ವಿಜಯ್ ಮಲ್ಯ….ಭಾರತದ ಮೋಸ್ಟ್ ವಾಂಟೆಡ್ ಆರ್ಥಿಕ ಚೋರ. ಲಕ್ಷಾಂತರ ಕೋಟಿ ಬ್ಯಾಂಕ್ ಬಾಕಿ ತೀರಿಸಬೇಕಿರುವ ಧೀರ. ಸದ್ಯ ಇಂಗ್ಲೆಂಡ್ ನಲ್ಲಿರುವ ಮಲ್ಯ, ಇದೇ ಮೊದಲ ಬಾರಿ ತಮ್ಮ ವಿರುದ್ಧದ ಆರೋಪಗಳು, ಟೀಕೆಗಳ ಬಗ್ಗೆ ಇಂಚಿಂಚೂ ಉತ್ತರ ನೀಡಿದ್ದಾರೆ. ಕಿಂಗ್ ಫಿಶರ್ ಎಂಬ ಬಹುದೊಡ್ಡ ಸಾಮ್ರಾಜ್ಯದ ಉದಯ ಮತ್ತು ತಮ್ಮ ಪಾರುಪತ್ಯದ ಯುಗಾಂತ್ಯದ ಬಗ್ಗೆ ಮಲ್ಯ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧದ ಆರ್ಥಿಕ ಆರೋಪಗಳ ಬಗ್ಗೆ ಮಾತನಾಡಿರುವ ಮಲ್ಯ, ದೇಶದ ರಾಜಕೀಯ, ಕ್ರೀಡೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಪ್ರಣಬ್ ಮುಖರ್ಜಿ ಮುಂದೆ ನಿಂತು ಬ್ಯಾಂಕ್ ಸಾಲ ಕೊಡ್ಸಿದ್ರು
2002 -03ರಲ್ಲಿ ವಿಮಾನ ಯಾನ ಕ್ಷೇತ್ರ ಪ್ರವೇಶಿಸುವ ಕನಸು ಕಂಡಿದ್ದೆ. ಮುಂಬೈನ ದಮಾನಿ ಸಹೋದರರು ಕೊಟ್ಟ ಸಲಹೆಯಂತೆ ಭಾರತದ ಭವಿಷ್ಯದ ವಿಮಾನ ಯಾನ ಸಂಸ್ಥೆ ಕಟ್ಟಲೆಂದೇ ಕಿಂಗ್ ಫಿಶರ್ ಏರ್ ಲೈನ್ಸ್ ಆರಂಭಿಸಿದ್ದೆ. ಭಾರತೀಯರಿಗೆ ಅಗ್ಗದ ಬೆಲೆಯಲ್ಲಿ ಐಷಾರಾಮಿ ವಿಮಾನಯಾನ ಅನುಭವ ನೀಡಬೇಕೆನ್ನುವ ಮಹದಾಸೆ ಇತ್ತು. ಹೀಗಾಗಿಯೇ ಸಂಸ್ಥೆ ಆರಂಭಿಸಿದ್ದೆ. ಆದರೆ, ಆರಂಭದಲ್ಲಿ ಸಿಕ್ಕ ಯಶಸ್ಸು ಮುಂದೆ ಸಂಸ್ಥೆ ಬಿಳಿಯಾನೆಯಾಗಿಸುತ್ತಾ ಸಾಗಿತು. ಹೀಗಾಗಿ ಅಂದಿನ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಸಂಸ್ಥೆ ಉಳಿವಿಗೆ ಕೆಲ ಮಾರ್ಗಗಳ ಸಂಚಾರ ಮತ್ತು ಸಿಬ್ಬಂದಿಯನ್ನು ವಜಾ ಮಾಡುತ್ತೇನೆ ಅಂದಿದ್ದೆ. ಆದರೆ, ಅವತ್ತು ಪ್ರಣಬ್ ಮುಖರ್ಜಿ, ಈಗಿನ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಈ ರೀತಿ ಕೆಲಸದಿಂದ ವಜಾ ಮಾಡುವುದು ದೊಡ್ಡ ಹಿನ್ನಡೆಯಾಗುತ್ತೆ. ಆರ್ಥಿಕ ಸಂಕಷ್ಟವಿದ್ದರೆ ಬ್ಯಾಂಕ್ ಸಾಲ ಕೊಡಿಸ್ತೀವಿ ಅಂತಾ ನೆರವು ಕೊಡಿಸಿದರು ಎಂದು ಮಲ್ಯ ಹೇಳಿದ್ದಾರೆ.

