ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸದೃಶ ವಾತಾವರಣ ಸೃಷ್ಟಿಯಾಗಿರುವಂತೆಯೇ, ಎರಡೂ ದೇಶಗಳು ಪರಮಾಣು ಶಕ್ತಿಗಳನ್ನು ಹೊಂದಿರುವುದು ಪ್ರಾದೇಶಿಕ ಸ್ಥಿರತೆಯ ಬಗ್ಗೆ ತೀವ್ರ ಆತಂಕ ಹುಟ್ಟುಹಾಕಿವೆ. ಯಾಕೆಂದರೆ ಆರ್ಥಿಕವಾಗಿ ಸೊರಗಿರುವ ಹಾಗೂ ಭಯೋತ್ಪಾದಕರ ತವರಾಗಿರುವ ಪಾಕ್ನಲ್ಲಿ ಅಣುಬಾಂಬ್ ಇರುವುದೇ ಮನುಕುಲಕ್ಕೆ ದೊಡ್ಡ ಅಪಾಯ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸಿತು ಎಂಬುದರ ಐತಿಹಾಸಿಕ ಹಾದಿ ಮತ್ತು ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆ ಇಲ್ಲಿದೆ.
ಹಸಿನಿಂದ ಸತ್ತರೂ ಪರ್ವಾಗಿಲ್ಲ, ಪರಮಾಣು ಬಾಂಬ್ ಬೇಕು:
ಪಾಕಿಸ್ತಾನದ ಪರಮಾಣು ಪ್ರಯಾಣವು 1950ರ ದಶಕದಲ್ಲಿ ಶಾಂತಿಯುತ ಉದ್ದೇಶಗಳೊಂದಿಗೆ ಆರಂಭವಾಯಿತು. ಆದರೆ, 1971ರ ಯುದ್ಧದಲ್ಲಿ ಭಾರತದ ವಿರುದ್ಧದ ಸೋಲು ಮತ್ತು ಬಾಂಗ್ಲಾದೇಶವನ್ನು ಕಳೆದುಕೊಂಡ ನಂತರ, ಆ ದೇಶದ ಭದ್ರತಾ ಕಳಕಳಿಗಳು ತೀವ್ರಗೊಂಡವು. ಆಗಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರು ಪರಮಾಣು ಶಸ್ತ್ರಾಸ್ತ್ರ ಯೋಜನೆ ರೂಪಿಸಲು ಆದೇಶ ನೀಡಿದರು. “ಪಾಕಿಸ್ತಾನದ ಜನರು ಹಸಿವಿನಿಂದ ಸತ್ತರೂ ಪರವಾಗಿಲ್ಲ, ನಮ್ಮ ದೇಶ ಪರಮಾಣು ಬಾಂಬ್ ಮಾಡಲೇಬೇಕು,” ಎಂಬ ಅವರ ಹೇಳಿಕೆ ಈ ನಿರ್ಧಾರದ ಹಿಂದಿನ ತೀವ್ರತೆಯನ್ನು ಬಿಂಬಿಸುತ್ತದೆ.
1974ರಲ್ಲಿ ಭಾರತವು ‘ಸ್ಮೈಲಿಂಗ್ ಬುದ್ಧ’ ಪರಮಾಣು ಪರೀಕ್ಷೆ ನಡೆಸಿದಾಗ ಪಾಕಿಸ್ತಾನದ ಆತಂಕ ಮತ್ತಷ್ಟು ಹೆಚ್ಚಾಯಿತು. ಇದೇ ಸಮಯದಲ್ಲಿ ಡಾ. ಅಬ್ದುಲ್ ಖಾದೀರ್ ಖಾನ್ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ನೇತೃತ್ವ ವಹಿಸಿದರು. ನೆದರ್ಲ್ಯಾಂಡ್ಸ್ನಲ್ಲಿ ಯುರೇನಿಯಂ ಸಂವರ್ಧನೆ ತಂತ್ರಜ್ಞಾನದ ಗೌಪ್ಯ ಮಾಹಿತಿಯನ್ನು ಪಡೆದಿದ್ದ ಖಾದೀರ್ಖಾನ್, 1976ರಲ್ಲಿ ಪಾಕಿಸ್ತಾನಕ್ಕೆ ಮರಳಿ ಖಾನ್ ರಿಸರ್ಚ್ ಲ್ಯಾಬೊರೇಟರೀಸ್ (KRL) ಎಂಬ ಪ್ರಯೋಗಾಲಯವನ್ನು ಸ್ಥಾಪಿಸಿದರು.
