ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಗಾಂಧಿಗಂಜ್ ನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕರ್ತವ್ಯಲೋಪ ಆರೋಪದ ಮೇಲೆ ಓರ್ವ ಮಹಿಳಾ ಹೆಡ್ ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಪುರುಷ ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್ ಆಗಿದ್ದಾರೆ. ಸಸ್ಪೆಂಡ್ ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ರಾಜೇಶ್ ಹಾಗೂ ಶಾಮಲಾ ಸಸ್ಪೆಂಡ್ ಆದವರು.
ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು ಕೂಡಲೇ ಬೀದರ್ನ ಗಾಂಧಿಗಂಜ್ ಠಾಣೆಗೆ ತೆರಳಿ ಪೊಲೀಸರ ಗಮನಕ್ಕೆ ತಂದಿದ್ದರು.
ಡೆತ್ ನೋಟ್ ಬರೆದಿಟ್ಟು ಮಗ ನಾಪತ್ತೆಯಾಗಿದ್ದಾನೆ. ಹೀಗಾಗಿ ಹುಡುಕಿ ಕೊಡುವಂತೆ ಸಚಿನ್ ಸಹೋದರ ಹಾಗೂ ಸಹೋದರಿ ಮನವಿ ಮಾಡಿದ್ದರು. ಆದರೆ, ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಒಂದು ವೇಳೆ ಪೊಲೀಸರು ದೂರು ದಾಖಲಿಸಿಕೊಂಡು ಲೋಕೇಶನ್ ಟ್ರ್ಯಾಕ್ ಮಾಡಿ ಆತನನ್ನು ಪತ್ತೆ ಹಚ್ಚಬಹುದಿತ್ತು. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.
ಬೀದರ್ನಲ್ಲಿ ಯುವ ಗುತ್ತಿಗೆದಾರ ಸಚಿನ್ (26 ವರ್ಷ) ಬಾಲ್ಕಿಯಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ತಳಕು ಹಾಕಿಕೊಂಡಿದೆ.