ಇಂದೋರ್: ಮೇಘಾಲಯದಲ್ಲಿ ಹನಿಮೂನ್ಗೆ ತೆರಳಿದ್ದ ಇಂದೋರ್ನ ದಂಪತಿಯ ನಾಪತ್ತೆ ಪ್ರಕರಣಕ್ಕೆ ಈಗ ದಿಗ್ಭ್ರಮೆಗೊಳಿಸುವ ಟ್ವಿಸ್ಟ್ ಸಿಕ್ಕಿದ್ದು, ಹೊಸ ಬೆಳವಣಿಗೆಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಪತಿಯ ಕೊಲೆಯ ಆರೋಪದಲ್ಲಿ ಪತ್ನಿ ಬಂಧಿತಳಾಗಿದ್ದರೂ, ಮೇಘಾಲಯ ಪೊಲೀಸರ ಹೇಳಿಕೆ, ಆಕೆ ಸೆರೆಸಿಕ್ಕ ಗಾಜಿಪುರದ ಢಾಬಾ ಮಾಲೀಕನ ಹೇಳಿಕೆ, ಆಕೆಯ ತಂದೆಯ ಹೇಳಿಕೆಗಳೆಲ್ಲವೂ ಪ್ರಕರಣವನ್ನು ಮತ್ತಷ್ಟು ಗೋಜಲಾಗಿಸಿದೆ.
ಮದುವೆಯಾದ ಕೇವಲ 9 ದಿನಗಳಲ್ಲೇ ಮಧುಚಂದ್ರಕ್ಕೆಂದು ಹೋಗಿದ್ದ ರಾಜಾ ರಘುವಂಶಿ ಹಾಗೂ ಸೋನಮ್ ರಘುವಂಶಿ ನಾಪತ್ತೆ ಪ್ರಕರಣವು ಮೇಘಾಲಯದ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟಿತ್ತು. ರಾಜಾ ರಘುವಂಶಿಯವರ ಶವ ಒಂದು ಕಂದಕದಲ್ಲಿ ಪತ್ತೆಯಾದರೂ, ಪತ್ನಿ ಸೋನಮ್ ಎಲ್ಲಿದ್ದಾರೆಂದೇ ಪತ್ತೆಯಾಗದ ಕಾರಣ ಈ ಪ್ರಕರಣ ಮತ್ತಷ್ಟು ನಿಗೂಢವಾಗಿತ್ತು.
ಈಗ “ನಾಪತ್ತೆಯಾಗಿದ್ದ” ಪತ್ನಿ ಸೋನಮ್ ರಘುವಂಶಿಯವರೇ ಪತಿಯನ್ನು ಸುಪಾರಿ ನೀಡಿ ಕೊಲ್ಲಿಸಿರುವ ವಿಚಾರ ಬಹಿರಂಗವಾಗಿದ್ದು, ಅವರನ್ನು ಉತ್ತರ ಪ್ರದೇಶದ ಗಾಜಿಪುರದಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿದೆ. ಬೇರೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಸೋನಮ್ ಅವರು ತನ್ನ ಬಾಯ್ ಫ್ರೆಂಡ್ ಜತೆಗೆ ಸೇರಿ ಪತಿಯನ್ನು ಕೊಲ್ಲಿಸಿದ್ದಾರೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಕಡೆ, ಭಾನುವಾರ ರಾತ್ರಿ ನಡೆದ ಘಟನೆಯನ್ನು ಗಾಜಿಪುರದ ಢಾಬಾ ಮಾಲೀಕ ಸಾಹಿಲ್ ಯಾದವ್ ಬಿಚ್ಚಿಟ್ಟಿದ್ದಾರೆ. “ನಿನ್ನೆ ರಾತ್ರಿ ಆಕೆ ನಮ್ಮ ಢಾಬಾಗೆ ಬಂದಳು. ಬಹಳಷ್ಟು ಸುಸ್ತಾದಂತೆ ಕಂಡುಬರುತ್ತಿದ್ದಳು. ಒಂದೇ ಸಮನೆ ಅಳುತ್ತಿದ್ದಳು. ನನಗೆ ಮನಗೆ ಫೋನ್ ಕರೆ ಮಾಡಬೇಕು. ಫೋನ್ ಕೊಡುತ್ತೀರಾ ಎಂದು ಪ್ರಶ್ನಿಸಿದಳು. ನಾನು ನನ್ನ ಮೊಬೈಲ್ ಕೊಟ್ಟು, ಕುರ್ಚಿಯನ್ನು ತೋರಿ ಅಲ್ಲಿ ಕುಳಿತುಕೊಳ್ಳಿ ಎಂದು ಹೇಳಿದೆ. ಆಕೆಗೆ ಏನಾದರೂ ಸಮಸ್ಯೆಯಾಗಿರಬಹುದು ಅಂದುಕೊಂಡು ಕೂಡಲೇ ಮತ್ತೊಂದು ಫೋನ್ ನಿಂದ ಪೊಲೀಸರಿಗೆ ಕರೆ ಮಾಡಿದೆ. ಪೊಲೀಸರು ಅಲ್ಲಿಗೆ ಬಂದು ನೇರವಾಗಿ ಆಕೆಯನ್ನು ಬಂಧಿಸಿ ಕರೆದೊಯ್ದರು” ಎಂದು ಹೇಳಿದ್ದಾರೆ.
