ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಭಾರತೀಯ ಕ್ರಿಕೆಟ್ಗೆ ಯುವ ಪ್ರತಿಭೆಗಳನ್ನು ಪರಿಚಯಿಸುವ ಒಂದು ಪ್ರಮುಖ ವೇದಿಕೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಸಾಮಾನ್ಯ. ಆದರೆ, ಈ ಬಾರಿಯ ಏಷ್ಯಾ ಕಪ್ 2025ಕ್ಕೆ ಆಯ್ಕೆ ಪ್ರಕ್ರಿಯೆ ಭಿನ್ನವಾಗಿರುವ ಸಾಧ್ಯತೆಯಿದೆ. ಆಗಸ್ಟ್ 19 ರಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಏಷ್ಯಾ ಕಪ್ ತಂಡವನ್ನು ಪ್ರಕಟಿಸಲಿದ್ದು, ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಲವು ಸ್ಟಾರ್ ಆಟಗಾರರೇ ತಂಡದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಏಷ್ಯಾ ಕಪ್ ಮುಗಿದ ಕೆಲವೇ ದಿನಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಆರಂಭವಾಗುವುದರಿಂದ, ಆಟಗಾರರ ಕಾರ್ಯದೊತ್ತಡ ಮತ್ತು ವಿವಿಧ ಮಾದರಿಯ ಕ್ರಿಕೆಟ್ಗೆ ಅವರ ಅವಶ್ಯಕತೆಯನ್ನು ಆಯ್ಕೆ ಸಮಿತಿ ಪರಿಗಣಿಸಲೇಬೇಕಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್ನಲ್ಲಿ ಮಿಂಚಿದರೂ ಏಷ್ಯಾ ಕಪ್ಗೆ ಆಯ್ಕೆಯಾಗದ ಸಂಭಾವ್ಯ ಐದು ಆಟಗಾರರ ಕುರಿತಾದ ವಿವರಗಳು ಇಲ್ಲಿವೆ.

- ಕೆ.ಎಲ್. ರಾಹುಲ್
ದೆಹಲಿ ಕ್ಯಾಪಿಟಲ್ಸ್ ಪರ ತಮ್ಮ ಮೊದಲ ಸೀಸನ್ನಲ್ಲೇ ಕೆ.ಎಲ್. ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 13 ಪಂದ್ಯಗಳಿಂದ 149.72ರ ಸ್ಟ್ರೈಕ್ ರೇಟ್ನಲ್ಲಿ 539 ರನ್ ಗಳಿಸಿ, ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೆ, ಭಾರತದ ಟಿ20 ತಂಡದಲ್ಲಿ ಈಗಾಗಲೇ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರಂತಹ ಕೀಪರ್ಗಳು ಸ್ಪರ್ಧೆಯಲ್ಲಿದ್ದಾರೆ. ರಾಹುಲ್ ಅವರು 2022ರ ಟಿ20 ವಿಶ್ವಕಪ್ ಸೆಮಿಫೈನಲ್ ನಂತರ ಭಾರತದ ಪರ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. ಯುವ ಮತ್ತು ಆಕ್ರಮಣಕಾರಿ ಆಟಗಾರರಿಗೆ ಮಣೆ ಹಾಕುತ್ತಿರುವ ಆಯ್ಕೆ ಸಮಿತಿಯ ಇತ್ತೀಚಿನ ನಡೆಗಳನ್ನು ಗಮನಿಸಿದರೆ, ರಾಹುಲ್ ಅವರನ್ನು ಏಷ್ಯಾ ಕಪ್ಗೆ ಪರಿಗಣಿಸುವ ಸಾಧ್ಯತೆ ಕಡಿಮೆ. - ಯಶಸ್ವಿ ಜೈಸ್ವಾಲ್