ಅಬ್ಬರಿಸಿ ಬೊಬ್ಬಿರಿದ್ರೆ ಸುಳ್ಳು, ಸತ್ಯವಾಗುವುದಿಲ್ಲ
ತಮ್ಮ ವಿರುದ್ಧ ಭಾರತದಲ್ಲಿ ನಿರಂತರವಾಗಿ ಅಪಪ್ರಚಾರ ನಡೆದಿದೆ. ಕೆಲವರು ಸುಳ್ಳನ್ನೇ ಸತ್ಯವಾಗಿಸುವ ಹುನ್ನಾರದಲ್ಲಿ ನಿರತರಾಗಿದ್ದಾರೆ. ಉದ್ದೇಶ ಪೂರ್ವಕ ಸುಸ್ತೀದಾರ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಕಳ್ಳ, ಚೋರ, ಖದೀಮ, ಪರಾರಿಯಾದವನು ಅಂತಾ ಬಿಂಬಿಸುತ್ತಿದ್ದಾರೆ. ಭಾರತದ ಕೆಲ ಮಾಧ್ಯಮಗಳು ನನ್ನ ವಿರುದ್ಧ ವಿನಾಕಾರಣ ಷಡ್ಯಂತ್ರ ಮಾಡಿ ದೇಶವಾಸಿಗಳಿಗೆ ಇಲ್ಲ ಸಲ್ಲದ ತಪ್ಪು ಗ್ರಹಿಕೆ ಆವರಿಸುವಂತೆ ಮಾಡಿದ್ದಾರೆ ಅಂತಲೂ ಮಲ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ನನ್ನ ಭರವಸೆಯನ್ನು ಎಂದಿಗೂ ಹುಸಿಯಾಗಿಸಲಿಲ್ಲ
ಇನ್ನು ಕ್ರಿಕೆಟ್ ಬಗೆಗಿನ ತಮ್ಮ ಪ್ರೇಮವನ್ನು ಪ್ರಸ್ತಾಪಿಸಿರೋ ಮಲ್ಯ, ಆರ್ ಸಿಬಿ ಹುಟ್ಟಿದ ಪರಿಯನ್ನು ವಿವರಿಸಿದ್ದಾರೆ. ಕರ್ನಾಟಕ ಕ್ರಿಕೆಟ್ ಬೋರ್ಡ್ ನ ಪ್ರತಿನಿಧಿಯಾಗಿ ನಾನು ಅವತ್ತು ಬಿಸಿಸಿಐ ಕಚೇರಿಯಲ್ಲಿ ಕುಳಿತಿದ್ದೆ. ಅಂದು, ಲಲಿತ್ ಮೋದಿ, ಐಪಿಎಲ್ ಕನಸನ್ನು ವಿವರಿಸಿದ್ರು. ನಿಜಕ್ಕೂ ಅದು ಭವಿಷ್ಯದ ದೂರದೃಷ್ಟಿತ್ವದ ಕನಸಾಗಿತ್ತು.
