ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ರಾಕೆಟ್ ಉಡಾವಣೆಯ ಸಂದರ್ಭದಲ್ಲಿ, ಬಾಹ್ಯಾಕಾಶ ಕೇಂದ್ರದಲ್ಲಿರುವ ಪತ್ರಕರ್ತರಿಗೆ ಮತ್ತು ನೇರಪ್ರಸಾರ ವೀಕ್ಷಿಸುವವರಿಗೆ ಪರಿಚಿತವಾದ ಒಂದು ಧ್ವನಿಯಿತ್ತು. ಅದುವೇ ಗಣೇಶನ್ ಗ್ರಹದುರೈ ಅವರದ್ದು. ಸತತ 38 ವರ್ಷಗಳಿಂದ ಕೇಳಿಬರುತ್ತಿದ್ದ ಈ ಧ್ವನಿ ಇನ್ನು ಮುಂದೆ ಇಸ್ರೋದಲ್ಲಿ ಕೇಳಿಸದು. ಏಕೆಂದರೆ ಮೇ 30ರ ಶುಕ್ರವಾರ ತಮ್ಮ 38 ವರ್ಷಗಳ ಸಾರ್ಥಕ ಸೇವೆಯಿಂದ ಗಣೇಶನ್ ಅವರು ನಿವೃತ್ತರಾಗಿದ್ದಾರೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ರೇಂಜ್ ಆಪರೇಷನ್ಸ್ ಡೈರೆಕ್ಟರ್ ಆಗಿದ್ದ ಗ್ರಹದುರೈ ಅವರು ಉಪಗ್ರಹಗಳ ಉಡಾವಣೆಯ ಸಂದರ್ಭದಲ್ಲಿ ಹಲವಾರು ಮಾನದಂಡಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ರಾಕೆಟ್ನ ಪ್ರತಿ ಹಂತದ ಕಾರ್ಯಕ್ಷಮತೆ ಮತ್ತು ಕಾರ್ಯಕ್ರಮದ ಒಟ್ಟಾರೆ ಪ್ರಗತಿಯ ಬಗ್ಗೆ ಅವರು ಪ್ರಮುಖ ಘೋಷಣೆಗಳನ್ನು ಅಥವಾ “ಕಾಲೌಟ್ಗಳನ್ನು” ಮಾಡುತ್ತಿದ್ದರು. ಅವರ ವಿಶಿಷ್ಟ ಧ್ವನಿ ಮತ್ತು ಉಚ್ಚಾರಣೆಯೊಂದಿಗೆ, “ಮೊದಲ ಹಂತದ ಕಾರ್ಯಕ್ಷಮತೆ ನಾರ್ಮಲ್… ಎರಡನೇ ಹಂತದ ಕಾರ್ಯಕ್ಷಮತೆ ನಾರ್ಮಲ್… ಮೂರನೇ ಹಂತದ ಕಾರ್ಯಕ್ಷಮತೆ ನಾರ್ಮಲ್… ಉಪಗ್ರಹ ಇಂಜೆಕ್ಷನ್ ಷರತ್ತುಗಳನ್ನು ಸಾಧಿಸಿತು… ಉಪಗ್ರಹ ಇಂಜೆಕ್ಟ್ ಆಗಿದೆ,” ಎಂದು ಘೋಷಿಸುತ್ತಿದ್ದಂತೆ, ಮಿಷನ್ ಕಂಟ್ರೋಲ್ ಸೆಂಟರ್ನಲ್ಲಿರುವ ಇಸ್ರೋ ವಿಜ್ಞಾನಿಗಳಿಗೆ ಮತ್ತು ನೇರಪ್ರಸಾರ ವೀಕ್ಷಿಸುವ ಭಾರತೀಯ ಬಾಹ್ಯಾಕಾಶ ಉತ್ಸಾಹಿಗಳ ಮೈಯಲ್ಲಿ ರೋಮಾಂಚನ ಮತ್ತು ನಿರಾಳತೆಯ ಅನುಭವ ನೀಡುತ್ತಿತ್ತು.
ಆದರೆ, ಈ ಘೋಷಣೆಗಳು ರೇಂಜ್ ಆಪರೇಷನ್ಸ್ ಡೈರೆಕ್ಟರ್ನ ಪಾತ್ರದ ಒಂದು ಸಣ್ಣ ಭಾಗವಷ್ಟೇ. ರೇಂಜ್ ಆಪರೇಷನ್ಸ್ ಡೈರೆಕ್ಟರ್ ಹುದ್ದೆಯಲ್ಲಿದ್ದ ಗಣೇಶನ್ ಅವರು ರಾಕೆಟ್ ತಂಡ, ಉಪಗ್ರಹ ತಂಡ, ಮತ್ತು ಬಾಹ್ಯಾಕಾಶ ಕೇಂದ್ರದ ತಂಡದ ನಡುವೆ ಸಮನ್ವಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದರು. ತಾಂತ್ರಿಕ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಒದಗಿಸುತ್ತಿದ್ದರು. ಇದರಲ್ಲಿ ರಾಕೆಟ್, ಉಪಗ್ರಹ, ಟ್ರ್ಯಾಕಿಂಗ್ ಸಿಸ್ಟಮ್ಗಳು, ರಾಡಾರ್ಗಳು ಇತ್ಯಾದಿಗಳ ಆರೋಗ್ಯ ಪರೀಕ್ಷೆಯನ್ನು ಮೇಲ್ವಿಚಾರಣೆ ಮಾಡುವ ಕೆಲಸವನ್ನೂ ಮಾಡುತ್ತಿದ್ದರು. ಪ್ರತಿ ಕಾರ್ಯಕ್ರಮಕ್ಕೆ ಕೌಂಟ್ಡೌನ್ ಸಮಯವನ್ನು ಅಂತಿಮಗೊಳಿಸುವ ನಿರ್ಣಾಯಕ ಪಾತ್ರವನ್ನೂ ಅವರು ನಿಭಾಯಿಸಿದ್ದರು.
