ಡಿ.ಪಿ.ಆಂಜನಪ್ಪ ನಿರ್ಮಿಸಿರುವ, ಲೋಕೇಶ್ ಗೌಡ ಸಹ ನಿರ್ಮಾಣವಿರುವ, ಮಿಥುನ್ ನಿರ್ದೇಶನದ ಹಾಗೂ ರಾಘವ್ ನಾಯಕ್, ಕೃತಿಕ ಅಭಿನಯದ ಮತ್ತು ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿರುವ ” ರಾಜನಿವಾಸ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ನಟ ಆದಿತ್ಯ, ನಿರ್ಮಾಪಕ ಉದಯ್ ಕೆ ಮೆಹ್ತಾ, ಸಂಜಯ್ ಗೌಡ, ವೀರಕಪುತ್ರ ಶ್ರೀನಿವಾಸ್, ರಾಬರ್ಟ್ ಕ್ರಿಸ್ಟೋಫರ್, ರಮೇಶ್ ಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು “ರಾಜನಿವಾಸ” ಚಿತ್ರಕ್ಕೆ ಶುಭ ಹಾರೈಸಿದರು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ಬಗ್ಗೆ ಕೇಳಿದಾಗ ಬಹಳ ಬೇಸರವಾಗುತ್ತದೆ. ಚಿತ್ರರಂಗದ ಹಿರಿಯರೊಡನೆ ನಾನು ಈ ಚಿತ್ರರಂಗದ ವಿಷಯಗಳನ್ನು ಮಾತನಾಡುತ್ತಿರುತ್ತೇನೆ. ಹಿಂದೆ ರಾಜಕುಮಾರ್ ಅವರ ಜೊತೆಗೆ ಚಿತ್ರರಂಗದ ಪರವಾಗಿ ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಹಲವು ಹಿರಿಯ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ.
ಆ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರನ್ನು ಗೌರವಿಸಲು ಸದ್ಯದಲ್ಲೇ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದ್ದೇವೆ. ಬರೀ ಸ್ಮರಣಿಕೆ ಮಾತ್ರ ನೀಡದೆ, ಅದರ ಜೊತೆಗೆ ಒಂದು ಲಕ್ಷ ರೂ. ನಗದು ಸಹ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಕುರಿತು ಚಿತ್ರರಂಗದ ಹಿರಿಯರೊಂದಿಗೆ ಮಾತುಕತೆ ನಡೆಸಿದ್ದೇವೆ. ಇನ್ನೂ ಈ ಚಿತ್ರದ ನಿರ್ಮಾಪಕ ಆಂಜನಪ್ಪ ಅವರು ಬಹಳ ವರ್ಷಗಳಿಂದ ಕನ್ನಡಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅವರ ನಿರ್ಮಾಣದ “ರಾಜನಿವಾಸ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
“ರಾಜನಿವಾಸ” ಚಿತ್ರದ ಟ್ರೇಲರ್ ನೋಡಿದಾಗ ಕೆಲವರಿಗೆ “ಕಾಂತಾರ” ಚಿತ್ರ ನೆನಪಾಗಬಹುದು. ಆದರೆ ಇದು “ಕಾಂತಾರ” ಚಿತ್ರಕ್ಕೂ ಮೊದಲೇ ಆರಂಭವಾದ ಚಿತ್ರ. ಆದರೆ “ಕಾಂತಾರ’ ಮೊದಲು ಬಿಡುಗಡೆಯಾಯಿತು. ಆ ಚಿತ್ರವನ್ನು ನೋಡಿದ ನಂತರ ನಮ್ಮ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಈಗ ನಮ್ಮ ಚಿತ್ರ ತೆರಗೆ ಬರಲು ಸಿದ್ದವಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ನಾಲ್ಕು ಭಾಷೆಗಳ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ ಮೊದಲ ಹಾಡು ಸಹ ಅನಾವರಣವಾಗಲಿದೆ. ಚಿತ್ರ ಅಂದುಕೊಂಡ ಹಾಗೆ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಮಿಥುನ್.
ಸಹ ನಿರ್ಮಾಪಕ ಲೋಕೇಶ್ ಗೌಡ ಅವರು ಸಹ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾಯಕ ರಾಘವ ಹಾಗೂ ನಾಯಕಿ ಕೃತಿಕ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ನೀನಾಸಂ ಅಶ್ವತ್, ಯಮುನ ಶ್ರೀನಿಧಿ, ಸಹನ ಹಾಗೂ ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.