ಇದಾಗ ಬಳಿಕ ನಾನು ಲಲಿತ್ ಹಲವು ಬಾರಿ ಈ ಕನಸಿನ ಬಗ್ಗೆ ಮಾತನಾಡಿದ್ವಿ. ಅದಾದ ಬಳಿಕವೇ ಅಂದಿಗೆ 112 ಮಿಲಿಯನ್ ಡಾಲರ್ ಅಂದಾಜು 600ರಿಂದ 700 ಕೋಟಿ ಹೂಡಿಕೆ ಮಾಡಿ ನಾನು ಆರ್ ಸಿಬಿ ಖರೀದಿಸಿದ್ದೆ. ಇನ್ನು ತಂಡದ ಆಯ್ಕೆ ನಡೆದಾಗ ಆಗಷ್ಟೇ ಅಂಡರ್ 19 ವರ್ಡ್ ಕಪ್ ಮುಗಿದಿತ್ತು. ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಣ್ಣಲ್ಲಿ ನಾನು ಉಜ್ವಲ ಭವಿಷ್ಯವನ್ನು ಗ್ರಹಿಸಿದ್ದೆ. ಹೀಗಾಗಿಯೇ ಯುವ ಕೊಹ್ಲಿಗೆ ಅಂದಿಗೇ 20 ಲಕ್ಷ ರೂ. ನೀಡಿ ತಂಡ ಸೇರ್ಪಡೆ ಮಾಡಿಕೊಂಡಿದ್ದೆ. ಆ ನನ್ನ ಕನಸನ್ನ 18 ವರ್ಷವಾದರೂ ಕೊಹ್ಲಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಹಾಗಂತಾ ಈ ಆರ್ ಸಿಬಿ ಖರೀದಿ ಹಿಂದೆ ತನ್ನ ಯುಬಿ ಕಂಪನಿಯ ಬ್ರಾಂಡ್ ನ್ನು ಕ್ರೀಡೆ ಮೂಲಕ ಯುವಕರನ್ನು ಸೆಳೆಯುವುದೇ ಆಗಿತ್ತು. ಬ್ರಾಂಡ್ ಮೌಲ್ಯವನ್ನು ವೃದ್ಧಿಸಿಕೊಳ್ಳುವ ದೊಡ್ಡ ಉಮೇದು ಅಂದು ನನಗಿತ್ತು.

ಈ ನಾಲ್ವರು ಆಟಗಾರರಿದ್ದರೆ ಆರ್ ಸಿಬಿ ಕಪ್ ಗೆಲ್ಲುತ್ತೆ
ಐಪಿಎಲ್ ಆರಂಭವಾದಾಗ ಕ್ರಿಕೆಟನ್ನೇ ದೇವರೆಂದು ಆರಾಧಿಸುವ ದೇಶದಲ್ಲಿ ಕ್ರಾಂತಿ ಆಗುತ್ತೆ ಅನ್ನೋದು ನನ್ನ ನಂಬಿಕೆಯಾಗಿತ್ತು. ಹೀಗಾಗಿಯೇ ಇದರ ಮೇಲೆ ದೊಡ್ಡ ಮಟ್ಟದ ಹೂಡಿಕೆಗೂ ತೀರ್ಮಾನಿಸಿದ್ದೆ. ಕ್ರೀಡೆ ಮೂಲಕ ನಮ್ಮ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯೋ ಕನಸು ನನ್ನದಾಗಿತ್ತು. ಹೀಗಾಗಿಯೇ 2008ರಲ್ಲಿ ಐಪಿಎಲ್ ನ ನಾಲ್ಕು ತಂಡಗಳನ್ನು ಖರೀದಿಸಲು ನಾನು ಬಿಡ್ ಮಾಡಿದ್ದೆ. ಹಾಗಂತಾ ಮೂರು ತಂಡಗಳು ನನ್ನ ಪಾಲಾಗಿದ್ದವು. ಮುಂಬೈ ಮಾತ್ರ ಅಲ್ಪ ಮೊತ್ತದಲ್ಲಿ ನನ್ನ ಕೈತಪ್ಪಿ ಅಂಬಾನಿ ಪಾಲಾಗಿತ್ತು. ಬಟ್ ಅಂತಿಮವಾಗಿ ನಾನು ನನ್ನ ಹೆಮ್ಮೆ ಬೆಂಗಳೂರನ್ನು ಮಾತ್ರ ಉಳಿಸಿಕೊಂಡೆ ಅಂತಾ ಮಲ್ಯ ಅಂದಿನ ಘಟನೆಯನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲಾ, ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕೆ.ಎಲ್. ರಾಹುಲ್ ರನ್ನು ಆರ್ ಸಿಬಿಗೆ ಸೇರ್ಪಡೆ ಮಾಡಿಕೊಳ್ತೀನಿ ಎಂದಿದ್ದಾರೆ. ಈ ಆಟಗಾರರಿದ್ದರೆ ಸಾಕು ಆರ್ ಸಿಬಿ ಕಪ್ ಗೆಲ್ಲುವುದು ನಿಶ್ಚಿತ ಅಂತಲೂ ಮಲ್ಯ ಹೇಳಿದ್ದಾರೆ.
- ಪ್ರತೀಕ್ ಆಲೂರ್