ರಾಯಚೂರು : ಸಂವಿಧಾನ ಉಳಿವಿಗಾಗಿ ಮೇ 7ರಂದು ವಿಭಾಗೀಯ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಯಲಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಈ ಪ್ರತಿಭಟನೆಯಲ್ಲಿ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಇದು ಕೌಂಟರ್ ಅಲ್ಲ ಎಂದಿದ್ದಾರೆ.
ರೈತರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಹಾಲಿನ ಬೆಲೆ ಏರಿಕೆ ಬಿಟ್ಟರೆ ನಾವು ಯಾವ ಬೆಲೆಯನ್ನೂ ಏರಿಸಿಲ್ಲ. ಆದರೆ, ಮೋದಿ ಸರ್ಕಾರ ಪ್ರತಿಯೊಂದರ ಬೆಲೆ ಏರಿಕೆ ಮಾಡಿದೆ. ಹೀಗಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಪಹಲ್ಗಾಮ್ ಪ್ರಕರಣ ಈ ದೇಶದ ಮೇಲೆ ನಡೆದಿರುವ ಆಕ್ರಮಣ ಅಂತಲೇ ಭಾವಿಸುತ್ತೇವೆ. ಈ ವಿಷಯದಲ್ಲಿ ನಾವು ಕೇಂದ್ರ ಸರ್ಕಾರದ ಜೊತೆಗಿದ್ದೇವೆ. ದೇಶದ ಭದ್ರತಾ ವಿಷಯದಲ್ಲಿ ರಾಜಕಾರಣ ಮಾಡಲ್ಲ. ಆತಂಕವನ್ನು ಉಂಟು ಮಾಡುವ ಶಕ್ತಿಗಳನ್ನು ಕೇಂದ್ರ ಸರ್ಕಾರ ದಮನ ಮಾಡಬೇಕು. ರಾಜ್ಯ ಸರ್ಕಾರ ಸಹಕಾರ ಕೊಡುತ್ತೆ. ಇ ಮೇಲ್ ಬೆದರಿಕೆ ಬಗ್ಗೆ ನಮ್ಮ ಗೃಹ ಇಲಾಖೆ ಪರಿಶೀಲನೆ ಮಾಡುತ್ತಿದೆ. ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಜಾತಿ ಗಣತಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬಹಳ ದಿನಗಳಿಂದ ಒತ್ತಾಯ ಮಾಡುತ್ತಿದ್ದರು. ಸಾಮಾಜಿಕ ನ್ಯಾಯ ಸಿಗಬೇಕು ಅಂದ್ರೆ ಗಣತಿ ಆಗಬೇಕು. ಕೇಂದ್ರದ ಜಾತಿಗಣತಿ ನಿರ್ಧಾರವನ್ನು ಒಪ್ಪಿದ್ದೇವೆ. ಬಿಹಾರ ಎಲೆಕ್ಷನ್ ಬಂದ ಕೂಡಲೇ ಕೇಂದ್ರ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ ಎಂದಿದ್ದಾರೆ.
ಹಿಂದೂ ಕಾರ್ಯಕರ್ತನ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಹತ್ಯೆ ಆಗಲಿ, ಕಾನೂನು ಕ್ರಮ ಆಗುತ್ತೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಆದ್ಯತೆ. ಯಾರ ಮೇಲೆಯೂ ಇಂತಹ ಘಟನೆಯಾದರೆ ಅದನ್ನು ಸರ್ಕಾರ ಸಹಿಸುವುದಿಲ್ಲ. ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.