ನೋಡ ನೋಡುತ್ತಲೇ ಕಾಲಚಕ್ರ ತಿರುಗಿಬಿಡುತ್ತದೆ. ಕೆಲಸ, ದುಡಿಮೆ, ಮದುವೆ, ಮಕ್ಕಳು, ಅವರ ಶಿಕ್ಷಣ, ಕುಟುಂಬದ ಜವಾಬ್ದಾರಿ… ಹೀಗೆ, ಇವುಗಳನ್ನು ನಿಭಾಯಿಸುತ್ತಲೇ ವಯಸ್ಸು 60 ದಾಟಿರುತ್ತದೆ. ದುಡಿದ ಹಣವನ್ನೆಲ್ಲ ಜವಾಬ್ದಾರಿಗಳಿಗಾಗಿ ಖರ್ಚು ಮಾಡುತ್ತೇವೆ. ಬೆಳೆದು ನಿಂತ ಮಕ್ಕಳ ಎದುರು ಹಣ ಕೇಳಲು ಸ್ವಾಭಿಮಾನ ಅಡ್ಡಬರುತ್ತದೆ. 60 ವರ್ಷ ದಾಟಿದ ಬಹುತೇಕ ಹಿರಿಯ ನಾಗರಿಕರ ಚಿಂತೆಗಳಿವು. ಆದ್ರೆ, ಈಗ ಚಿಂತೆ ಬೇಡ, ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ತಿಂಗಳಿಗೆ 600-1,200 ರೂ. ಪಿಂಚಣಿ ಪಡೆಯಬಹುದಾಗಿದೆ. ಹೇಗಂತೀರಾ? ಈ ಸ್ಟೋರಿ ನೋಡಿ.
ಪಿಂಚಣಿಗಾಗಿ ಇದೆ ಇಂದಿರಾ ಗಾಂಧಿ ಯೋಜನೆ
ತಿಂಗಳಿಗೆ 600-1200 ರೂ. ಪಿಂಚಣಿ ಫಿಕ್ಸ್
ಹಿರಿಯ ನಾಗರಿಕರು ಯಾರಿಗೂ ಕೈಚಾಚೋ ಹಾಗಿಲ್ಲ
ಹೌದು, ದೇಶದ ಹಿರಿಯ ಜೀವಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕು ಎಂದೇ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. 1965ರಿಂದಲೂ ಯೋಜನೆ ಜಾರಿಯಲ್ಲಿದ್ದು, ಬಡ ಹಿರಿಯ ನಾಗರಿಕರಿಗೆ ಮಾಸಿಕ 600 ರೂಪಾಯಿಯಿಂದ 1,200 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಈಗಂತೂ ನೇರವಾಗಿ ಜನರ ಖಾತೆಗಳಿಗೇ ಹಣವನ್ನು ಜಮೆ ಮಾಡಲಾಗುತ್ತದೆ.
60 ವರ್ಷ ದಾಟಿದರೆ 600 ರೂ. ಪಿಂಚಣಿ
65 ವರ್ಷ ದಾಟಿದರೆ 1,200 ರೂ. ಪೆನ್ಶನ್
ಹಿರಿಯ ನಾಗರಿಕರಿಗೆ ಬೇಡ ಯಾವ್ದೇ ಟೆನ್ಶನ್
ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 600 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಇನ್ನು 65 ವರ್ಷ ದಾಟಿದವರಿಗೆ ಮಾಸಿಕ 1,200 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಹಾಗಾಗಿ, ಜೀವನ ನಿರ್ವಹಣೆ, ಔಷಧ ಖರೀದಿ ಸೇರಿ ಸಣ್ಣಪುಟ್ಟ ಖರ್ಚುಗಳನ್ನು ಹಿರಿಯ ನಾಗರಿಕರು ಪೂರೈಸಿಕೊಳ್ಳಬಹುದಾಗಿದೆ. ಹಾಗೆಯೇ, ಸೀನಿಯರ್ ಸಿಟಿಜೆನ್ ಕಾರ್ಡ್ ಇದ್ದರೆ ರೈಲು, ಬಸ್ ಗಳಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಲು ಕೂಡ ಅವಕಾಶವಿದೆ.
ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ಯಾವೆಲ್ಲ ದಾಖಲೆ ನೀಡಬೇಕು?
ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ
ಹಿರಿಯ ನಾಗಿರಕರು ತಮ್ಮ ಮನೆಯ ಸಮೀಪದ ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ವೃದ್ಧಾಪ್ಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಜನಸೇವಕ ಯೋಜನೆ ಅಡಿ ನಿಮ್ಮ ಮನೆಬಾಗಿಲಿಗೆ ಸಿಬ್ಬಂದಿಯನ್ನು ಕರೆಸಿ ಕೂಡ ಅರ್ಜಿ ಸಲ್ಲಿಸಬಹುದು.
ವಾಸಸ್ಥಳ ದೃಡೀಕರಣ ಪತ್ರ, ವಯಸ್ಸಿನ ದೃಢೀಕೃತ ದಾಖಲೆ, ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು, ಆಧಾರ್ ಕಾರ್ಡ್, ಫೋಟೋ, ವೋಟರ್ ಐಡಿ ಸೇರಿ ಹಲವು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದರೆ ಯಾವುದೇ ಬೇಧವಿಲ್ಲದೆ ನೀವು ಪಿಂಚಣಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಪಿಂಚಣಿ ಯೋಜನೆಗೆ ಯಾರೆಲ್ಲ ಅರ್ಹರು?
ಯಾರಿಗೆ ಯಾವ ಮಾನದಂಡ ಅನ್ವಯ?
60 ವರ್ಷ ದಾಟಿದರೆ ಪಿಂಚಣಿ ನಿಶ್ಚಿತವೇ?
60 ವರ್ಷ ಮೇಲ್ಪಟ್ಟವರು ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು. ಫಲಾನುಭವಿಗಳ ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 32 ಸಾವಿರಕ್ಕಿಂತ ಕಡಿಮೆ ಇರಬೇಕು. ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಈ ಮೇಲಿನ ಬೇರೆ ಯಾವುದೇ ಯೋಜನೆಯ ಫಲಾನುಭವಿಗಾಳಾಗದೆ ಇದ್ದಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಹಾಗಾಗಿ, ಹಿರಿಯ ನಾಗರಿಕರು ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯವನ್ನು ಪಡೆಯಬಹುದಾಗಿದೆ. ಆ ಮೂಲಕ, ಮಕ್ಕಳ ಎದುರು ಪ್ರತಿಯೊಂದಕ್ಕೂ ಕೈಚಾಚುವ ಮುಜುಗರದಿಂದ ತಪ್ಪಿಸಿಕೊಳ್ಳಬಹುದಾಗಿದೆ.