ಕಾರವಾರ: ವ್ಯಕ್ತಿಯೊಬ್ಬರು ದೇಶ ಸೇವೆ ಮಾಡಬೇಕೆಂಬ ಮಹದಾಸೆ ಹೊಂದಿ, ಸೈನ್ಯ ಸೇರಲು ಆಗದೆ ಈಗ ಶ್ವಾನಗಳನ್ನು ನೀಡುತ್ತಿರುವ ಮಹಾನ್ ಕಾರ್ಯ ಮಾಡುತ್ತಿದದಾರೆ.
ಅಂಕೋಲದ (Ankola) ವ್ಯಕ್ತಿಯೊಬ್ಬರು ಸೈನ್ಯ (Indian Army) ಶ್ವಾನದ ಸಂತತಿಯನ್ನು ದೇಶ ಸೇವೆಗಾಗಿ ಕಾಪಿಟ್ಟುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ದೇಶಸೇವೆಯ ಮಹದಾಸೆಯಿಂದಾಗಿ 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶದ ಭದ್ರತೆಗಾಗಿ ನೀಡಿದ್ದಾರೆ. ಈಗ ಎರಡು ಮರಿಗಳು ಸಿಆರ್ಪಿಎಫ್ (CRPF) ತುಕಡಿಗೆ ಸೇರಲು ಸಜ್ಜಾಗಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಅಂಕೋಲ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಎಂಬುವವರೇ ಈ ಮಹಾನ್ ಕಾರ್ಯ ಮಾಡುತ್ತಿರುವವರು. ಸಾಕಿದ್ದ ನಾಯಿಗಳನ್ನೇ ಕಳೆದ ಹಲವು ವರ್ಷಗಳಿಂದ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 30ಕ್ಕೂ ಅಧಿಕ ಶ್ವಾನಗಳನ್ನು ದೇಶ ಸೇವೆಯ ಭದ್ರತೆಗೆ ನೀಡಿದ್ದಾರೆ ಎನ್ನಲಾಗಿದೆ.