ಅದು 2014….ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಆದರೆ ಸಮಸ್ತ ಕ್ರಿಕೆಟ್ ಲೋಕ ಅಂದು ಊಹಿಸದ ಘಟನೆಯೊಂದು ನಡೆದಿತ್ತು. ನಾಯಕನಾಗಿ ಉತ್ತಂಗದಲ್ಲಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ತಮ್ಮ ಬದಲು ಯುವ ಆಟಗಾರರಿಗೆ ಅವಕಾಶ ನೀಡು ಎನ್ನುವ ಧಾಟಿಯಲ್ಲೇ ಗೌರವಯುತವಾಗಿ ತಂಡದಿಂದ ನಿರ್ಗಮಿಸಿದ್ದರು. ಬಟ್ ಈ ಒಂದು…ಇದೊಂದು ವಿಚಾರದಲ್ಲಿ ಮಾತ್ರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಈ ಭಾಗ್ಯ ಸಿಗಲೇ ಇಲ್ಲ.
ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದ್ದ ರೋಹಿತ್
ಇನ್ನೇನು ಐಪಿಎಲ್ ಹಂಗಾಮ ತನ್ನ ಅಂತಿಮ ಚರಣ ತಲುಪಿದೆ. ಇತ್ತ ಟೀಂ ಇಂಡಿಯಾ ಮತ್ತೆ ತನ್ನ ಕ್ರಿಕೆಟ್ ಜಗತ್ತಿಗೆ ಮರಳಬೇಕಿದೆ. ಅದರಲ್ಲೂ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೆ ಅಣಿಯಾಗಬೇಕಿದೆ. ಆದರೆ, ಇದೆಲ್ಲದರ ನಡುವೆ ಏನೆಲ್ಲಾ ನಡೆದು ಹೋಗಿದೆ. ಶುಕ್ರವಾರ ಬಹುತೇಕ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ನಡೆಯಬಹುದು. ಆದರೆ ಇಂಟ್ರೆಸ್ಟಿಂಗ್ ವಿಚಾರವೆಂದರೆ ಈ ಸರಣಿ ನಾಯಕತ್ವನ್ನು ಖುದ್ದು ವಹಿಸಿಕೊಳ್ಳಲು ರೋಹಿತ್ ಶರ್ಮಾ ಆಸಕ್ತಿ ವಹಿಸಿದ್ದರು. ಧೋನಿ, ಅಶ್ವಿನ್ ಮಾದರಿಯಲ್ಲೇ ಸರಣಿ ನಡುವೆ ನಿವೃತ್ತಿ ಘೋಷಿಸುವ ಹುಮ್ಮಸ್ಸಿನಲ್ಲಿದ್ದರು.
ಈ ಬಗ್ಗೆ ಬಿಸಿಸಿಐ ವರಿಷ್ಠರು ಸೇರಿದಂತೆ ಆಯ್ಕೆ ಸಮಿತಿಗೂ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಬಿಸಿಸಿಐ ಬಿಗ್ ಬಾಸ್ ಗಳು ಸುತಾರಾಮ್ ಒಪ್ಪಿಲ್ಲ. ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡ್ತೀವಿ ಬಟ್ ನಾಯಕನಾಗಿ ಅಲ್ಲ ಅನ್ನೋ ಷರತ್ತನ್ನೂ ವಿಧಿಸಿದರು. ಇದರಿಂದ ತಮ್ಮ ಕನಸಿನ ಸರಣಿ ನಡುವಿನ ನಿವೃತ್ತಿ ಬದಲು ಅದಕ್ಕೂ ಮೊದಲೇ ರೋಹಿತ್ ಒಲ್ಲದ ಮನಸ್ಸಿನಿಂದ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ತಂಡದ ಆಟಗಾರನಾಗಿ ಹೋಗುವ ಮನಸ್ಸಿಲ್ಲದ ರೋಹಿತ್ ಬಿಸಿಸಿಐ ಮೇಲಿನ ಮುನಿಸಿನೊಂದಿಗೆ ತಮ್ಮ ಟೆಸ್ಟ್ ಯುಗವನ್ನು ಅಂತ್ಯಗೊಳಿಸಿದ್ದಾರೆ.
ಶುಭಮನ್ ಗಿಲ್ ನಾಯಕ, ರಿಷಬ್ ಪಂತ್ ಉಪನಾಯಕ
ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಲ್ಲದ ಟೆಸ್ಟ್ ತಂಡದ ಭವಿಷ್ಯವೇನು ಅನ್ನೋ ಪ್ರಶ್ನೆ ಮೂಡಿದೆ. ಇದರ ನಡುವೆ, ಯುವ ಬ್ಯಾಟರ್ ಶುಭ್ ಮನ್ ಗಿಲ್ ಗೆ ತಂಡದ ಸಾರಥ್ಯ ನೀಡುವುದು ಬಹುತೇಕ ಅಂತಿಮವಾಗಿದೆ. ಅಷ್ಟೇ ಅಲ್ಲಾ ರಿಷಬ್ ಪಂತ್ ಗೆ ಉಪನಾಯಕನ ಪಟ್ಟ ಕಟ್ಟುವ ತೀರ್ಮಾನವೂ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಆಟಗಾರ ಸುನಿಲ್ ಗವಸ್ಕರ್, ಶುಭ್ ಮನ್,ಪಂತ್, ಶ್ರೇಯಸ್ ಗೆ ನಾಯಕತ್ವ ಗುಣಗಳಿವೆ ಎಂದಿದ್ದಾರೆ. ಇದರ ನಡುವೆ, ವೇಗಿ ಬುಮ್ರಾ ಹೆಸರೂ ಮುಂಚೂಣಿಯಲ್ಲಿದೆ. ಆದರೆ, ಈ ಎಲ್ಲ ಊಹಾಪೋಹಗಳಿಗೆ ಶುಕ್ರವಾರ ತೆರೆ ಬೀಳಲಿದ್ದು, ತಂಡದಲ್ಲಿ ಯಾವೆಲ್ಲಾ ಅಚ್ಚರಿ ಆಯ್ಕೆಗಳಿವೆ, ಯಾರಿಗೆ ಬಿಗ್ ಶಾಕ್ ಕಾದಿದೆ ಅನ್ನೋದು ಗೊತ್ತಾಗಲಿದೆ.