ನವದೆಹಲಿ: ಬಲೂಚಿಸ್ಥಾನದಲ್ಲಿ ಉಗ್ರರು ಜಾಫರ್ ಎಕ್ಸ್ ಪ್ರೆಸ್ ರೈಲು ಹೈಜಾಕ್ ಮಾಡಿದ ಪ್ರಕರಣದಲ್ಲಿ ಭಾರತದ ವಿರುದ್ಧ ಆರೋಪ ಮಾಡಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. “ಪಾಕಿಸ್ತಾನವೇ ಭಯೋತ್ಪಾದನೆಯ ಕೇಂದ್ರ ಸ್ಥಾನ ಎಂಬುದು ಜಗತ್ತಿಗೇ ಗೊತ್ತಿದೆ. ನಮ್ಮ ವಿರುದ್ಧ ಪಾಕಿಸ್ತಾನ ಮಾಡುವ ಆಧಾರರಹಿತ ಆರೋಪಗಳನ್ನು ನಾವು ಖಂಡಿಸುತ್ತೇವೆ. ತನ್ನ ದೇಶದ ಆಂತರಿಕ ಬಿಕ್ಕಟ್ಟು, ವೈಫಲ್ಯಗಳಿಗೆ ಬೇರೆಯವರತ್ತ ಬೆರಳು ತೋರಿಸುವುದನ್ನು ಬಿಡಬೇಕಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ತಿರುಗೇಟು ನೀಡಿದ್ದಾರೆ.
“ಪಾಕಿಸ್ತಾನವು ತನ್ನ ವೈಫಲ್ಯಗಳನ್ನು ಮರೆಮಾಚಲು ಭಾರತದ ವಿರುದ್ಧ ಆರೋಪ ಮಾಡುತ್ತಿದೆ. ಹುರುಳಿಲ್ಲದ ಆರೋಪಗಳನ್ನು ಭಾರತ ಖಂಡಿಸುತ್ತದೆ. ಪ್ರತಿ ಸಮಸ್ಯೆಗೂ ಬೇರೆಯವರತ್ತ ಬೆರಳು ತೋರಿಸುವ ಬದಲು, ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನ ಗಮನ ಹರಿಸುವುದು ಒಳಿತು” ಎಂದು ರಣದೀಪ್ ಜೈಸ್ವಾಲ್ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನ ಹೇಳಿದ್ದೇನು?
ಬಲೂಚಿಸ್ತಾನದಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಶಾಫ್ ಕತ್ ಅಲಿ ಖಾನ್ ಭಾರತದ ವಿರುದ್ಧ ಆರೋಪ ಮಾಡಿದ್ದರು. “ರೈಲಿನ ಮೇಲೆ ದಾಳಿ ನಡೆಸುವ ಮುನ್ನ ಉಗ್ರರು ಅಫಘಾನಿಸ್ತಾನದ ನಾಯಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಪಾಕಿಸ್ತಾನದಲ್ಲಿ ಉಗ್ರವಾದ ಹರಡುವುದರ ಹಿಂದೆ ಭಾರತದ ಕೈವಾಡವಿದೆ” ಎಂದು ಆರೋಪಿಸಿದ್ದರು.
ಜಾಫರ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್ಎ) ಉಗ್ರರು ಕಳೆದ ಮಂಗಳವಾರ ದಾಳಿ ನಡೆಸಿ, ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇದಾದ ಬಳಿಕ ಪಾಕ್ ಸೇನೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರ ದಾಳಿಗೆ 21 ಪ್ರಯಾಣಿಕರು ಹಾಗೂ ಪಾಕಿಸ್ತಾನದ ನಾಲ್ವರು ಯೋಧರು ಹತರಾಗಿದ್ದಾರೆ. ಇನ್ನು, 33 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ತಿಳಿಸಿದೆ.