ಪಾಕಿಸ್ತಾನವು ತನ್ನ ಕಾರ್ಯಕ್ರಮವನ್ನು ರಹಸ್ಯವಾಗಿ ಮುಂದುವರಿಸಿತು. ಇದಕ್ಕಾಗಿ ಪಾಕ್ ಚೀನಾದಿಂದ ಗಣನೀಯ ನೆರವು (ವಿನ್ಯಾಸ, ಉಪಕರಣಗಳು, ತಂತ್ರಜ್ಞಾನ) ಪಡೆಯಿತು. ಮತ್ತೊಂದೆಡೆ, ಖಾನ್ ಅಂತಾರಾಷ್ಟ್ರೀಯ ಕಾಳಸಂತೆಯಿಂದ ಬೇಕಾದ ಮೂಲ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು. 1998ರ ಮೇ ತಿಂಗಳಲ್ಲಿ ಭಾರತವು ‘ಆಪರೇಷನ್ ಶಕ್ತಿ’ ಪರೀಕ್ಷೆ ನಡೆಸಿದ ಕೆಲವೇ ವಾರಗಳಲ್ಲಿ, ಪಾಕಿಸ್ತಾನವು ‘ಚಾಗೈ-I’ ಪರೀಕ್ಷೆ ನಡೆಸುವ ಮೂಲಕ ಪರಮಾಣು ಶಕ್ತಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಯೇಬಿಟ್ಟಿತು.
ಸಾಗಣೆ ವ್ಯವಸ್ಥೆ ಮತ್ತು ಪರಮಾಣು ನೀತಿ:
ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸಲು ವಿಭಿನ್ನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಭೂಮಿ ಆಧಾರಿತ ಶಾಹೀನ್ ಮತ್ತು ಗೌರಿ ಕ್ಷಿಪಣಿಗಳು, ವಾಯುಪಡೆಯ ವಿಮಾನಗಳು ಮತ್ತು ಇತ್ತೀಚೆಗೆ ಸೇರಿಸಲಾದ ಸಮುದ್ರ ಆಧಾರಿತ ಆಯ್ಕೆಗಳೂ ಸೇರಿವೆ. ವಿಶ್ಲೇಷಕರ ಪ್ರಕಾರ, ಪಾಕಿಸ್ತಾನದ ಸಾಗಣೆ ವ್ಯವಸ್ಥೆಗಳು ಪ್ರಾಥಮಿಕವಾಗಿ ಭಾರತವನ್ನೇ ಗುರಿಯಾಗಿಸಿಕೊಂಡಿವೆ.
ಪಾಕಿಸ್ತಾನದ ಪರಮಾಣು ನೀತಿಯು “ಮೊದಲ ಬಳಕೆ” (First Use) ತತ್ವವನ್ನು ಆಧರಿಸಿದೆ. ಅಂದರೆ ತನ್ನ ಅಸ್ತಿತ್ವಕ್ಕೆ ಗಂಭೀರ ಬೆದರಿಕೆ ಎದುರಾದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವ ಹಕ್ಕನ್ನು ಕಾಯ್ದಿರಿಸಿದೆ. ಇದಕ್ಕೆ ವಿರುದ್ಧವಾಗಿ, ಭಾರತವು “ಮೊದಲ ಬಳಕೆ ಇಲ್ಲ” (No First Use) ನೀತಿಯನ್ನು ಅನುಸರಿಸುತ್ತದೆ. ಈ ಎರಡು ವಿಭಿನ್ನ ನೀತಿಗಳು ಈ ಪ್ರದೇಶದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಪರಮಾಣು ಯುದ್ಧದ ಸಾಧ್ಯತೆಯ ಆತಂಕಕ್ಕೆ ಕಾರಣವಾಗಿವೆ ಎಂದು ವಿಯಾನ್ ವರದಿ ಮಾಡಿದೆ.
