ದಾವಣಗೆರೆ: ಮದ್ಯದಂಗಡಿ ನಡೆಸಲು ಬಿಲ್ಡಿಂಗ್ ಬಾಡಿಗೆ ಕೊಡದ ಮಾಲೀಕ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪುರಸಭೆಯ ಕಾಂಗ್ರೆಸ್ ಸದಸ್ಯ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಕಟ್ಟಡ ಮಾಲೀಕ ರುದ್ರೋಜಿರಾವ್, ಆತನ ಕುಟುಂಬ ಸದಸ್ಯರಾದ ಶ್ವೇತಾ, ರಾಹುಲ್, ಶಿವಾಜಿ ಎಂಬುವವರ ಮೇಲೆ ಪೊಲೀಸರ ಎದುರೇ ಶ್ರೀಕಾಂತ್ ಚವ್ಹಾಣ್ ಸೇರಿದಂತೆ ಆತನ ಸುಮಾರು 50 ಜನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ 3 ಅಂತಸ್ತಿನ ಸ್ವಂತ ಕಟ್ಟಡದ ಮಾಲೀಕತ್ವ ಹೊಂದಿರುವ ರುದ್ರೋಜಿರಾವ್, ಪುರಸಭೆ ಕಾಂಗ್ರೆಸ್ ಸದಸ್ಯನಿಗೆ 3 ಅಂತಸ್ತು ಕಟ್ಟಡದಲ್ಲಿ 2 ಅಂತಸ್ತಗಳನ್ನು ಬಾಡಿಗೆ ನೀಡಿದ್ದ. ಕಳೆದ 12 ವರ್ಷಗಳಿಂದ ಶ್ರೀಕಾಂತ್ ಗೆ ಸೇರಿದ್ದ ಮದ್ಯದ ಅಂಗಡಿ ಈ ಶಾಪ್ ನಲ್ಲಿ ನಡೆಯುತ್ತಿತ್ತು. ಆದರೆ, ಶಾಪ್ ರಿನಿವಲ್ ಮಾಡುವಾಗ ಬಿಲ್ಡಿಂಗ್ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬದಲಿಗೆ ಬಿಲ್ಡಿಂಗ್ ಮಾಲೀಕ ರುದ್ರೋಜಿರಾವ್ ಅವರ ಸಹಿ ನಕಲಿ ಮಾಡಿ ರಿನಿವಲ್ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನು ಮಾಲೀಕ ಪ್ರಶ್ನಿಸಿದ್ದರು. ಅಲ್ಲದೇ, ಶ್ರೀಕಾಂತ್ ಮೇಲೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದರು. ಆದಕ್ಕೆ ಆಕ್ರೋಶಗೊಂಡ ಶ್ರೀಕಾಂತ್, ಬೆಂಬಲಿಗರನ್ನು ಕರೆದುಕೊಂಡು ಬಂದು ಕಗತೂರು ಕ್ರಾಸ್ ನಲ್ಲಿ ಹಲ್ಲೆ ನಡೆಸಿದ್ದೆ ಎನ್ನಲಾಗಿದೆ. ಈ ವೇಳೆ ಪೊಲೀಸರೂ ಇದ್ದರು ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.