ಬೆಂಗಳೂರು: ರಸ್ತೆ ಅಪಘಾತದ ಪರಿಹಾರ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡು ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಿರಣ್ ಕುಮಾರ್ ಎಂಬ 17 ವರ್ಷದ ಯುವಕನ ನೆರವಿಗೆ ನಿಂತಿರುವ ಹೈಕೋರ್ಟ್, ಎಂಎಸಿಟಿ ನೀಡಿದ್ದ ಪರಿಹಾರದ ಮೊತ್ತವನ್ನು ಒಂದೂವರೆ ಪಟ್ಟು ಹೆಚ್ಚಿಸಿದೆ.
ಸಂತ್ರಸ್ತ ಯುವಕನಿಗೆ 2017 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9 ರ ಬಡ್ಡಿ ಸಹಿತ 21.8 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಸೋಂಪೋ ಜನರಲ್ ವಿಮಾ ಕಂಪನಿಗೆ ಆದೇಶ ನೀಡಿದೆ.
ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ (ಎಂಎಸಿಟಿ) ಆದೇಶ ಪ್ರಶ್ನಿಸಿ ಸಂತ್ರಸ್ತ ಕಿರಣ್ ಕುಮಾರ್ ಮತ್ತು ವಿಮಾ ಕಂಪನಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಆಲಿಸಿದ ನ್ಯಾ. ಕೆ.ಎಸ್.ಮುದ್ಗಲ್ ಮತ್ತು ನ್ಯಾ.ವಿಜಯ್ಕುಮಾರ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಆದೇಶ ಹೊರಡಿಸಿದೆ.
ಕಿರಣ್ ಕುಮಾರ್ 2017ರ ಮಾರ್ಚ್ನಲ್ಲಿ ಮಡಕಶಿರಾ -ಅಮರಾಪುರಂ ರಸ್ತೆಯಲ್ಲಿ ಹಿರೇತುರ್ಪಿ ಗ್ರಾಮದ ಅಂಜನೇಯಸ್ವಾಮಿ ದೇವಾಲಯದ ಹತ್ತಿರ ಕಾರಿನಲ್ಲಿ ತೆರಳುತ್ತಿದ್ದಾಗ ಕರ್ನಾಟಕದಲ್ಲಿ ನೋಂದಾಯಿಸಿದ ಟ್ರಕ್ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದವರೆಲ್ಲಾ ಗಾಯಗೊಂಡಿದ್ದರು. ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಘಟನೆ ನಡೆದಾಗ ಕುಮಾರ್ಗೆ 10 ವರ್ಷವಾಗಿತ್ತು. ಗಾಯಗೊಂಡಿದ್ದ ಆತನಿಗೆ ಮೊದಲು ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಪರಿಶೀಲಿಸಿದಾಗ ಆತನ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಮದುವೆಯಾಗುವ ಸಾಧ್ಯತೆಯೂ ತಪ್ಪಿ ಹೋಗಿತ್ತು. ಆತ 70 ಲಕ್ಷ ರೂ. ಪರಿಹಾರ ಕೋರಿ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಮಂಡಳಿ, 2019ರಲ್ಲಿ 8.3 ಲಕ್ಷ ರೂ. ಪರಿಹಾರಕ್ಕೆ ಸೂಚಿಸಿತ್ತು. ಈಗ ಪರಿಹಾರ ಮೊತ್ತ ಹೆಚ್ಚಿಸಿದೆ.