ನವದೆಹಲಿ: ಭಾರತೀಯ ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ ಅಮೆರಿಕದಿಂದ ಗಡೀಪಾರು ಮಾಡಿರುವಂಥ ಅಮಾನವೀಯ ಕ್ರಮ ಗುರುವಾರ ಸಂಸತ್ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಭಾರತೀಯರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಇಂದು ಸಂಸತ್ ಭವನದ ಆವರಣದಲ್ಲಿ “ಕೈಕೋಳ ಪ್ರತಿಭಟನೆ” ನಡೆಸಿದ್ದಾರೆ.
ಕಾಂಗ್ರೆಸ್ನ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪ್ರತಿಪಕ್ಷಗಳ ಸಂಸದರು ತಮ್ಮ ತಮ್ಮ ಕೈಗಳಿಗೆ ಕೋಳಗಳನ್ನು ತೊಟ್ಟುಕೊಂಡು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದಿಂದ ಭಾರತೀಯರ ಗಡೀಪಾರು ಕುರಿತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ.

ಗುರುವಾರ ಸಂಸತ್ ನಲ್ಲಿ ಕಲಾಪಗಳು ಆರಂಭವಾದೊಡನೆ ಪ್ರತಿಪಕ್ಷಗಳ ಸಂಸದರು 104 ಭಾರತೀಯರ ಗಡೀಪಾರು ಕುರಿತು ಚರ್ಚೆಯಾಗಬೇಕೆಂದು ಆಗ್ರಹಿಸಿದರು. ಲೋಕಸಭೆಯಲ್ಲೂ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗುತ್ತಾ, ಸದನದ ಬಾವಿಗೆ ನುಗ್ಗಿ ಪ್ರತಿಭಟಿಸಲಾರಂಭಿಸಿದರು. “ಇದು ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ. ಅಲ್ಲದೆ ಇದು ಬೇರೊಂದು ದೇಶಕ್ಕೆ ಸಂಬಂಧಿಸಿದ ವಿಷಯ.
ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆ” ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಆದರೆ, ಸದಸ್ಯರ ಗದ್ದಲ ಮುಂದುವರಿದ ಕಾರಣ, ಕಲಾಪವನ್ನು ಕೆಲವು ಗಂಟೆಗಳ ಕಾಲ ಮುಂದೂಡಲಾಯಿತು. ಇದಕ್ಕೂ ಮೊದಲು, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಈ ವಿಚಾರದ ಕುರಿತು ಚರ್ಚೆಗೆ ಆಗ್ರಹಿಸಿ ನಿಲುವಳಿ ಸೂಚನೆ ಮಂಡಿಸಿದ್ದರು. ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಏನೇನು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ತಿಳಿಸಬೇಕು ಎಂದೂ ಮನವಿ ಮಾಡಿದ್ದರು.