ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸಿಎಂಗೆ ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ.
ಕಾನೂನು ಕ್ರಮಗಳ ವಿಳಂಬ ಹಾಗೂ ಅಧಿಕಾರಶಾಹಿ ವ್ಯವಸ್ಥೆ ಕುರಿತು ಸ್ಫೋಟಕ ಅಂಶಗಳ ವ್ಯವಸ್ಥೆ ಬಗ್ಗೆ 7 ಪುಟಗಳ ಪತ್ರ ಬರೆದಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಮುಖ್ಯಮಂತ್ರಿಗೆ ವಿಸ್ತ್ರತವಾಗಿ ಪತ್ರ ಬರೆದಿದ್ದಾರೆ. ಸಚಿವ ಸಂಪುಟ ನಡೆಯುವುದಕ್ಕೂ ಮುನ್ನವೇ ಈ ಪತ್ರ ಸಿಎಂಗೆ ಸಿಕ್ಕಿದೆ.
ಅಕ್ರಮ ಗಣಿಗಾರಿಕೆಗೆ ಲೋಕಾಯುಕ್ತ ತನಿಖಾ ವರದಿಯು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಸಿಬಿಐ ತನಿಖೆ, ಸುಪ್ರೀಂ ಕೋರ್ಟ್ ಆದೇಶ, ಸುಪ್ರೀಂ ಕೋರ್ಟ್ ನಿರ್ದೇಶಿತ ಉನ್ನತಾಧಿಕಾರ ಸಮಿತಿ, ರಾಜ್ಯಮಟ್ಟದಲ್ಲೂ ಹಿರಿಯ ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ರಚನೆ, ಎಸ್ಐಟಿ ತನಿಖೆ ಸೇರಿದಂತೆ ಹಲವು ಕ್ರಮಗಳಿವೆ. ಗಣಿ ಅಕ್ರಮದಿಂದ ಕೋಟ್ಯಾಂತರ ಟನ್ ಕಬ್ಬಿಣ ಅದಿರು ಸಾಗಣೆ, ರಫ್ತು, 1.50 ಲಕ್ಷ ಕೋಟಿ ರೂ. ಮೊತ್ತದ ಸಂಪತ್ತು ಲೂಟಿಯಾಗಿರುವ ಆರೋಪ ಕೇಳಿ ಬಂದಿದೆ.
ಅಗಾಧ ಸಂಪತ್ತು ಕೊಳ್ಳೆಹೊಡೆದು ಒಂದೂವರೆ ದಶಕ ಕಳೆದರೂ ಶಿಕ್ಷೆಯಾದದ್ದು ಮಾತ್ರ ಅತ್ಯಲ್ಪ. ಹೀಗಾಗಿ ಗಣಿ ಅಕ್ರಮ ತಾರ್ಕಿಕ ಅಂತ್ಯ ಕಂಡಿಲ್ಲವೆಂಬ ಆಕ್ರೋಶ ಜನ ಸಾಮಾನ್ಯರಲ್ಲಿದೆ. ಗಣಿ ಅಕ್ರಮದ ಹಣವು ರಾಜ್ಯ ರಾಜಕಾರಣದಲ್ಲಿ ಹಲವು ಸರ್ಕಾರಗಳ ಪತನಕ್ಕೂ ಕಾರಣವಾಗಿದೆ. ಅಧಿಕಾರಶಾಹಿ ನಿಧಾನದ್ರೋಹದಿಂದ ಅಪರಾಧಿಗಳಿಗೆ ತಕ್ಕಶಾಸ್ತಿ ನಿರೀಕ್ಷೆಯಷ್ಟು ಆಗುತ್ತಿಲ್ಲ. ಅಕ್ರಮ ಗಣಿಗಾರಿಕೆಯ ಶೇ. 92.4ರಷ್ಟ ಪ್ರಕರಣಗಳು ತನಿಖೆಗೆ ಒಳಪಟ್ಟಿಲ್ಲ. ಲೂಟಿಯಾದ ಬಹು ಲಕ್ಷ ಕೋಟಿ ರೂ.ಸಂಪತ್ತು ಖಜಾನೆಗೆ ವಾಪಸಾಗಿಲ್ಲ. ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವ, ಆಡಳಿತದ ಅನಾಸಕ್ತಿಯಿಂದ ತನಿಖೆಯಾಗಿಲ್ಲ. ವಿಚಾರಣೆಗೂ ಗುರಿಯಾಗಿಲ್ಲ. ಕೆಲವೇ ಕೆಲವು ಪ್ರಕರಣಗಳಲ್ಲಿ ಎಸ್ಐಟಿ ಪ್ರಗತಿ ಸಾಧಿಸಲಿಲ್ಲ. ಗಣಿ ಅಕ್ರಮದ ಕೇವಲ ಶೇ. 7.6ರಷ್ಟು ಪ್ರಕರಣಗಳು ಮಾತ್ರ ತನಿಖೆಗೆ ಒಳಪಟ್ಟಿವೆ. ಕೇವಲ ಶೇ. 0.02ರಷ್ಟು ಪ್ರಕರಣಗಳಲ್ಲಿ ತನಿಖೆಯಾಗಿದೆ. ಈ ಪೈಕಿ ಶೇ.2ರಷ್ಟು ತೀರ್ಪು ಬಂದು, ಬೆರಳೆಣಿಕೆಯಷ್ಟು ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಕೆಲವು ಆರೋಪಿಗಳು ಅನುಮಾನದ ಪ್ರಯೋಜನ, ತಾಂತ್ರಿಕ ಕಾರಣಗಳಿಂದ ಬಿಡುಗಡೆಯಾಗಿದ್ದು, ಕೆಲವು ಕೇಸ್ ಗಳು ಪ್ರಕರಣವಾರು ಮೇಲ್ಮನವಿ ತೀರ್ಮಾನಿಸದೇ ಅಲ್ಲಿಯೇ ಕೊಳೆಯುತ್ತಿವೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.