಂತೆ ಹೊಸ ಹೊಸ ಆಯಾಮಗಳು ಸಿಗುತ್ತವೆ. ಶೋಧನೆಗಾಗಿ ಗೋವಿಂದಾಚಾರ್ಯರ ಮಾರ್ಗವನ್ನು ನಾವು ಅನುಸರಿಸಬೇಕು. ಯಾವುದೇ ವಿಷಯವಿದ್ದರೂ ಅದನ್ನು ವಿಮರ್ಶೆಗೆ ಒಳಪಡಿಸಬೇಕು. ಜ್ಞಾನ ದಾಹ ಇದ್ದಾಗ ತಾನಾಗಿಯೇ ನಮ್ಮಲ್ಲಿ ವಿಮರ್ಶೆಯ ಗುಣ ಹುಟ್ಟುತ್ತದೆ ಎಂದಿದ್ದಾರೆ.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಗ್ರಂಥಗಳನ್ನು ಯಾವುದೇ ಲೋಪವಿಲ್ಲದೇ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಅವರ ವಿಚಾರಶೀಲತೆ, ಅಧ್ಯಯನ ಮುಂದಿನ ಪೀಳಿಗೆಗೆ ಮಾದರಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.



















