ನವದೆಹಲಿ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ, ಭಾರತ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆಗಳು ನಿರೀಕ್ಷಿತವಾಗಿವೆ. ಈ ಹಿನ್ನೆಲೆಯಲ್ಲಿ, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕರುಣ್ ನಾಯರ್ಗೆ (Karun Nair) ಅವಕಾಶ ಸಿಗುವ ಸಾಧ್ಯತೆಗಳ ಬಗ್ಗೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಸುಳಿವು ನೀಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಆರಂಭವಾಗಲಿದೆ. ಈ ಪ್ರಮುಖ ಸರಣಿಗಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಕಳೆದ ತಿಂಗಳು 18 ಸದಸ್ಯರ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಕರುಣ್ ನಾಯರ್ಗೂ ಅವಕಾಶ ನೀಡಲಾಗಿದ್ದು, ಇದು ಏಳು ವರ್ಷಗಳ ನಂತರ ಅವರು ಟೆಸ್ಟ್ ತಂಡಕ್ಕೆ ಮರಳುವ ಸಾಧ್ಯತೆಯನ್ನು ಹೆಚ್ಚಿಸಿದೆ.
ದೇಶಿ ಕ್ರಿಕೆಟ್ಗೆ ಗಂಭೀರ್ ಆದ್ಯತೆ
ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ದೇಶಿ ಕ್ರಿಕೆಟ್ನ ಮಹತ್ವವನ್ನು ಒತ್ತಿ ಹೇಳಿದರು. “ನಮ್ಮ ದೇಶಿ ಕ್ರಿಕೆಟ್ ಅದ್ಭುತವಾಗಿದೆ ಮತ್ತು ಭವಿಷ್ಯದಲ್ಲಿಯೂ ಅದರ ಶ್ರೇಷ್ಠತೆ ಮುಂದುವರಿಯಲಿದೆ. ದೇಶಿ ಕ್ರಿಕೆಟ್ ಆಡುತ್ತಿರುವ ಎಲ್ಲಾ ಯುವ ಆಟಗಾರರಿಗೂ ಇದರ ಮಹತ್ವದ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರು ದೇಶಿ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದರೆ, ರಾಷ್ಟ್ರೀಯ ತಂಡದ ಬಾಗಿಲು ಎಂದಿಗೂ ಮುಚ್ಚುವುದಿಲ್ಲ,” ಎಂದು ಗಂಭೀರ್ ತಿಳಿಸಿದ್ದಾರೆ.
ದ್ವಿಶತಕ ಸಿಡಿಸಿ ಗಮನ ಸೆಳೆದ ಕರುಣ್ ನಾಯರ್
ಕಳೆದ ತಿಂಗಳ ಅಂತ್ಯದಲ್ಲಿ, ಕರುಣ್ ನಾಯರ್ ಭಾರತ ‘ಎ’ ತಂಡದೊಂದಿಗೆ ಇಂಗ್ಲೆಂಡ್ಗೆ ತೆರಳಿದ್ದರು. ಅಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕರುಣ್ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನವು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಗಮನ ಸೆಳೆದಿದೆ.
“ಕೌಂಟಿ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿರುವ ಕರುಣ್ ನಾಯರ್ ಅವರನ್ನು ತಂಡದಲ್ಲಿ ಹೊಂದಿರುವುದು ಒಳ್ಳೆಯ ಸಂಗತಿ. ಅವರು ಭಾರತ ‘ಎ’ ಪರ ದ್ವಿಶತಕ ಸಿಡಿಸಿದ್ದಾರೆ ಹಾಗೂ ಅಲ್ಲಿನ ಕಂಡೀಷನ್ಸ್ನಲ್ಲಿ ಸಾಕಷ್ಟು ರನ್ಗಳನ್ನು ಕಲೆ ಹಾಕಿದ್ದಾರೆ. ಇಂಗ್ಲೆಂಡ್ನಂತಹ ಒಳ್ಳೆಯ ಪ್ರವಾಸಗಳಲ್ಲಿ ಕರುಣ್ ನಾಯರ್ ಅವರಂತಹ ಆಟಗಾರರು ತಂಡದಲ್ಲಿ ಇರುವುದು ಒಳ್ಳೆಯದು,” ಎಂದು ಗೌತಮ್ ಗಂಭೀರ್ ಹೇಳಿದರು.
“ಅವರ (ಕರುಣ್) ಅನುಭವ ತಂಡಕ್ಕೆ ಲಾಭವನ್ನು ನೀಡಲಿದೆ. ಅವರು ಈ ಪ್ರವಾಸದಲ್ಲಿ ಉತ್ತಮ ಪ್ರದರ್ಶನವನ್ನು ತೋರಲಿದ್ದಾರೆಂಬ ಬಗ್ಗೆ ವಿಶ್ವಾಸವಿದೆ,” ಎಂದು ಹೆಡ್ ಕೋಚ್ ಹೇಳಿದರು. ಜೊತೆಗೆ, “ಎಲ್ಲದಕ್ಕಿಂತ ಮುಖ್ಯವಾಗಿ, ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಟಗಾರನನ್ನು ನಿರ್ಧರಿಸಲು ಸಾಧ್ಯವಿಲ್ಲ. ಯಾರೆಲ್ಲಾ ಆಟಗಾರರು ದೇಶಿ ಕ್ರಿಕೆಟ್ನಲ್ಲಿ ರನ್ ಗಳಿಸಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶವನ್ನು ನೀಡಲಾಗುತ್ತದೆ,” ಎಂದು ಭಾರತ ತಂಡದ ಹೆಡ್ ಕೋಚ್ ಸ್ಪಷ್ಟಪಡಿಸಿದ್ದಾರೆ.
ಬೆಳವಣಿಗೆಯಿಂದಾಗಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕರುಣ್ ನಾಯರ್ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಉತ್ತಮ ಅವಕಾಶ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.