ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ ದೊಡ್ಡ ನಿರ್ಧಾರ ಕೈಗೊಂಡಿದೆ. ಟೀಂ ಇಂಡಿಯಾದ ಸಹಾಯಕ ಕೋಚ್ ಅಭಿಷೇಕ್ ನಾಯರ್ ರನ್ನು ವಜಾಗೊಳಿಸಿದೆ.
ಇತ್ತೀಚೆಗಷ್ಟೇ ನಡೆದ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ಭಾರತ ತಂಡದ ಕಳಪೆ ಪ್ರದರ್ಶನಕ್ಕೆ ಈ ತಲ ದಂಡ ಎನ್ನಲಾಗ್ತಿದೆ. ಅಭಿಷೇಕ್ ನಾಯರ್ ಜೊತೆ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ ದಿಲೀಪ್ ಮತ್ತು ಟ್ರೈನರ್ ಆಗಿದ್ದ ಸೋಹಂ ದೇಸಾಯಿ ಅವರನ್ನು ಕೂಡಾ ತಮ್ಮ ಹೊಣೆಯಿಂದ ಈಗಿನಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ಅಸಲಿಗೆ ಕಳಪೆ ಪ್ರದರ್ಶನದೊಟ್ಟಿಗೆ ತಂಡದ ಡ್ರೆಸ್ಸಿಂಗ್ ರೂಂ ವಿಚಾರಗಳು ಸೋರಿಕೆಯಾಗಿದ್ದಕ್ಕೂ ಈ ಮೂವರನ್ನು ಹೊಣೆಯಾಗಿಸಲಾಗಿದೆ ಎನ್ನಲಾಗುತ್ತಿದೆ.
ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಮನವಿ ಮೇರೆಗೆ ನಾಯರ್ ಅವರನ್ನು ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿತ್ತು. ಉಳಿದಂತೆ ದಿಲೀಪ್ ಮತ್ತು ಸೋಹಂ ದೇಸಾಯಿ ಇಬ್ರೂ ಟೀಂ ಇಂಡಿಯಾದೊಟ್ಟಿಗೆ ಕಳೆದ ಮೂರು ವರ್ಷಗಳಿಂದ ಸೇವೆ ನೀಡಿತ್ತಾ ಬಂದಿದ್ದರು. ಈ ದಿಢೀರ್ ವಜಾ ಬೆನ್ನಲ್ಲೇ ಈ ಹುದ್ದೆಗಳಿಗೆ ನೇಮಕವಾಗೋರ್ಯಾರು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.