ಟೋಕಿಯೋ: ಕಚೇರಿ ಕೆಲಸ, ಸಭೆ, ಪ್ರವಾಸ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಜಪಾನ್ಗೆ ತೆರಳಲು ಎಲ್ಲ ಸಿದ್ಧತೆಗಳನ್ನೂ ನಡೆಸಿದ್ದ ಅನೇಕರು ಏಕಾಏಕಿ ತಮ್ಮ ಜಪಾನ್ ಪ್ರವಾಸವನ್ನು ರದ್ದುಗೊಳಿಸಲು ಆರಂಭಿಸಿದ್ದಾರೆ. ಜುಲೈ ತಿಂಗಳ ಪ್ರವಾಸವನ್ನು ಬಹುತೇಕ ಮಂದಿ ಕ್ಯಾನ್ಸಲ್ ಮಾಡಿ, ನಿಟ್ಟುಸಿರು ಬಿಡುತ್ತಿದ್ದಾರೆ.
ಅರೇ, ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೀರಾ? ಕಾರಣ ಇಷ್ಟೇ.

ಕಾಲಜ್ಞಾನಿ ಬಾಬಾ ವಂಗಾ ಅವರಂತೆಯೇ ‘ನ್ಯೂ ಬಾಬಾ ವಂಗಾ’ ಎಂದು ಕರೆಸಿಕೊಂಡಿರುವ ಜಪಾನ್ನ ಮಾಂಗಾ ಕಲಾವಿದೆ ರಿಯೋ ತತ್ಸುಕಿ ಅವರು ನುಡಿದಿರುವ ಜುಲೈ ತಿಂಗಳ ಭವಿಷ್ಯವಾಣಿಯೇ ಇದಕ್ಕೆ ಕಾರಣ.
ಜುಲೈ 2025ರಲ್ಲಿ ಜಪಾನ್ನಲ್ಲಿ ಭಾರೀ ಸುನಾಮಿ ಸಂಭವಿಸಲಿದೆ ಎಂದು ರಿಯೋ ತತ್ಸುಕಿ ಭವಿಷ್ಯವಾಣಿ ನುಡಿದಿದ್ದಾರೆ. ಈ ಭವಿಷ್ಯವಾಣಿಯಿಂದಾಗಿ ಪ್ರವಾಸಿಗರಲ್ಲಿ ಭಯ ಉಂಟಾಗಿದ್ದು, ಜಪಾನ್ಗೆ ಪ್ರಯಾಣ ರದ್ದುಗೊಳಿಸುವವರ ಸಂಖ್ಯೆ ಹೆಚ್ಚಾಗಿದೆ. ತತ್ಸುಕಿಯವರ ‘ದಿ ಫ್ಯೂಚರ್ ಐ ಸಾ’ ಎಂಬ ಮಾಂಗಾ ಪುಸ್ತಕದಲ್ಲಿ ಜುಲೈ 5, 2025 ರಂದು ಜಪಾನ್ ಮತ್ತು ಫಿಲಿಪ್ಪೀನ್ಸ್ ನಡುವಿನ ಸಮುದ್ರದಡಿಯಲ್ಲಿ ಭಾರೀ ಭೂಕಂಪ ಅಥವಾ ಸುನಾಮಿ ಏಳಲಿದೆ ಎಂದು ಬರೆಯಲಾಗಿದೆ. ಈ ಭವಿಷ್ಯವಾಣಿಗೆ ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಇವರ ಹಿಂದಿನ ಭವಿಷ್ಯವಾಣಿಗಳು ನಿಜವಾಗಿರುವುದರಿಂದ ಜನರಲ್ಲಿ ಭಯ ಮೂಡಿದೆ ಎನ್ನಲಾಗಿದೆ.