ಪಹಲ್ಗಾಮ್ ದಾಳಿಯ ನಂತರದ ಬೆಳವಣಿಗೆಗಳು:
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7, 2025 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ದಲ್ಲಿರುವ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. 25 ನಿಮಿಷಗಳಲ್ಲಿ 24 ಕ್ಷಿಪಣಿಗಳನ್ನು ಉಡಾಯಿಸಿ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ರಕ್ಷಣಾ ಸಚಿವಾಲಯವು ಇದನ್ನು ಕೇವಲ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿದ “ನಿಖರ ಮತ್ತು ಸಂಯಮಿತ” ಪ್ರತಿಕ್ರಿಯೆ ಎಂದು ಬಣ್ಣಿಸಿದೆ. ಆದರೆ, ಪಾಕಿಸ್ತಾನವು ಈ ದಾಳಿಯಲ್ಲಿ 31 ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ತನ್ನ ದುರ್ಬುದ್ಧಿ ಮುಂದುವರಿಸಿ, ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ. ಜಮ್ಮು, ಪಠಾಣ್ಕೋಟ್ ಮತ್ತು ಉಧಂಪುರದ ಸೇನಾ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ಈ ದಾಳಿಯನ್ನು ಭಾರತವು ತನ್ನ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ತಡೆಗಟ್ಟಿದೆ. ಜತೆಗೆ ಗಡಿಗ್ರಾಮಗಳನ್ನು ಗುರಿಯಾಗಿಸಿ ಪಾಕ್ ಶೆಲ್ ದಾಳಿಯನ್ನೂ ಮುಂದುವರಿಸಿದ್ದು, ಈ ಸಂಘರ್ಷದಲ್ಲಿ ಭಾರತದ ಕಡೆಯಿಂದ 16 ನಾಗರಿಕರು ಮತ್ತು ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯೂ ಮೃತಪಟ್ಟಿದ್ದಾರೆ.
ಪರಮಾಣು ಯುದ್ಧದ ಭೀತಿ:
ಸಂಘರ್ಷವು ಎರಡು ಪರಮಾಣು ಶಕ್ತಿ ಹೊಂದಿದ ರಾಷ್ಟ್ರಗಳ ನಡುವಿನ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗುವ ಸಾಧ್ಯತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, “ಪಾಕಿಸ್ತಾನವು ತನ್ನ ಅಸ್ತಿತ್ವಕ್ಕೆ ನೇರ ಬೆದರಿಕೆ ಎದುರಾದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ,” ಎಂದು ಹೇಳಿದ್ದಾರೆ. ಆದರೆ, ಪಾಕಿಸ್ತಾನದ ನ್ಯಾಷನಲ್ ಕಮಾಂಡ್ ಅಥಾರಿಟಿ (NCA) ಅದನ್ನು ನಿರಾಕರಿಸಿದೆ.
ಈ ಘರ್ಷಣೆಯು ಎರಡೂ ದೇಶಗಳ ಪರಮಾಣು ಸಾಮರ್ಥ್ಯವನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ. ಭಾರತವು ಭೂಮಿ, ವಾಯು ಮತ್ತು ಸಮುದ್ರ ಆಧಾರಿತ ಪರಮಾಣು ತ್ರಿಶಕ್ತಿಯನ್ನು ಹೊಂದಿದ್ದರೆ, ಪಾಕಿಸ್ತಾನದ ಸಾಗಣೆ ವ್ಯವಸ್ಥೆ ಮುಖ್ಯವಾಗಿ ಭೂಮಿ ಆಧಾರಿತವಾಗಿದೆ.
ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಕುರಿತು ಕಳವಳ
ಕಾಳಸಂತೆಯನ್ನು ಬಳಸಿಕೊಂಡು ಡಾ. ಅಬ್ದುಲ್ ಖಾದೀರ್ ಖಾನ್ ಸ್ಥಾಪಿಸಿದ ಪರಮಾಣು ತಂತ್ರಜ್ಞಾನವು, ಉತ್ತರ ಕೊರಿಯಾ, ಇರಾನ್ ಮತ್ತು ಲಿಬಿಯಾದಂತಹ ದೇಶಗಳಿಗೆ ಹರಡಿತು ಎಂಬ ಆರೋಪವೂ ಇದೆ. ಜೊತೆಗೆ, ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಕೈಗೆ ಪರಮಾಣು ಶಸ್ತ್ರಾಸ್ತ್ರಗಳು ಸಿಗುವ ಆತಂಕವನ್ನೂ ಇದು ಸೃಷ್ಟಿಸಿದೆ. ಪಾಕಿಸ್ತಾನ ಸರ್ಕಾರವು ತನ್ನ ಪರಮಾಣು ಆಸ್ತಿಗಳನ್ನು ಸುರಕ್ಷಿತವಾಗಿ ಇರಿಸಿರುವುದಾಗಿ ಪದೇ ಪದೇ ಹೇಳುತ್ತದೆಯಾದರೂ, ದೇಶದ ರಾಜಕೀಯ ಅಸ್ಥಿರತೆ ಮತ್ತು ಭಯೋತ್ಪಾದಕರೊಂದಿಗಿನ ಸಂಬಂಧಗಳು ಈ ಹೇಳಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿವೆ. ಉದಾಹರಣೆಗೆ, 2008ರ ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ಶಿಕ್ಷೆಯಲ್ಲಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಬದ್ಧತೆಯ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿವೆ.