ದೊಡ್ಡ ಹುದ್ದೆಯಲ್ಲಿರೋರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಚಿನ್ನದ ಚಮಚವನ್ನೇ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ಐಎಎಸ್ ಸೇರಿ ಯಾವುದೇ ಅಧಿಕಾರಿಯಾದ್ರೆ ಅದು ಅಚ್ಚರಿ ಎನಿಸಲ್ಲ. ಅದೇ ಬಡವರ ಮಕ್ಕಳು, ಅದರಲ್ಲೂ ರೈತರ ಮಕ್ಕಳು ಐಎಎಸ್ ಅಧಿಕಾರಿಯಾದ್ರೆ ಅದು ಎಲ್ಲರ ಹುಬ್ಬೇರಿಸುತ್ತದೆ. ಹೀಗೆ, ರೈತನ ಮಗಳಾಗಿ ಹುಟ್ಟಿ, ಸತತ ಅಧ್ಯಯನದ ಮೂಲಕ ಎಲ್ಲರೂ ಹುಬ್ಬರೇರಿಸುವಂತೆ ಮಾಡಿದ್ದಾರೆ ತಪಸ್ಯಾ ಪರಿಹಾರ್. ಇದೇ ಈ ಹೊತ್ತಿನ ಸಕ್ಸೆಸ್ ಸ್ಟೋರಿ.
ತಪಸ್ಯಾ ಪರಿಹಾರ ರೈತನ ಮುದ್ದಿನ ಮಗಳು
ಮಧ್ಯಪ್ರದೇಶ ಮೂಲದ ತಪಸ್ಯಾ ಕತೆಯೇ ರೋಚಕ
ಗುಡಿಸಲಿನ ಪ್ರತಿಭೆ ಈಗ ಐಎಎಸ್ ಅಧಿಕಾರಿ
ಮಧ್ಯ ಪ್ರದೇಶದ ನರಸಿಂಗ್ಪುರ್ ಮೂಲದ ತಪಸ್ಯಾ ಪರಿಹಾರ್ ಅವರದ್ದು ರೈತಾಪಿ ಕುಟುಂಬ. ಅವರ ತಂದೆ ಹೆಸರು ವಿಶ್ವಾಸ್ ಪರಿಹಾರ್. ಅವರ ಚಿಕ್ಕಪ್ಪ ವಿನಾಯಕ್ ಪರಿಹಾರ್ ಸಾಮಾಜಿಕ ಕಾರ್ಯಕರ್ತರು. ಅಪ್ಪನ ಬಳಿ ಹಣವಿಲ್ಲದ ಕಾರಣ ಚಿಕ್ಕಪ್ಪನ ಬಳಿ ಹಣ ಪಡೆದು ತಪಸ್ಯಾ ಕಠಿಣ ಶ್ರಮದಿಂದ ಓದಿದರು. ಮನಸ್ಸಿದ್ದರೆ ಮಾರ್ಗ ಎಂಬಂತೆ, ತಪಸ್ಯಾ ಮೊದಲು ತಮ್ಮ ಕುಟುಂಬಕ್ಕೆ ಐಎಎಸ್ ಓದಬೇಕು ಎಂದು ತಿಳಿಸಿದಾಗ ಎಲ್ಲರು ಖುಷಿಯಿಂದ ಒಪ್ಪಿಕೊಂಡು ಸಹಾಯ ಮಾಡಿದರು. ಅದರ ಫಲವಾಗಿಯೇ ಈಗ ತಪಸ್ಯಾ ಐಎಎಸ್ ಅಧಿಕಾರಿಯಾಗಿದ್ದಾರೆ.
ತಪಸ್ಯಾ ಪರಿಹಾರ್ ಓದಿದ್ದು ಕಾನೂನು ಪದವಿ
ಬಳಿಕ ಹುಟ್ಟಿದ್ದೇ ಐಎಎಸ್ ಅಧಿಕಾರಿಯ ಛಲ
ಸತತ ಓದಿನ ಬಳಿಕ ದೇಶಕ್ಕೇ 23ನೇ ರ್ಯಾಂಕ್
ಛಲವೊಂದಿದ್ದರೆ ಸಾಕು, ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ತಪಸ್ಯಾ ಅವರೇ ಸಾಕ್ಷಿಯಾಗಿದ್ದಾರೆ. ತಪಸ್ಯ ಪರಿಹಾರ್ ಮಧ್ಯಪ್ರದೇಶದ ನರಸಿಂಗ್ಪುರ್ ಮೂಲದವರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಕೇಂದ್ರೀಯ ವಿದ್ಯಾಲಯದಲ್ಲಿ ಪಡೆದರು. ನಂತರದಲ್ಲಿ ಕಾನೂನು ಪದವಿ ಅನ್ನು ಭಾರತೀಯ ಕಾನೂನು ಸೊಸೈಟಿಯ ಪುಣೆಯ ಕಾನೂನು ಕಾಲೇಜಿನಲ್ಲಿ ಪಡೆದರು. ಇದಾದ ಬಳಿಕವೇ ಅವರಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎಂದು ಛಲ ಹುಟ್ಟಿತು.
