ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ದೂರವಿಟ್ಟು ಶಾಸಕರ ಜೊತೆ ಸಿದ್ದರಾಮಯ್ಯ ಸಭೆ ಮಾಡುತ್ತಿರುವ ಬಗ್ಗೆ ಶಾಸಕ ಮಾಗಡಿ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ನಡೆದ ಸಭೆಗಳು ರಾಜಕೀಯ ಸಭೆ. ಈಗ ನಡೆಯುತ್ತಿರುವುದು ಅಭಿವೃದ್ಧಿ ಚರ್ಚೆಗಳು ಎಂದಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ಡಿಸಿಎಂ ಡಿಕೆಶಿ ಅವರನ್ನು ಕರೆದಿರಬಹುದು ಅಥವಾ ಅವರು ಹೋಗದೆ ಇರಬಹುದು. ಅದರ ಬಗ್ಗೆ ನಮಗೆ ಗೊತ್ತಿಲ್ಲ. ಎಲ್ಲಾ ಶಾಸಕರ ಕಷ್ಟ ಸುಖ ಕೇಳಬೇಕೆಂದು ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಿದ್ದರಾಮಯ್ಯ ಮೀಟಿಂಗ್ ಮಾಡುತ್ತಿದ್ದಾರೆ. ಇದು ಅಭಿವೃದ್ಧಿ ವಿಚಾರ ಎಂದು ಸಿದ್ದರಾಮಯ್ಯ ಸರಣಿ ಸಭೆ ಆರಂಭಿಸಿದ್ದಾರೆ.
ಸುರ್ಜೆವಾಲ ಬಂದಿದ್ದು ಕಾರ್ಯಕರ್ತರ ನಾಮಿನೇಷನ್ ಬಗ್ಗೆ ತೀರ್ಮಾನ ಮಾಡುವುದಕ್ಕೆ. ನಮ್ಮನ್ನೆಲ್ಲಾ ಕರೆದಿದ್ದು ನೀವು ನಾಮಿನೇಷನ್ ಕೊಟ್ಟಿದ್ದಿರಾ ? ಪಕ್ಷ ಸಂಘಟನೆ ಯಾವ ರೀತಿ ಆಗುತ್ತಿದೆ ಎನ್ನುವುದಕ್ಕೆ ಸುರ್ಜೇವಾಲ ಬಂದಿದ್ದರು ಎಂದು ಬಾಲಕೃಷ್ಣ ಹೇಳಿದ್ದಾರೆ.
ಸುರ್ಜೇವಾಲ ಅಭಿವೃದ್ಧಿ ಬಗ್ಗೆ ಶಾಸಕರ ಜೊತೆ ಚರ್ಚೆ ನಡೆಸಿಲ್ಲ. ಹೀಗಾಗಿ ಸಿದ್ದರಾಮಯ್ಯ ಸಭೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರನ್ನು ಕರೆದಿದ್ದಾರೆ. ಆ ಸಭೆಯಲ್ಲಿ ಡಿಸಿಎಂ, ಉಸ್ತುವಾರಿ ಸಚಿವರು ಇರುತ್ತಾರೆ. ಹೀಗಾಗಿ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ.



















