ಬೆಂಗಳೂರು: ಹಿಂದುಳಿದ ವರ್ಗಗಳ ಜನಸಂಖ್ಯೆ ರಾಜ್ಯದಲ್ಲಿ ಶೇ. 69.60ರಷ್ಟಿದ್ದು, ಅದಕ್ಕೆ ತಕ್ಕಂತೆ ಮೀಸಲಾತಿ ಜಾರಿಯಾಗಬೇಕು ಎಂದು ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ವರದಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶುಕ್ರವಾರ ಮಂಡನೆಯಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ -2015ನ್ನು ಆಧರಿಸಿ ಆಯೋಗದ ದತ್ತಾಂಶ ಅಧ್ಯಯನ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ. ಆದರೂ, ಸಂಪುಟದಲ್ಲಿ ಮಂಡನೆಯಾಗಿರುವ ವರದಿಯಲ್ಲಿನ ಪ್ರಮುಖ ಶಿಫಾರಸು ಹಾಗೂ ವಿವರಗಳು ಹೊರ ಬಿದ್ದಿವೆ. ಈ ಸಮೀಕ್ಷೆ ನಡೆದಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 6.35 ಕೋಟಿ ಜನಸಂಖ್ಯೆ ಇತ್ತು. ಈ ವೇಳೆ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳ ಪಟ್ಟಿದ್ದಾರೆ.
ಶೇ.50 ಮೀಸಲು ಆದೇಶ ಚಾಲ್ತಿಯಲ್ಲಿಲ್ಲ
ಸದ್ಯದ ಕಾನೂನಿನಂತೆ ಒಟ್ಟು ಮೀಸಲು ಶೇ.50ರಷ್ಟು ಮೀರುವಂತಿಲ್ಲ. ಆದರೆ, ಬದಲಾಗಿರುವ ಕಾಲಘಟ್ಟದಲ್ಲಿ ಪರಿಶಿಷ್ಟರ ಮೀಸಲನ್ನು ಶೇ.18ರಿಂದ ಶೇ.24ಕ್ಕೆ ಹೆಚ್ಚಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಶೇ.32 ಇದೆ. ಇಲ್ಲಿಯವರೆಗೆ ಒಟ್ಟು ಶೇ. 56ರಷ್ಟು ರಾಜ್ಯದಲ್ಲಿ ಮೀಸಲಾತಿ ಇದೆ. ಅಲ್ಲದೇ, ಕೇಂದ್ರ ಸರಕಾರ ಜಾರಿಗೊಳಿಸಿರುವ ಶೇ.10 ಇಡಬ್ಲ್ಯೂಎಸ್ ಮೀಸಲು ಸೇರಿಸಿದರೆ ರಾಜ್ಯದಲ್ಲಿನ ಸದ್ಯದ ಮೀಸಲು ಪ್ರಮಾಣ ಶೇ.66 ಆಗಿದೆ.
ಕೆನೆ ಪದರ ನಿಯಮ ಜಾರಿಯಲ್ಲಿರುವ ಕಾರಣ ಆದಾಯ ಮಿತಿ ದಾಟಿದ ಹಿಂದುಳಿದವರು ಸಾಮಾನ್ಯ ವರ್ಗಕ್ಕೆ ವರ್ಗಾವಣೆ ಆಗುವುದರಿಂದ ಮೀಸಲು ಪ್ರಮಾಣವನ್ನು ಶೇ.51ಕ್ಕೆ ಹೆಚ್ಚಿಸಬಹುದು ಎಂದು ಆಯೋಗ ಶಿಫಾರಸು ಮಾಡಿದೆ. ಶೇ.51ರಷ್ಟು ಮೀಸಲು ಪ್ರಮಾಣವನ್ನು ಪ್ರವರ್ಗವಾರು ಹಂಚಿಕೆಯನ್ನೂ ಮಾಡಿದೆ. ಏ. 17ರಂದು ನಡೆಯುವ ಸಂಪುಟ ಸಭೆಯಲ್ಲಿ ಸಮಿತಿ ಶಿಫಾರಸುಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಪ್ರಮುಖ ಶಿಫಾರಸು ಏನೇನು?
-ಮುಸ್ಲಿಂ ಸಮುದಾಯದ ಜನಸಂಖ್ಯೆ ಜಾತಿಯಾಗಿ 75.27 ಲಕ್ಷನಷ್ಟಿದೆ. ಪರಿಶಿಷ್ಟ ಜಾತಿ ಹೊರತುಪಡಿಸಿದರೆ, ಅತಿ ಹೆಚ್ಚು ಜನರಿರುವ ಏಕ ಜಾತಿಯಾಗಿದೆ. ಹೀಗಾಗಿ ಮೀಸಲು ಪ್ರಮಾಣವನ್ನು ಶೇ. 8ರಷ್ಟು ಹೆಚ್ಚಿಸಬೇಕು.
- ಒಕ್ಕಲಿಗರು 61.50 ಲಕ್ಷ ಇದ್ದು, ಉಪಜಾತಿಗಳನ್ನು ಸೇರಿಸಿದರೆ ಜನಸಂಖ್ಯೆ 72 ಲಕ್ಷ ದಷ್ಟಿದೆ. ಹೀಗಾಗಿ ಪ್ರವರ್ಗ 3(ಎ) ಪಟ್ಟಿಯಲ್ಲಿನ ಮೀಸಲು ಪ್ರಮಾಣವನ್ನು ಸದ್ಯದ ಶೇ.4ರಿಂದ ಶೇ.7ಕ್ಕೆ ಹೆಚ್ಚಿಸಬಹುದು.
- ಪ್ರವರ್ಗ 3 (ಬಿ) ಪಟ್ಟಿಯಲ್ಲಿನ ಲಿಂಗಾಯತರ ಜನಸಂಖ್ಯೆ 66 ಲಕ್ಷ ಇದೆ. ಉಪಜಾತಿಗಳು ಸೇರಿದಂತೆ ಜನಸಂಖ್ಯೆ 81 ಲಕ್ಷ ಆಗುತ್ತದೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಈ ವರ್ಗದ ಮೀಸಲನ್ನು ಸದ್ಯದ ಶೇ.5 ರಿಂದ ಶೇ.8ಕ್ಕೆ ಹೆಚ್ಚಳ ಮಾಡಬೇಕು.
- ಪ್ರವರ್ಗ -1ರಲ್ಲಿಸೇರಿರುವ ಜಾತಿಗಳಿಗೆ ಮೀಸಲನ್ನು ಶೇ.4ರಿಂದ ಶೇ.6ಕ್ಕೆ ಹೆಚ್ಚಿಸಬೇಕು. ಪ್ರವರ್ಗ 2(ಎ) ಜಾತಿಗಳನ್ನು ಮರು ವರ್ಗೀಕರಣ ಮಾಡಬೇಕು ಮತ್ತು ಸದ್ಯದ ಶೇ.15ರಿಂದ ಶೇ.22ಕ್ಕೆ ಹೆಚ್ಚಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.