ಕೋಚಿಂಗ್ ಇಲ್ಲದೆಯೇ ಸಾಧನೆ ಮಾಡಿದ ತಪಸ್ಯಾ
ಸ್ವಂತ ನೋಟ್ಸ್ ಮಾಡಿಕೊಂಡು ಓದಿ ಯಶಸ್ವಿ
ಇವರ ಸಕ್ಸೆಸ್ ಹಿಂದಿನ ಕತೆಯೇ ಇಂಟ್ರೆಸ್ಟಿಂಗ್
ಐಎಎಸ್ ಅಧಿಕಾರಿಯಾಗುವುದು ಅಷ್ಟು ಸುಲಭದ ಮಾತಲ್ಲ, ಕೋಚಿಂಗ್ ಪಡೆದವರೇ ಅಲ್ಲಿ ತೇರ್ಗಡೆ ಹೊಂದಲು ಆಗಲ್ಲ. ಅಂತಹದ್ದರಲ್ಲಿ, ಯಾವುದೇ ಕೋಚಿಂಗ್ ಪಡೆಯದೇ ಓದಿ 2017 ನೇ ಬ್ಯಾಚ್ನಲ್ಲಿ ದೇಶದ ಮಟ್ಟದಲ್ಲಿ 23 ನೇ ರ್ಯಾಂಕ್ ಪಡೆದು, ಐಎಎಸ್ ಅಧಿಕಾರಿಯಾದ ತಪಸ್ಯಾ ಪರಿಹಾರ್ ಪ್ರತಿಯೊಬ್ಬರಿಗೂ ಸ್ಫೂರ್ತಿ ಎನಿಸುತ್ತಾರೆ. ಸ್ವಂತ ನೋಟ್ಸ್ ಮಾಡಿಕೊಳ್ಳುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದೇ ಇವರ ಯಶಸ್ಸಿನ ಸೀಕ್ರೆಟ್ ಎಂದರೆ ನೀವು ನಂಬಲೇಬೇಕು.
ಮೊದಲ ಪ್ರಯತ್ನದಲ್ಲೇ ತಪಸ್ಯಾಗೆ ಹಿನ್ನಡೆ
ಪ್ರಿಲಿಮ್ಸ್ ನಲ್ಲೇ ಎಡವಿದ ತಪಸ್ಯಾ ಪರಿಹಾರ್
ಆದರೂ ಛಲ ಬಿಡದೆ ಓದಿ ಗುರಿ ಮುಟ್ಟಿದ ದಿಟ್ಟೆ
ಹಾಗಂತ, ತಪಸ್ಯಾ ಅವರ ಐಎಎಸ್ ಕನಸಿನ ಹಾದಿ ಸುಗಮವಾಗಿರಲಿಲ್ಲ. ತಪಸ್ಯ ತನ್ನ ಕಾನೂನು ಪದವಿ ಮುಗಿಸಿದ ನಂತರ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಮೊದಲಿಗೆ ಪ್ರಿಲಿಮ್ಸ್ ಬರೆಯಲು ಕೋಚಿಂಗ್ ಪಡೆದರಂತೆ. ಆದರೆ ಮೊದಲ ಪ್ರಯತ್ನದಲ್ಲೇ ಪ್ರಿಲಿಮ್ಸ್ ಫೇಲ್ ಆದರಂತೆ. ಆದ್ದರಿಂದ ನಂತರದಲ್ಲಿ ಕೋಚಿಂಗ್ಗೆ ಹೋಗದೇ ಕಠಿಣ ಶ್ರಮದಿಂದ ಸ್ವಯಂ ಆಗಿ ಓದಿ, ಯಶಸ್ಸು ಸಾಧಿಸಿದ್ದು ಪ್ರಮುಖ ಸಂಗತಿಯಾಗಿದೆ.
ಕೌಟುಂಬಿಕ ಜೀವನದಲ್ಲೂ ತಪಸ್ಯಾ ಸಕ್ಸೆಸ್
ಇವರ ಪತಿಯೂ ಐಎಫ್ಎಸ್ ಅಧಿಕಾರಿ
ಸದ್ಯ ಮಧ್ಯಪ್ರದೇಶದಲ್ಲೇ ಇಬ್ಬರಿಂದ ಸೇವೆ
ಐಎಎಸ್ ಅಧಿಕಾರಿಯಾಗಿ ಮಾತ್ರವಲ್ಲ, ವೈಯಕ್ತಿಕ ಅಥವಾ ಕೌಟುಂಬಿಕ ಜೀವನದಲ್ಲೂ ತಪಸ್ಯಾ ಯಶಸ್ಸು ಸಾಧಿಸಿದ್ದಾರೆ. ತಪಸ್ಯಾ ಅವರು ಮದುವೆ ಆಗಿರುವ ಗರ್ವಿತ್ ಗಂಗ್ವಾರ್ ಸಹ ಐಎಫ್ಎಸ್ ಅಧಿಕಾರಿ. 2021ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜೋಡಿಯ ಮೊದಲ ಭೇಟಿಯು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿಯ ಸಮಯದಲ್ಲಿ ಆಗಿತ್ತು. ಆರಂಭದಲ್ಲಿ ತಮಿಳುನಾಡು ಕೇಡರ್ ಗೆ ನಿಯೋಜಿಸಲ್ಪಟ್ಟ ತಪಸ್ಯಾ ನಂತರ ತಮ್ಮ ವಿವಾಹದ ನಂತರ ಪತಿಯೊಂದಿಗೆ ಇರಲು ಮಧ್ಯಪ್ರದೇಶ ಕೇಡರ್ ಗೆ ವರ್ಗಾವಣೆಗೊಂಡರು. ಈಗ ಮಧ್ಯಪ್ರದೇಶದಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ, ರೈತನ ಮಗಳಾಗಿ ಹುಟ್ಟಿ, ದೇಶವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ತಪಸ್ಯಾ ಎಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು.