ಅಲಹಾಬಾದ್: ಕಳೆದ ಜನವರಿ 29ರಂದು ಪ್ರಯಾಗ್ರಾಜ್ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿತ ರಿಹಾರವನ್ನು ವಿತರಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.
ಉದಯ್ ಪ್ರತಾಪ್ ಸಿಂಗ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಳ್ ಸಿಂಗ್ ಮತ್ತು ಸಂದೀಪ್ ಜೈನ್ ಅವರ ಪೀಠವು, ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವು ಪರಿಹಾರವನ್ನು ಘೋಷಿಸಿದ ನಂತರ, ಅದನ್ನು ಸಕಾಲಿಕವಾಗಿ ಮತ್ತು ಘನತೆಯಿಂದ ವಿತರಿಸುವುದು ಅದರ “ಕರ್ತವ್ಯ” ಎಂದು ಹೇಳಿದೆ. ಜೊತೆಗೆ, ರಾಜ್ಯ-ನಡೆಸುವ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ಶವಪರೀಕ್ಷೆ (autopsy) ಅಥವಾ ಮರಣೋತ್ತರ ಪರೀಕ್ಷೆ (postmortem) ನಡೆಸದೇ ಕಾಲ್ತುಳಿತದ ಬಲಿಪಶುವೊಬ್ಬರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿರುವ ಬಗ್ಗೆಯೂ ನ್ಯಾಯಪೀಠ ಕಳವಳ ಹೊರಹಾಕಿದೆ.
“ಫೆಬ್ರವರಿ 5, 2025ರಂದು ರಾಜ್ಯ ಅಧಿಕಾರಿಗಳು ಅರ್ಜಿದಾರನ ಪತ್ನಿಯ ಶವವನ್ನು ಅವರ ಮಗನಿಗೆ ಹಸ್ತಾಂತರಿಸಿರುವುದು ಆಘಾತಕಾರಿ ವಿಚಾರ. ಅದಲ್ಲದೇ ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ ರಾಜ್ಯವು ಘೋಷಿಸಿದ ಪರಿಹಾರದ ಯಾವುದೇ ಭಾಗವನ್ನು ಅರ್ಜಿದಾರನಿಗೆ ನೀಡಿಲ್ಲ” ಎಂದು ಕೋರ್ಟ್ ತಿಳಿಸಿದೆ.

ಸರ್ಕಾರಿ ವಕೀಲರು ವಾದಿಸಿ ಅರ್ಜಿದಾರನು ಯಾವುದೇ ಹಕ್ಕನ್ನು ಮಂಡಿಸಿಲ್ಲವಾದ್ದರಿಂದ, ಇದನ್ನು ಪರಿಗಣಿಸುವ ಹಂತ ಇನ್ನೂ ಬಂದಿಲ್ಲ ಎಂದು ವಾದಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೋರ್ಟ್, “ನಿಮ್ಮ ಈ ನಿಲುವು ಒಪ್ಪತಕ್ಕದ್ದಲ್ಲ ಮತ್ತು ನಾಗರಿಕರ ಕಷ್ಟಕ್ಕೆ ನಿಮ್ಮ ಉದಾಸೀನತೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯವು ದುಃಖಿತ ಕುಟುಂಬಗಳಿಗೆ ಗರಿಷ್ಠ ಗೌರವ ಮತ್ತು ಘನತೆಯೊಂದಿಗೆ ಪರಿಹಾರವನ್ನು ಪಾವತಿಸುವುದು ಅದರ ಕರ್ತವ್ಯವಾಗಿತ್ತು” ಎಂದು ತಿಳಿಸಿದೆ.
“ರಾಜ್ಯವು ತನ್ನ ನಾಗರಿಕರ ರಕ್ಷಕ. ಅವರ ಜೀವನವನ್ನು ರಕ್ಷಿಸುವುದು ಮತ್ತು ತಪ್ಪಿಸಬಹುದಾದ ನಷ್ಟಗಳಿಂದ ಸುರಕ್ಷಿತವಾಗಿರಿಸುವುದು ಮಾತ್ರವಲ್ಲ, ಇಂತಹ ಅನಿರೀಕ್ಷಿತ ನಷ್ಟ ಸಂಭವಿಸಿದಾಗ ಪರಿಹಾರ ಮತ್ತು ಕಾಳಜಿಯನ್ನು ಒದಗಿಸುವ ಕರ್ತವ್ಯವೂ ಸರ್ಕಾರಕ್ಕಿದೆ. ಕುಂಭಮೇಳದ ನಿರ್ವಹಣೆಯು ರಾಜ್ಯ ಸರ್ಕಾರದ ಹೊಣೆಯಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದೂ ನ್ಯಾಯಪೀಠ ಹೇಳಿದೆ.
ಇದೇ ವೇಳೆ, ಯಾವ್ಯಾವ ವ್ಯಕ್ತಿಗಳಿಗೆ ಪರಿಹಾರ ನೀಡಬೇಕು, ಅದಕ್ಕೆ ಎಷ್ಟು ಮಂದಿ ಅರ್ಹರು, ಎಷ್ಟು ಮಂದಿಗೆ ಪರಿಹಾರ ಪಾವತಿ ಆಗಿದೆ, ಎಷ್ಟು ಬಾಕಿ ಇಳಿದಿದೆ ಎಂಬುದೂ ಸೇರಿದಂತೆ ಅರ್ಜಿದಾರರ ವಿವರಗಳು ಹಾಗೂ ಅವುಗಳ ವಿಲೇವಾರಿಯ ದಿನಾಂಕಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವಂತೆ ಅಧಿಕಾರಿಗಳುಗೆ ನ್ಯಾಯಪೀಠ ಆದೇಶಿಸಿತು. ಜನವರಿ 28 ರಿಂದ ಮಹಾಕುಂಭದ ಮುಕ್ತಾಯದವರೆಗೆ ಎಲ್ಲಾ ಮರಣಗಳ ಮತ್ತು ಬಲಿಪಶುಗಳ ವೈದ್ಯಕೀಯ ನಿರ್ವಹಣೆಯ ವಿವರಗಳನ್ನು ಬಹಿರಂಗಪಡಿಸುವಂತೆಯೂ ನಿರ್ದೇಶನ ನೀಡಿತು.
ಏನಿದು ಪ್ರಕರಣ?
ಅರ್ಜಿದಾರನ ಪತ್ನಿ ಕುಂಭಮೇಳದಲ್ಲಿ ಉಂಟಾಗಿದ್ದ ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು. ಆರಂಭದಲ್ಲಿ ಅವರು ಕಾಣೆಯಾಗಿದ್ದಾರೆ ಎಂದು ಭಾವಿಸಲಾಗಿತ್ತು. ನಂತರ ಫೆಬ್ರವರಿ 5 ರಂದು ಅವರು ಮೃತಪಟ್ಟಿರುವುದಾಗಿ ತಿಳಿಸಿ, ಪ್ರಯಾಗ್ರಾಜ್ನ ಮೋತಿಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಶವಾಗಾರದಿಂದ ಅವರ ಮೃತದೇಹವನ್ನು ಅವರ ಮಗನಿಗೆ ಹಸ್ತಾಂತರಿಸಲಾಯಿತು. ಆ ಹಂತದಲ್ಲಿ ತನಿಖಾ ವರದಿಯಾಗಲೀ ಅಥವಾ ಶವಪರೀಕ್ಷೆ/ಮರಣೋತ್ತರ ಪರೀಕ್ಷೆಯ ವರದಿಯನ್ನಾಗಲೀ ಸಿದ್ಧಪಡಿಸಿರಲಿಲ್ಲ.