ಇನ್ನು, ಸೋನಮ್ ಫೋನ್ ಕರೆ ಮಾಡಿರುವುದು ನಿಜ ಎಂದು ಆಕೆಯ ತಂದೆಯೂ ಒಪ್ಪಿಕೊಂಡಿದ್ದಾರೆ. ಆದರೆ, ಈ ಕೊಲೆಯನ್ನು ನನ್ನ ಮಗಳು ಮಾಡಿಸಿಲ್ಲ ಎಂದು ವಾದಿಸಿರುವ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ನನ್ನ ಮಗಳು ರಸ್ತೆಬದಿಯ ಢಾಬಾವೊಂದನ್ನು ತಲುಪಿ, ಅಲ್ಲಿಂದ ಅಳುತ್ತಲೇ ನಮಗೆ ಕರೆ ಮಾಡಿದಳು. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ.
ಆಕೆಯೇ ನಮ್ಮ ಮುಂದೆ ಬಂದು ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನನ್ನ ಮಗಳು ಯಾವುದೇ ಕೊಲೆ ಮಾಡಿಸಿಲ್ಲ. ಅವಳು ಯಾಕಾದರೂ ತನ್ನ ಗಂಡನನ್ನು ಕೊಲ್ಲಿಸುತ್ತಾಳೆ, ಹಾಗಿದ್ದರೆ ಆಕೆ ಯಾಕೆ ಹನಿಮೂನ್ ಗೆ ಹೋಗುತ್ತಿದ್ದಳು, ಅವಳು ರಘುವಂಶಿಯನ್ನು ಒಪ್ಪಿಯೇ ಮದುವೆಯಾಗಿದ್ದಳು ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿಯವರು ಮೇ 11, 2025 ರಂದು ವಿವಾಹವಾಗಿದ್ದರು. ಒಂಬತ್ತು ದಿನಗಳ ಬಳಿಕ, ಮೇ 20 ರಂದು ಅವರು ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು, ಶಿಲ್ಲಾಂಗ್ನ ಸೋಹ್ರಾ (ಚೆರಾಪುಂಜಿ) ಪ್ರದೇಶದಲ್ಲಿ ದಂಪತಿ ನಾಪತ್ತೆಯಾದರು. ಜೂನ್ 2 ರಂದು ವೀ ಸಾವ್ಡಾಂಗ್ ಜಲಪಾತದ ಬಳಿಯ ಕಂದಕದಲ್ಲಿ ರಾಜಾ ಅವರ ಶವ ಪತ್ತೆಯಾಯಿತು. ಅವರ ದೇಹದಿಂದ ಚಿನ್ನದ ಉಂಗುರ ಮತ್ತು ಕೊರಳಿನ ಸರವು ಕಾಣೆಯಾಗಿತ್ತು, ಇದು ಕೊಲೆಯ ಶಂಕೆಗೆ ಕಾರಣವಾಗಿತ್ತು. ಆದರೆ, ಸೋನಮ್ ಮಾತ್ರ ಸಿಕ್ಕಿರಲಿಲ್ಲ.
ತನಿಖೆಯ ಪ್ರಗತಿ
ತನಿಖೆಯ ಸಂದರ್ಭದಲ್ಲಿ, ಜೂನ್ 3ರಂದು ರಕ್ತದ ಕಲೆಯಿಂದ ಕೂಡಿದ ಮಚ್ಚೊಂದು ಸಿಕ್ಕಿತ್ತು. ಇದನ್ನು ಬಳಸಿ ರಾಜಾರನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದರು. ಜೂನ್ 5 ರಂದು, ದಂಪತಿಯು ಧರಿಸಿದ್ದಂತಹ ಒಂದು ರೇನ್ಕೋಟ್ ಮಾವ್ಕ್ಮಾ ಗ್ರಾಮದಲ್ಲಿ ಸಿಕ್ಕಿತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೋನಮ್ ಇದೇ ರೀತಿಯ ರೇನ್ಕೋಟ್ ಧರಿಸಿದ್ದು ದೃಢಪಟ್ಟಿತ್ತು. ದಂಪತಿಯು ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಸೋಹ್ರಾರಿಮ್ನಲ್ಲಿ ಪತ್ತೆಯಾಗಿತ್ತು.
ಮೇಘಾಲಯದ ಸ್ಥಳೀಯ ಗೈಡ್ ಆಲ್ಬರ್ಟ್ ಪಿಡಿಯವರು ಮೇ 23ರಂದು ದಂಪತಿಯನ್ನು ಮೂವರು ಅಪರಿಚಿತ ಪುರುಷರೊಂದಿಗೆ ನೋಡಿದ್ದಾಗಿ ತಿಳಿಸಿದರು. ಈ ಮೂವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಇದರಿಂದ ಅವರು ಸ್ಥಳೀಯರಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಹೇಳಿದ್ದರು. ಈ ಸಾಕ್ಷ್ಯವು ತನಿಖೆಗೆ ನಿರ್ಣಾಯಕವಾಗಿ ಪರಿಣಮಿಸಿತು.

ಸೋನಮ್ನ ಬಂಧನ ಮತ್ತು ಆರೋಪಗಳು
ಸೋನಮ್ ರಘುವಂಶಿಯವರು ಜೂನ್ 8 ರಂದು ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಗಾಜಿಪುರದ ಒಂದು ರಸ್ತೆಬದಿಯ ಧಾಬಾದಲ್ಲಿ ಕಂಡುಬಂದಿದ್ದು, ಅಲ್ಲಿ ಅವರು ತಮ್ಮ ಸಹೋದರ ಗೋವಿಂದ್ಗೆ ಫೋನ್ ಮಾಡಿ ತಾವಿರುವ ಸ್ಥಳವನ್ನು ತಿಳಿಸಿದ್ದರು. ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡವು (SIT) ಮೂವರು ಆರೋಪಿಗಳನ್ನು ಬಂಧಿಸಿದೆ: ಒಬ್ಬನನ್ನು ಉತ್ತರ ಪ್ರದೇಶದಿಂದ, ಮತ್ತಿಬ್ಬರನ್ನು ಇಂದೋರ್ನಿಂದ ಬಂಧಿಸಲಾಗಿದೆ. ಆರೋಪಿಗಳನ್ನು ವಿಕ್ಕಿ ಠಾಕೂರ್, ಆಕಾಶ್, ಮತ್ತು ಆನಂದ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಸೋನಮ್ ರಘುವಂಶಿಯವರು ರಾಜ್ ಕುಶ್ವಾಹ ಎಂಬಾತನೊಂದಿಗೆ ವಿವಾಹಪೂರ್ವದಿಂದಲೂ ಸಂಬಂಧ ಹೊಂದಿದ್ದರು. ರಾಜ್ ಕುಶ್ವಾಹನೇ ಈ ಕೊಲೆಯ ಮಾಸ್ಟರ್ಮೈಂಡ್ ಎಂದು ಅಂದಾಜಿಸಲಾಗಿದೆ. ರಾಜಾ ರಘುವಂಶಿಯವರನ್ನು ತೊಡೆದುಹಾಕಲು ಈ ಇಬ್ಬರೂ ಒಟ್ಟಾಗಿ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮೇಘಾಲಯ ಸರ್ಕಾರದ ಪ್ರತಿಕ್ರಿಯೆ
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಈ ಪ್ರಕರಣದಲ್ಲಿ ತ್ವರಿತ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಏಳು ದಿನಗಳಲ್ಲಿ ಮೇಘಾಲಯ ಪೊಲೀಸರು ಈ ಕೇಸ್ನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ, ಸೋನಮ್ ಶರಣಾಗಿದ್ದಾಳೆ, ಮತ್ತು ಇನ್ನೊಬ್ಬ ಆರೋಪಿಯನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.