ಗಣೇಶನ್ ಗ್ರಹದುರೈ ಏನು ಹೇಳುತ್ತಾರೆ?
ಬಾಹ್ಯಾಕಾಶ ಉತ್ಸಾಹಿಗಳ ಸಮುದಾಯದಿಂದ ತಮಗೆ ಸಿಗುವ ಪ್ರೀತಿ ಮತ್ತು ಪ್ರಶಂಸೆಯ ಬಗ್ಗೆ ಗ್ರಹದುರೈ ಅವರು ಪ್ರತಿಕ್ರಿಯಿಸಿ, “ನನ್ನ ಧ್ವನಿಗಾಗಿ ನಾನು ದೇವರಿಗೆ ಮತ್ತು ನನ್ನ ಪೋಷಕರಿಗೆ ಧನ್ಯವಾದ ಹೇಳಬೇಕು. ರೇಂಜ್ ಆಪರೇಷನ್ಸ್ ಡೈರೆಕ್ಟರ್ ಆಗಿ, ಇಸ್ರೋದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಘೋಷಿಸುವುದು ನನ್ನ ಪಾತ್ರ. ಈ ಪ್ರಕ್ರಿಯೆಯಲ್ಲಿ ಹಾಗೂ ಪ್ರತಿ ಯೋಜನೆಯೊಂದಿಗೂ ಭಾವನಾತ್ಮಕ ಸಂಬಂಧ ಮತ್ತು ಸಂಪೂರ್ಣ ತೊಡಗಿಸಿಕೊಳ್ಳುತ್ತಿದ್ದೆ. ನನಗೆ ಇದು ಒಂದು ವಿಶಿಷ್ಟ, ಆತ್ಮೀಯ ಅನುಭವವನ್ನು ನೀಡಿದೆ” ಎಂದಿದ್ದಾರೆ. ಅಲ್ಲದೆ, “ಮನೆಯಲ್ಲಿಯೂ ನನ್ನ ಮೊಮ್ಮಕ್ಕಳು, ಅನೇಕ ಸ್ನೇಹಿತರು, ಸಂಬಂಧಿಕರು ಮತ್ತು ಸಾರ್ವಜನಿಕರು ನನ್ನ ಘೋಷಣೆಗಳನ್ನು ಮತ್ತು ಧ್ವನಿಯನ್ನು ಅನುಕರಿಸುವ ಮೂಲಕ ಆನಂದಿಸುತ್ತಾರೆ,” ಎಂದು ಅವರು ನಗುತ್ತಾ ಹೇಳಿದ್ದಾರೆ.
ಗ್ರಹದುರೈ ಅವರ ಜೀವನ ಪಯಣ ಮತ್ತು ಇಸ್ರೋಗೆ ಕೊಡುಗೆಗಳು
ತಮಿಳುನಾಡಿನ ಪಟಾಕಿಗಳಿಗೆ ಹೆಸರಾದ ಶಿವಕಾಶಿಯಿಂದ ಬಂದಿರುವ ಗ್ರಹದುರೈ, ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಭಾರತೀಯ ಬಾಹ್ಯಾಕಾಶ ಕೇಂದ್ರದಲ್ಲಿ ವೃತ್ತಿಜೀವನ ಆರಂಭಿಸಿದರು. ಅಲ್ಲಿ ಅವರು ಭಾರತದ 101 ರಾಕೆಟ್ ಉಡಾವಣೆಗಳಲ್ಲಿ 96ರಲ್ಲಿ, ವಿವಿಧ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಕೊಡುಗೆ ನೀಡಿದ್ದಾರೆ. ಜನವರಿ 2020 ರಿಂದ ರೇಂಜ್ ಆಪರೇಷನ್ಸ್ ಡೈರೆಕ್ಟರ್ ಆಗಿ, ಇಸ್ರೋದ 101 ರಾಕೆಟ್ ಉಡಾವಣೆಗಳಲ್ಲಿ 24ರ ಘೋಷಣೆಗಳನ್ನು ಮಾಡಿದ್ದಾರೆ. ಇದು ಸ್ವತಃ ಒಂದು ದಾಖಲೆಯಾಗಿದೆ.