ದಕ್ಷಿಣ ಭಾರತದ ಜನರು ಹೆಚ್ಚು ಮಕ್ಕಳನ್ನು ಹೇರುವಂತೆ ಈಗಾಗಲೇ ಹಲವು ರಾಜ್ಯಗಳ ಸಿಎಂ ಮನವು ಮಾಡುತ್ತಿದ್ದಾರೆ. ಈಗ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಮನವಿ ಮಾಡಿದ್ದರು. ಆಂಧ್ರಪ್ರದೇಶದ ಹಲವು ಗ್ರಾಮಗಳು ಮತ್ತು ದೇಶಾದ್ಯಂತ ಕೇವಲ ವೃದ್ಧರು ಮಾತ್ರ ಉಳಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಅಲ್ಲದೇ, ದಕ್ಷಿಣದ ರಾಜ್ಯಗಳಲ್ಲಿ ಫಲವತ್ತತೆ ದರವು ಈಗಾಗಲೇ 1.6 ಕ್ಕೆ ಕುಸಿದಿದೆ. ಇದು ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಕಡಿಮೆಯಾಗಿದೆ. ಫಲವತ್ತತೆ ದರವು ಇಳಿಮುಖವಾಗುತ್ತಿದ್ದರೆ, 2047 ರ ವೇಳೆಗೆ ವೃದ್ಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಮಕ್ಕಳ ಸಂಖ್ಯೆ ಇಳಿಕೆಯಾಗಲಿದೆ. ಹೀಗಾಗಿ ಇದು ಆತಂಕಕ್ಕೆ ಕಾರಣವಾಗುತ್ತಿದೆ.
ಈಗಾಗಲೇ ಜಪಾನ್, ಚೀನಾ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳು ಇಂತಹ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಅಲ್ಲಿನ ನಾಗರಿಕರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಸಲಹೆ ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.1.6ಕ್ಕೆ ಕುಸಿದಿದೆ ಎನ್ನಲಾಗಿದೆ. ಭಾರತದ ಸರಾಸರಿ ಬೆಳವಣಿಗೆ ದರವು 1950 ರ ದಶಕದಲ್ಲಿ 6.2% ರಿಂದ 2021 ರಲ್ಲಿ 2.1% ಕ್ಕೆ ಇಳಿದಿದೆ ಎಂದು ಚಂದ್ರಬಾಬು ನಾಯ್ಡು ಇತ್ತೀಚೆಗಷ್ಟೇ ಹೇಳಿದ್ದರು.
ಇನ್ನುಳಿದ ರಾಜ್ಯಗಳನ್ನು ನೋಡುವುದಾದರೆ ಆಂಧ್ರ ಪ್ರದೇಶ: 1.70 – ಕರ್ನಾಟಕ: 1.70 – ಕೇರಳ: 1.80 – ತಮಿಳುನಾಡು: 1.80 – ತೆಲಂಗಾಣ: 1.82 ಫಲವತ್ತತೆ ಹೊಂದಿವೆ. ಮಹಿಳೆಯರಲ್ಲಿ ಹೆಚ್ಚಿದ ಶಿಕ್ಷಣ ಮತ್ತು ಉದ್ಯೋಗಿಗಳ ಭಾಗವಹಿಸುವಿಕೆ ಮದುವೆ ಮತ್ತು ಮಗುವನ್ನು ಹೆರುವಲ್ಲಿ ವಿಳಂಬ, ಗರ್ಭನಿರೋಧಕಗಳ ಬಳಕೆಯಿಂದಾಗಿ ಫಲವತ್ತತೆ ಕಡಿಮೆಯಾಗುತ್ತಿದೆ.


