ರಿಯೋ ತತ್ಸುಕಿಯವರು 2011 ರಲ್ಲಿ ಸಂಭವಿಸಿದ ತೊಹೊಕು ಭೂಕಂಪ ಮತ್ತು ಸುನಾಮಿಯ ಬಗ್ಗೆಯೂ ಮೊದಲೇ ಭವಿಷ್ಯ ನುಡಿದಿದ್ದರು. ಈ ಭೂಕಂಪ ಮತ್ತು ಸುನಾಮಿಯು 18,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು ಮತ್ತು ಫುಕುಶಿಮಾ ಡೈಚಿ ಪರಮಾಣು ವಿಪತ್ತನ್ನು ಉಂಟುಮಾಡಿತ್ತು. ಈ ಭವಿಷ್ಯವಾಣಿಯ ಖ್ಯಾತಿಯಿಂದಾಗಿ, ಇವರ ಇತ್ತೀಚಿನ ಎಚ್ಚರಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಬ್ಲೂಮ್ಬರ್ಗ್ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಜಪಾನ್ಗೆ ವಿಮಾನ ಬುಕಿಂಗ್ಗಳು ಶೇಕಡಾ 83ರಷ್ಟು ಕಡಿಮೆಯಾಗಿವೆ. ವಿಶೇಷವಾಗಿ ಪೂರ್ವ ಏಷ್ಯಾದ ಪ್ರವಾಸಿಗರು ತಮ್ಮ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದಾರೆ. ಹಾಂಗ್ ಕಾಂಗ್ನ ಒಂದು ಟ್ರಾವೆಲ್ ಏಜೆನ್ಸಿಯು ಏಪ್ರಿಲ್-ಮೇ ತಿಂಗಳ ರಜೆಯ ಸಂದರ್ಭದಲ್ಲಿ ಜಪಾನ್ಗೆ ಬುಕಿಂಗ್ಗಳಲ್ಲಿ ಶೇಕಡಾ 50ರಷ್ಟು ಕಡಿತ ಕಂಡಿದೆ ಎಂದು ವರದಿಯಾಗಿದೆ.
ತತ್ಸುಕಿಯವರ ಈ ಭವಿಷ್ಯವಾಣಿಯು 2021ರಲ್ಲಿ ಪರಿಷ್ಕರಿಸಲಾದ ‘ದಿ ಫ್ಯೂಚರ್ ಐ ಸಾ’ ಪುಸ್ತಕದಲ್ಲಿ ಪ್ರಕಟವಾಗಿದ್ದು, ಜಪಾನ್, ಥೈವಾನ್, ಇಂಡೋನೇಷ್ಯಾ ಮತ್ತು ಉತ್ತರ ಮರಿಯಾನ ದ್ವೀಪಗಳನ್ನು ಸಂಯೋಜಿಸುವ ಸಮುದ್ರದಡಿಯ ‘ಡೈಮಂಡ್ ಆಕಾರದ’ ಪ್ರದೇಶದಲ್ಲಿ ಭಾರೀ ಸುನಾಮಿ ಉಂಟಾಗಲಿದೆ ಎಂದು ಎಚ್ಚರಿಸಲಾಗಿದೆ. ಈ ಪ್ರದೇಶವು ಭೂಕಂಪಕ್ಕೆ ಸಂವೇದನಾಶೀಲವಾದ ‘ರಿಂಗ್ ಆಫ್ ಫೈರ್’ನಲ್ಲಿದೆ. ಆದರೆ, ಜಪಾನ್ನ ಹವಾಮಾನ ಇಲಾಖೆಯು ಈ ಭವಿಷ್ಯವಾಣಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಎಚ್ಚರಿಕೆಯನ್ನು ಹೊರಡಿಸಿಲ್ಲ.
ಈ ಭವಿಷ್ಯವಾಣಿಯಿಂದ ಪ್ರವಾಸೋದ್ಯಮ ಉದ್ಯಮಕ್ಕೆ ಭಾರೀ ತೊಂದರೆಯಾಗಿದ್ದು, ಹಾಂಗ್ ಕಾಂಗ್ ಮತ್ತು ಚೀನಾದಿಂದ ಬರುವ ಪ್ರವಾಸಿಗರು ತಮ್ಮ ರಜೆಯ ಪ್ರಯಾಣ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದಾರೆ. ಆದಾಗ್ಯೂ, ಕೆಲವರು ಈ ಭವಿಷ್ಯವಾಣಿಯನ್ನು ವೈಜ್ಞಾನಿಕ ಆಧಾರವಿಲ್ಲದ ಕಾಲ್ಪನಿಕ ಊಹೆ ಎಂದು ಕಡೆಗಣಿಸಿದ್ದಾರೆ. ಜಪಾನ್ ಸರ್ಕಾರವು ಭೂಕಂಪಗಳನ್ನು ನಿಖರವಾಗಿ ಊಹಿಸುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಜನರಿಗೆ ಅಧಿಕೃತ ಮಾಹಿತಿಯನ್ನು ಅವಲಂಬಿಸುವಂತೆ ಸೂಚಿಸಿದೆ.