ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ(Modi Attack on Congress) ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಕಾಂಗ್ರೆಸ್ ಯಾಕೆ ತನ್ನ ಅಧ್ಯಕ್ಷರನ್ನಾಗಿ ಮುಸ್ಲಿಂ ವ್ಯಕ್ತಿಯನ್ನು ಹೆಸರಿಸಬಾರದು, ಕಾಂಗ್ರೆಸ್ ಶೇ.50ರಷ್ಟು ಟಿಕೆಟ್ಗಳನ್ನು ಮುಸ್ಲಿಮರಿಗೆ ಏಕೆ ಮೀಸಲಿಡಬಾರದು” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷವು ಮುಸ್ಲಿಂ ಮೂಲಭೂತವಾದಿಗಳನ್ನು ಓಲೈಸುತ್ತಾ ಬಂದಿರುವುದಕ್ಕೆ ವಕ್ಫ್ ತಿದ್ದುಪಡಿಗೆ ವಿರೋಧಿಸುತ್ತಿರುವುದೇ ಸಾಕ್ಷಿ ಎಂದೂ ಮೋದಿ ಹೇಳಿದ್ದಾರೆ.
ಹರ್ಯಾಣದ ಹಿಸಾರ್ ವಿಮಾನನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ದೇಶದ ಸಂವಿಧಾನಿವನ್ನು ಅಧಿಕಾರ ಪಡೆಯಲು ಬೇಕಾದ ಸಾಧನವಾಗಿ ಬಳಸಿಕೊಂಡಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಆ ಪಕ್ಷ ಸಂವಿಧಾನದ ಆಶಯವನ್ನೇ ಕೊಂದುಹಾಕಿತು. ಸಂವಿಧಾನವು ಜಾತ್ಯತೀತ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತದೆ. ಆದರೆ, ಕಾಂಗ್ರೆಸ್ ಅದನ್ನು ಅನುಷ್ಠಾನ ಮಾಡಲೇ ಇಲ್ಲ. ಇಂದು ಉತ್ತರಾಖಂಡ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡಲಾಗಿದೆ. ದುರದೃಷ್ಟವಶಾತ್, ಕಾಂಗ್ರೆಸ್ ಅದನ್ನೂ ವಿರೋಧಿಸುತ್ತಿದೆ. ಎಸ್ಸಿ-ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿಯ ಅನುಕೂಲತೆ ತಲುಪಿದೆಯೋ, ಇಲ್ಲವೋ ಎಂಬುದನ್ನೂ ಕಾಂಗ್ರೆಸ್ ಪರಿಶೀಲಿಸಲು ಹೋಗಲಿಲ್ಲ ಎಂದೂ ಮೋದಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ನಡೆಸಿಕೊಂಡ ರೀತಿಯನ್ನು ನಾವು ಎಂದಿಗೂ ಮರೆಯಬಾರದು. ಅವರು ಬದುಕಿದ್ದಾಗ ಆ ಪಕ್ಷವು ಅವರನ್ನು ನಿರಂತರವಾಗಿ ಅವಮಾನಿಸಿತು. ಎರಡು ಬಾರಿ ಅವರು ಚುನಾವಣೆಯಲ್ಲಿ ಸೋಲುವಂತೆ ಮಾಡಿತು. ಅವರನ್ನು ಬೇರುಸಮೇತ ಕಿತ್ತುಹಾಕಲು ಕಾಂಗ್ರೆಸ್ ಬಯಸಿತ್ತು. ಇಡೀ ವ್ಯವಸ್ಥೆಯಿಂದ ಅವರನ್ನು ಹೊರಗಿಡಬೇಕೆಂದು ಸಂಚು ರೂಪಿಸಿತು. ಅವರ ಸಾವಿನ ಬಳಿಕ, ಅವರ ನೆನಪನ್ನೂ ಅಳಿಸಿಹಾಕಲು ಕಾಂಗ್ರೆಸ್ ಯತ್ನಿಸಿತು. ಬಾಬಾಸಾಹೇಬ್ ಅವರು ಸಮಾನತೆಯ ಪರ ನಿಂತಿದ್ದರೆ, ಕಾಂಗ್ರೆಸ್ ದೇಶಾದ್ಯಂತ ವೋಟ್ ಬ್ಯಾಂಕ್ ರಾಜಕೀಯದ ವೈರಸ್ ಅನ್ನು ಹಬ್ಬಿಸಿತು ಎಂದೂ ಮೋದಿ ಕಿಡಿಕಾರಿದರು.
ಅಂಬೇಡ್ಕರ್ ಅವರು ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಒಪ್ಪಿರಲಿಲ್ಲ ಎಂದ ಮೋದಿ, ಕಾಂಗ್ರೆಸ್ನ ಓಲೈಕೆ ರಾಜಕಾರಣವು ಮುಸ್ಲಿಮರಿಗೂ ಹಾನಿ ಉಂಟುಮಾಡಿತು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಕೆಲವೇ ಕೆಲವು ಮೂಲಭೂತವಾದಿಗಳನ್ನು ಖುಷಿಪಡಿಸಿತು. ಉಳಿದ ಇಡೀ ಸಮುದಾಯ ಶಿಕ್ಷಣವಂಚಿತರಾಗಿ, ಬಡವರಾಗಿಯೇ ಉಳಿಯಬೇಕಾಯಿತು. ಕಾಂಗ್ರೆಸ್ನ ಈ ನಡೆಗೆ ಅತಿದೊಡ್ಡ ಉದಾಹರಣೆಯೇ ವಕ್ಫ್ ಕಾನೂನು. ರಾಜಕೀಯ ಮೈಲೇಜ್ ಗಾಗಿ ಕಾಂಗ್ರೆಸ್ ವಕ್ಫ್ ಕಾನೂನಿನಲ್ಲಿ ನಿರಂಕುಶ ಬದಲಾವಣೆಗಳನ್ನು ಮಾಡಿತು ಎಂದೂ ಹೇಳಿದರು.
ಈ ಮತ ಬ್ಯಾಂಕ್ ಹಸಿವಿನ ಕಾಂಗ್ರೆಸ್ ನಾಯಕರಿಗೆ ನಾನು ಕೇಳುವುದಿಷ್ಟೇ- ನಿಮಗೆ ನಿಜಕ್ಕೂ ಮುಸ್ಲಿಮರ ಬಗ್ಗೆ ಕಾಳಜಿಯಿದ್ದರೆ, ನೀವೇಕೆ ಮುಸ್ಲಿಮರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಬಾರದು? ಲೋಕಸಭೆ ಚುನಾವಣೆಯ ಶೇಕಡಾ 50ರಷ್ಟು ಟಿಕೆಟ್ ಗಳನ್ನು ಮುಸ್ಲಿಮರಿಗೇಕೆ ನೀಡಬಾರದು? ಎಂದೂ ಮೋದಿ ಸವಾಲು ಹಾಕಿದ್ದಾರೆ. ಜೊತೆಗೆ ಯಾರಿಗೂ ಒಳ್ಳೆಯದನ್ನು ಮಾಡುವ ಉದ್ದೇಶ ಕಾಂಗ್ರೆಸ್ ಗಿಲ್ಲ ಎನ್ನುವುದು ಸ್ಪಷ್ಟ ಎಂದೂ ಹೇಳಿದ್ದಾರೆ.