ತಮಿಳಿನಿಂದ ಕನ್ನಡ ಎಂಬ ಕಮಲ್ ಹಾಸನ್ ಹೇಳಿಕೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಕಷ್ಟು ಸೆಲೆಬ್ರೆಟಿಗಳು, ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಕಮಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ. ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಇಡುತ್ತೇವೆ ಥಿಯೇಟರ್ ಒಡೆದು ಹಾಕುತ್ತೇವೆ ಎಂದು ಈಗಾಗಲೇ ಕರವೇಯಿಂದ ಎಚ್ಚರಿಕೆ ನೀಡಲಾಗಿದೆ.
ವಾಟಾಳ್ ನಾಗರಾಜ್ ಕೂಡ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ರಾಜ್ಯ ರಣರಂಗ ಆಗುತ್ತದೆ ಎಂದಿದ್ದಾರೆ. ಕನ್ನಡಪರ ಸಂಘಟನೆಗಳು ಹಿಂಸಾತ್ಮಕ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ರಿಯಾಕ್ಟ್ ಮಾಡಿದ್ದಾರೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಬೆಂಗಳೂರಿನಲ್ಲಿ ಎಲ್ಲ ಭಾಷಿಕರೂ ಇದ್ದಾರೆ. ಬೆಂಗಳೂರಿಗೂ ಹೊಸೂರಿಗೆ ಸಾಕಷ್ಟು ವ್ಯಾಪಾರಿಕ ನಂಟು ಇದೆ. ಹೀಗಾಗಿ ಎಚ್ಚರಿಕೆಯಿಂದ ಸಾಂವಿಧಾನಿಕ ರೀತಿಯ ಹೋರಾಟ ಮಾತ್ರವೇ ಮಾಡಬೇಕು ಎಂದಿದ್ದಾರೆ.