ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಉಲ್ಬಣಗೊಂಡಿದ್ದ ಕಾರಣ ಮುಚ್ಚಲ್ಪಟ್ಟಿದ್ದ ದೇಶದ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾರಂಭಗೊಂಡಿವೆ. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ಸಂಬಂಧಿತ ವಿಮಾನನಿಯಂತ್ರಣ ಪ್ರಾಧಿಕಾರಗಳು ಸೋಮವಾರ 32 ವಿಮಾನ ನಿಲ್ದಾಣಗಳನ್ನು ತೆರೆಯಲು ಏರ್ಮೆನ್ಗಳಿಗೆ (NOTAM) ನೋಟಿಸ್ ನೀಡಿದ್ದಾರೆ.
“15 ಮೇ 2025ರಂದು 05:29 ಗಂಟೆಯವರೆಗೆ ನಾಗರಿಕ ವಿಮಾನಯಾನ ಸಂಚಾರವಿದ್ದ 32 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಹಿಂದೆ ಆದೇಶ ನೀಡಲಾಗಿತ್ತು. ಆದರೆ ಈಗ ಈ ವಿಮಾನ ನಿಲ್ದಾಣಗಳು ತತ್ ಕ್ಷಣದಿಂದಲೇ ನಾಗರಿಕರ ಸೇವೆಗೆ ಲಭ್ಯವಿದೆ. ಪ್ರಯಾಣಿಕರು ವೈಮಾನಿಕ ಕಂಪನಿಗಳೊಂದಿಗೆ ವಿಮಾನ ಸಂಚಾರ ಸ್ಥಿತಿಗತಿಯನ್ನು ಪರಿಶೀಲಿಸಬಹುದು ಮತ್ತು ಸಂಪೂರ್ಣ ಮಾಹಿತಿಗಾಗಿ ಕಂಪನಿಗಳ ವೆಬ್ಸೈಟ್ಗಳನ್ನು ಗಮನಿಸುವಂತೆ ಸೂಚಿಸಲಾಗಿದೆ,” ಎಂದು ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಈ ಪ್ರಕಟಣೆಯ ಬೆನ್ನಲ್ಲೇ, ಸೋಮವಾರ 12ನೇ ಮೇ 2025ರಂದು ಬೆಳಿಗ್ಗೆ 10:30ರಿಂದಲೇ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲ್ಲ ಸೇವೆಗಳು ಪುನಾರಂಭಗೊಂಡಿವೆ ಎಂದು ಚಂಡೀಗಢ ವಿಮಾನ ನಿಲ್ದಾಣ ಪ್ರಕಟಣೆ ಹೊರಡಿಸಿದೆ.
ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಘೋಷಿಸಿದ ಬಳಿಕ, ಜಮ್ಮು ಕಾಶ್ಮೀರ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿ ‘ಬಹುತೇಕ ಶಾಂತ’ವಾಗಿದೆ. ಗಡಿಯಲ್ಲಿ ಕೇಳಿಬರುತ್ತಿದ್ದ ಗುಂಡಿನ ಸದ್ದು, ಶೆಲ್ ದಾಳಿಗಳೂ ನಿಂತಿವೆ.
ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಚ್ಚಿದ ವಿಮಾನ ನಿಲ್ದಾಣಗಳನ್ನು ತೆರೆದು ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಭಾರತ- ಪಾಕ್ ಗಡಿ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಶ್ರೀನಗರ, ಅಮೃತಸರ ಸೇರಿದಂತೆ ದೇಶದ ಉತ್ತರ ಹಾಗೂ ಪಶ್ಚಿಮ ಭಾಗದ 32 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಮೇ 15ರವರೆಗೆ ಈ ಆದೇಶ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಆದರೆ, ಸದ್ಯ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವ ಕಾರಣ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪುನಾರಂಭಿಸಲು ನಿರ್ಧರಿಸಲಾಗಿದೆ.
ಯಾವೆಲ್ಲ ವಿಮಾನ ನಿಲ್ದಾಣಗಳು ಮುಚ್ಚಿದ್ದವು?
ಅಧಾಂಪುರ, ಅಂಬಾಲಾ, ಅಮೃತಸರ, ಅವಂತಿಪುರ, ಭಟಿಂಜಾ, ಭುಜ್, ಬಿಕಾನೇರ್, ಚಂಡೀಗಢ, ಹಲ್ವಾರಾ, ಹಿಂಡನ್, ಜೈಸಲ್ಮೇರ್, ಜಮ್ಮು, ಜಾಮ್ ನಗರ್, ಜೋಧ್ ಪುರ, ಕಾಂಡ್ಲಾ, ಕಾಂಗ್ರಾ, ಕೆಶೋಡ್, ಕೃಷ್ಣಗಡ, ಕುಲು ಮನಾಲಿ, ಲೇಹ್, ಲುಧಿಯಾನಾ, ಮುಂದ್ರಾ, ನಲಿಯಾ, ಪಠಾಣ್ ಕೋಟ್, ಪಟಿಯಾಲಾ, ಪೋರಬಂದರ್, ರಾಜ್ ಕೋಟ್, ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯ್ಸೆ, ಉತ್ತರಲಾಯಿ.