ರಾಜಸ್ಥಾನ್ ರಾಯಲ್ಸ್ನ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಐಪಿಎಲ್ 2025ರಲ್ಲಿ 14 ಪಂದ್ಯಗಳಿಂದ 159.71ರ ಸ್ಟ್ರೈಕ್ ರೇಟ್ನಲ್ಲಿ 559 ರನ್ ಗಳಿಸಿ ಮಿಂಚಿದ್ದಾರೆ. ಆದರೆ, ಜೈಸ್ವಾಲ್ ಭಾರತದ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ ಮತ್ತು ಏಷ್ಯಾ ಕಪ್ ಫೈನಲ್ ಮುಗಿದ ಕೇವಲ ಮೂರು ದಿನಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಆಯ್ಕೆ ಸಮಿತಿಯು ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚು ಗಮನಹರಿಸುವಂತೆ ಜೈಸ್ವಾಲ್ಗೆ ಸೂಚಿಸಿರುವ ಸಾಧ್ಯತೆ ಇದೆ. - ಶ್ರೇಯಸ್ ಅಯ್ಯರ್
ಐಪಿಎಲ್ 2025ರಲ್ಲಿ 650 ರನ್ ಗಳಿಸಿ ತಮ್ಮ ಪಂಜಾಬ್ ಕಿಂಗ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಶ್ರೇಯಸ್ ಅಯ್ಯರ್, ಕಳೆದ ಎರಡು ವರ್ಷಗಳಲ್ಲಿ ಭಾರತದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. 2023ರ ಏಕದಿನ ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಪ್ರದರ್ಶನ ಅಮೋಘವಾಗಿತ್ತು. ಆದರೆ, ಪ್ರಸ್ತುತ ಭಾರತದ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರ ದಂಡೇ ಇರುವುದರಿಂದ, ಅಯ್ಯರ್ಗೆ ಸ್ಥಾನ ಸಿಗುವುದು ಕಷ್ಟಸಾಧ್ಯ. - ಸಾಯಿ ಸುದರ್ಶನ್
ಐಪಿಎಲ್ 2025ರ ನಿಜವಾದ ಹೀರೋ ಎಂದರೆ ಸಾಯಿ ಸುದರ್ಶನ್. 15 ಪಂದ್ಯಗಳಿಂದ 759 ರನ್ ಗಳಿಸಿ, ಟೂರ್ನಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದರೆ, ಭಾರತದ ಟಿ20 ತಂಡದ ಅಗ್ರ ಕ್ರಮಾಂಕವು ಈಗಾಗಲೇ ಬಲಿಷ್ಠ ಆಟಗಾರರಿಂದ ತುಂಬಿದೆ. ಆರಂಭಿಕ ಅಥವಾ 3ನೇ ಕ್ರಮಾಂಕದಲ್ಲಿ ಆಡಲು ಇಷ್ಟಪಡುವ ಸುದರ್ಶನ್ಗೆ, ಸದ್ಯದ ಮಟ್ಟಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. - ಜಸ್ಪ್ರೀತ್ ಬುಮ್ರಾ
ಯಾವುದೇ ಮಾದರಿಯ ಕ್ರಿಕೆಟ್ನಲ್ಲಾದರೂ ಜಸ್ಪ್ರೀತ್ ಬುಮ್ರಾ ಅವರ ಸ್ಥಾನ ಖಚಿತ. ಐಪಿಎಲ್ನಲ್ಲೂ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಆದರೆ, ಏಷ್ಯಾ ಕಪ್ ನಂತರ ತಕ್ಷಣವೇ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು, ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮುಂಬರುವ ಸರಣಿಗಳಿಗಾಗಿ ಅವರ ಕಾರ್ಯದೊತ್ತಡವನ್ನು ನಿರ್ವಹಿಸುವುದು ಆಯ್ಕೆ ಸಮಿತಿಯ ಪ್ರಮುಖ ಆದ್ಯತೆಯಾಗಿದೆ. ಭಾರತ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯನ್ನು ಬುಮ್ರಾ ಇಲ್ಲದೆಯೇ ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.



















