ನವದೆಹಲಿ: ನಿರೀಕ್ಷೆಯಂತೆ 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಹೊಸ ನಾಯಕನಾಗಿ ನೇಮಿಸಿದೆ. ಶುಕ್ರವಾರ ಬೆಳಗ್ಗೆ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿತು. ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವ ನಿರಾಕರಿಸಿದ ನಂತರ ಅಕ್ಷರ್ ಪಟೇಲ್ ಅವರಿಗೆ ಈ ಜವಾಬ್ದಾರಿ ಸಿಕ್ಕಿದೆ. ಅಕ್ಷರ್ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಮತ್ತು ಇದೇ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಲ್ಲೊಬ್ಬರಾಗಿದ್ದಾರೆ. ಅವರ ನಾಯಕತ್ವದಲ್ಲಿ ಡೆಲ್ಲಿ ತಂಡವು ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದೀತೇ ಎಂಬುದು ಇನ್ನೂ ಕಾದು ನೋಡಬೇಕಿದೆ.

ಅಕ್ಷರ್ ಪಟೇಲ್ ಅವರನ್ನು ಕಳೆದ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂಪಾಯಿಗೆ ಡೆಲ್ಲಿ ತಂಡವು ರಿಟೇನ್ ಮಾಡಿತ್ತು. ಅಕ್ಷರ್ ಟಿ20ಯಲ್ಲಿ ನಾಯಕತ್ವ ವಹಿಸುವುದು ಇದೇ ಮೊದಲ ಬಾರಿಯಲ್ಲ. 2018 ರಿಂದ 2024 ರವರೆಗೆ 16 ಟಿ20 ಪಂದ್ಯಗಳಲ್ಲಿ ಬರೋಡಾ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಕಳೆದ ವರ್ಷ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಆ ಪಂದ್ಯದಲ್ಲಿ ಡೆಲ್ಲಿ 47 ರನ್ಗಳಿಂದ ಸೋತಿತ್ತು. ಈ ಬಾರಿ ಡೆಲ್ಲಿ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 24 ರಂದು ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಆಡಲಿದೆ.
‘ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ನನಗೆ ಅತ್ಯಂತ ಗೌರವದ ಸಂಗತಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತಂಡದ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹಲವು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನಾನು ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದಿದ್ದೇನೆ. ಈ ತಂಡವನ್ನು ಮುನ್ನಡೆಸಲು ನಾನು ಸಿದ್ಧನಾಗಿದ್ದೇನೆ ಮತ್ತು ಇದಕ್ಕೆ ನನಗೆ ಸಾಕಷ್ಟು ಆತ್ಮವಿಶ್ವಾಸವಿದೆ’ ಎಂದು ಅಕ್ಷರ್ ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು 2020 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆಗಿತ್ತು. ಆದರೆ 2022, 2023 ಮತ್ತು 2024 ರಲ್ಲಿ ಸತತ ಮೂರು ಋತುಗಳಲ್ಲಿ ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾಯಿತು.
*ಡೆಲ್ಲಿ ಕ್ಯಾಪಿಟಲ್ಸ್ ತಂಡ:*
ಕೆ.ಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಕರುಣ್ ನಾಯರ್, ಸಮೀರ್ ರಿಜ್ವಿ, ಆಶುತೋಷ್ ಶರ್ಮ, ಮೋಹಿತ್ ಶರ್ಮ, ಮುಕೇಶ್ ಕುಮಾರ್, ಫಾಫ್ ಡು ಪ್ಲೆಸಿಸ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಶ್ಮಂತ ಚಮೀರ, ಡೊನೊವನ್ ಫೆರೀರ್, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಣ ವಿಜಯ್, ಮಾಧವ್ ತಿವಾರಿ.