ಬೀಸೋ ದೊಣ್ಣೆಯಿಂದ ಪಾರಾದ್ರೆ ನೂರು ವರ್ಷ ಆಯಸ್ಸಂತೆ. ಹೌದು! ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ್ದೂ ಯಾಕೋ ಇದೇ ಧೋರಣೆ ಎನ್ನುವಂತೆ ಕಾಣುತ್ತಿದೆ. ಆರ್ ಸಿಬಿ ಮಹಾ ದುರಂತದ ಕಪ್ಪು ಚುಕ್ಕೆ ಸರ್ಕಾರಕ್ಕೀಗ ಅಂಟಿಯಾಗಿದೆ. ಇದರಿಂದ ಪಾರಾಗುವ ನಿಟ್ಟಿನಲ್ಲಿ ಸಿದ್ದು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಆಕ್ಷೇಪಾರ್ಹವೇ ಸರಿ. 11 ಮಂದಿಯನ್ನು ಬಲಿ ಪಡೆದ ಕಾಲ್ತುಳಿತಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಹೊಣೆಯಾಗಿಸಲಾಗಿದೆ. ಅಚ್ಚರಿಯಾದರೂ ಇದು ಸತ್ಯ. ಕಮಿಷನರ್ ಬಿ. ದಯಾನಂದ್ ರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಹಾಗಿದ್ದರೆ ಇದು ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ ಅಲ್ದೇ ಇನ್ನೇನು?
ನಿಮ್ಮ ಮಕ್ಕಳು, ಮೊಮ್ಮಕಳ ಫೋಟೋ ಶೂಟ್ ಗೆ ಕಾರ್ಯಕ್ರಮವಾ…?
ವಿಧಾನಸೌಧ ಆವರಣದಲ್ಲಿ ನಡೆದಿದ್ದ ಆರ್ ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮ ನಿಜಕ್ಕೂ ಸರ್ಕಾರಿ ಕಾರ್ಯಕ್ರಮವಾ ಅಥವಾ ಖಾಸಗಿ ಕಾರ್ಯಕ್ರಮವಾ. ನಿಜಕ್ಕೂ ಸಿಎಂ ಸಿದ್ದರಾಮಯ್ಯನವರೇ ಈ ಪ್ರಶ್ನೆಗೆ ಉತ್ತರಿಸಿ. ಸರ್ಕಾರಿ ಕಾರ್ಯಕ್ರಮವೇ ಅನ್ನೋದಾದರೆ, ನಿಮ್ಮ ಮೊಮ್ಮಗ, ಜಮೀರ್ ಪುತ್ರ, ರಿಜ್ವಾನ್ ಅರ್ಷದ್ ಪುತ್ರನಿಗೆ ಈ ವೇದಿಕೆಯಲ್ಲಿ ಏನು ಕೆಲಸ. ಇಲ್ವಾ ಇದು ಖಾಸಗಿ ಕಾರ್ಯಕ್ರಮ ಅಂತಾ ನೀವು ಹೇಳೋದೇ ಆದರೆ, ಅದನ್ನು ವಿಧಾನಸೌಧದಲ್ಲಿ ಆಚರಿಸುವ ಪುರುಷಾರ್ಥ ಯಾರಿಗಿತ್ತು.
ಹಾಗಂತಾ ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ, ಒಂದು ಕಾರ್ಯಕ್ರಮದ ನೀಲನಕ್ಷೆ ರೂಪಿಸಿದೆ ಆಯೋಜಿಸಲು ಸಮ್ಮತಿಸಿದ್ದು ನಿಮ್ಮ ಸರ್ಕಾರ. ಪೂರ್ವಾಪರ ಯೋಚಿಸದೆ, ಅಭಿಮಾನಿಗಳ ಸುನಾಮಿಯನ್ನು ಅಂದಾಜಿಸದೆ ಕುರುಡಾಗಿ ಕಾರ್ಯಕ್ರಮ ರೂಪಿಸಿದ್ದು ನಿಮ್ಮ ಸರ್ಕಾರ. ಹಾಗಂತಾ ಅವತ್ತು ಉಸಿರುಗಟ್ಟಿ ಬಳಲುತ್ತಿದ್ದ ಮಕ್ಕಳನ್ನು ಆರೈಕೆ ಮಾಡಿ, ತುರ್ತು ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದ್ದು ಬೆಂಗಳೂರು ಪೊಲೀಸರು. ಆದರೆ, ಅದೇ ಇಲಾಖೆಗೆ ನೀವೀಗ ಬೆಲ್ಟ್ ಟ್ರೀಟ್ ಮೆಂಟ್ ನೀಡಿದ್ದು ಎಷ್ಟು ಸೂಕ್ತ?
ಇತಿಹಾಸದಲ್ಲೇ ಮೊದಲ ಬಾರಿ ಕಮಿಷನರ್ ಅಮಾನತು
ಇತಿಹಾಸದಲ್ಲೇ ಇದೇ ಮೊದಲ ಬಾರಿ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಆಯುಕ್ತರನ್ನು ಅಮಾನತಿನ ಶಿಕ್ಷೆಗೆ ಒಳಪಡಿಸಿ, ಸಿದ್ದು ಸರ್ಕಾರ ಸೇಫ್ ಆಗುವ ಯತ್ನ ಮಾಡಿದೆ. ಕಮಿಷನರ್ ದಯಾನಂದ್ ಜೊತೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್, ಕಾರ್ಯಕ್ರಮ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆ ಹೊಣೆ ಹೊತ್ತಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಿಭಾಗದ ವಿಕಾಸ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಆರ್ ಸಿಬಿ ಹಾಗೂ ಡಿಎನ್ ಎ ಇವೆಂಟ್ ಮ್ಯಾನೇಜ್ ಮೆಂಟ್ ಪ್ರೆವೇಟ್ ಲಿಮಿಟೆಡ್ ಪ್ರತಿನಿಧಿಗಳನ್ನು ಕೂಡಲೇ ಬಂಧಿಸುವಂತೆ ಸೂಚಿಸಲಾಗಿದೆ.
ತನಿಖೆಗೆ ಅಯೋಗ ರಚಿಸಿದ ಸಿದ್ದರಾಮಯ್ಯ ಸಾರಥ್ಯದ ಸರ್ಕಾರ
ಇನ್ನು 11 ಅಭಿಮಾನಿಗಳ ಸಾವಿನ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲೇ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಲಾಗಿದೆ. ಸರ್ಕಾರದ ಹಠಮಾರಿ ಧೋರಣೆಯಿಂದಲೇ ಎರಡೆರೆಡು ಕಡೆ ಕಾರ್ಯಕ್ರಮ ಆಯೋಜಿಸಿದ್ದು, ಗುಟ್ಟಾಗೇನು ಉಳಿದಿಲ್ಲ.
ಸಾಲದ್ದಕ್ಕೆ ಈ ಕಾರ್ಯಕ್ರಮವನ್ನು ಇಷ್ಟು ತರಾತುರಿಯಲ್ಲಿ ಹಮ್ಮಿಕೊಳ್ಳುವುದು ಬೇಡ ಅನ್ನೋ ಅಧಿಕಾರಿಗಳ ಸಲಹೆಯನ್ನು ಗಾಳಿಗೆ ತೂರಿದ್ದೂ ನಿಜ. ಈ ಮೂಲಕ 11 ಅಮಾಯಕ ಜೀವಗಳನ್ನು ಬಲಿ ಪಡೆದ ಸರ್ಕಾರ ತನ್ನ ತಪ್ಪನ್ನ ಅಧಿಕಾರಿಗಳ ಮೇಲೆ ಹೇರಿ ಪಾರಾಗುವ ಇರಾದೆಯಲ್ಲಿದೆ. ಆದರೆ, ನಿಜಕ್ಕೂ ಈ 11 ಮಂದಿಯ ಸಾವಿಗೆ ಅಸಲಿಗೆ ಹೊಣೆಗಾರರು ಯಾರು ಅನ್ನೋದು ಸಮಸ್ತ ಕರುನಾಡಿಗೆ ಗೊತ್ತಿರುವ ಸತ್ಯ.