ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡದ ಸ್ಟಾರ್ ಬಾಲ ನಟ ರೋಹಿತ್ ಇದ್ದ ಕಾರು ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಾಟೇರ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮಾಸ್ಟರ್ ರೋಹಿತ್, ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರೋಹಿತ್ ಮತ್ತು ಅವರ ತಾಯಿ ಇಬ್ಬರಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಸ್ಟರ್ ರೋಹಿತ್, ಶ್ರೀರಂಗಪಟ್ಟಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮುಗಿಸಿ ಮರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮಾಸ್ಟರ್ ರೋಹಿತ್, ಅವರ ತಾಯಿ, ಓರ್ವ ಉಪನ್ಯಾಸಕರು ಕಾರಿನಲ್ಲಿ ಇದ್ದರು ಎನ್ನಲಾಗಿದೆ. ಕೇರಳದ ಪ್ರವಾಸಿ ಬಸ್ಸು ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ.
ರೋಹಿತ್ ಗೆ ತೀವ್ರ ಪೆಟ್ಟಾಗಿದ್ದು, ರೋಹಿತ್ರ ವಸಡು ಒಡೆದು ಹೋಗಿದೆ. ಅವರ ತಲೆ ಬುರುಡೆಗೆ ತೀವ್ರ ಪೆಟ್ಟಾಗಿದೆ. ಅವರನ್ನು ಮೈಸೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ರೋಹಿತ್ರ ತಾಯಿಯ ಎರಡೂ ಕಾಲಿಗೆ ತೀವ್ರ ಪೆಟ್ಟಾಗಿದ್ದು ಮೂಳೆಗಳು ಮುರಿದಿವೆ ಎನ್ನಲಾಗುತ್ತಿದೆ. ಉಪನ್ಯಾಸಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರೋಹಿತ್, ಒಂದಲ್ಲ ಎರಡಲ್ಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ.