ಮೈಸೂರು : ಮೈಸೂರಿನಲ್ಲಿ ಇಂದು ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಮತ್ತೆ ಅಸಮಾಧಾನ ಮೂಡಿದಂತೆ ಕಾಣಿಸಿದೆ.
ಮೈಸೂರಿನಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2,578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡುವಾಗ ಡಿಕೆಶಿ ಅವರ ಹೆಸರು ಉಲ್ಲೇಖಿಸದೆ ಇರುವುದು ಡಿಸಿಎಂ ಡಿಕೆಶಿ ಅವರಿಗೆ ಅಸಮಾಧಾನವಾಗಿದ್ದು, ಅವರು ಕಾರ್ಯಕ್ರಮದ ಮಧ್ಯದಲ್ಲೇ ಹೊರ ನಡೆದಿರುವ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗ ಡಿಸಿಎಂ ಡಿಕೆಶಿ ಅವರ ಹೆಸರು ಹೇಳಿಲ್ಲ ಎನ್ನುವುದನ್ನು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ನೆನಪಿಸಿಕೊಟ್ಟರೂ ಕೂಡ ಸಿಎಂ ಸಿದ್ದರಾಮಯ್ಯ ಬಹಳ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ʼಇಲ್ಲಿ ಇರುವವರಿಗೆ ಸ್ವಾಗತ, ಮನೆಯಲ್ಲಿರುವವರಿಗೆ ಅಲ್ಲʼ ಎಂದು ವೇದಿಕೆಯಲ್ಲೇ ಹೇಳಿರುವುದು ಸಿಎಂ ಹಾಗೂ ಡಿಸಿಎಂ ನಡುವೆ ಇನ್ನೂ ಇರುವ ಅಸಮಾಧಾನವನ್ನು ಜಗಜ್ಜಾಹೀರು ಮಾಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇತ್ತೀಚೆಗೆ ಬಹಳ ದೊಡ್ಡ ಸುದ್ದಿ ಮಾಡಿದ್ದ ʼಸಿಎಂ ಬದಲಾವಣೆʼ ವಿಚಾರದಲ್ಲಿ ಉಭಯ ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸಿಕೊಂಡಿತ್ತು. ಆದಾಗ್ಯೂ ಉಭಯ ನಾಯಕರು ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಇಂದು ನಡೆದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮತ್ತೆ ಉಭಯ ನಾಯಕರಲ್ಲಿ ಭಿನ್ನಮತ ಕಾಣಿಸಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಡಿಸಿಎಂ ಡಿಕೆಶಿ ಅವರು ಇರಲಿಲ್ಲ ಎಂದು ಸ್ವಾಗತಿಸಲಿಲ್ಲವೋ ಅಥವಾ ಇಬ್ಬರ ನಡುವೆ ಇನ್ನೂ ಅಸಮಾಧಾನವಿದೆ ಎನ್ನುವುದನ್ನು ಬಹಿರಂಗವಾಗಿ ತೋರಿಸಿಕೊಟ್ಟರೋ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಮೂಡಿರು ಸಹಜ ಪ್ರಶ್ನೆಯಾಗಿದೆ.



















