ಬೆಂಗಳೂರು: ಮಳೆಯಿಂದಾಗಿ ಜನರು ಕಷ್ಟ ಪಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಜನರ ಕಣ್ಣೀರು ಒರೆಸುವುದನ್ನು ಬಿಟ್ಟು, ಈಗ ಸಿಎಂ ರೌಂಡ್ ಹೊಡೆಯುತ್ತಾರೆಂಬ ಕಾರಣಕ್ಕೆ ತರಾತುರಿ, ಭರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿಟಿ ರೌಂಡ್ಸ್ ಹಿನ್ನಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಬಿಬಿಎಂಪಿ ಅಲರ್ಟ್ ಆಗಿದೆ. ಮಳೆ ಬಂದ್ರೆ ಇಲ್ಲ. ಸಿಎಂ ಬಂದ್ರೆ ಮಾತ್ರ ಕ್ಲಿನಿಂಗ್ ಕೆಲಸ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಿಎಂ ಭೇಟಿ ಹಿನ್ನಲೆಯಲ್ಲಿ ಹಲವಾರು ಕಾಮಗಾರಿಗಳನ್ನು ಬೆಳಗ್ಗೆಯಿಂದ ಮಾಡಲಾಗುತ್ತಿದೆ. ಸಾಯಿ ಲೇಔಟ್ ನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಪರಿತಪಿಸಿದ್ದಾರೆ. ಮಕ್ಕಳು, ವಯೋವೃದ್ಧರು, ಮಹಿಳೆಯರು ನಿದ್ದೆ ಇಲ್ಲದೆ, ರೋಗಕ್ಕೆ ಜಾರಿದ್ದಾರೆ. ಇಷ್ಟಿದ್ದರೂ ಮೌನವಹಿಸಿದ್ದ ಅಧಿಕಾರಿಗಳು ಇವತ್ತು ತ್ವರಿತಗತಿಯಲ್ಲಿ ನೀರು ಹೊರ ಹಾಕುವ ಕಾರ್ಯ ಮಾಡಿದ್ದಾರೆ.
ಇಷ್ಟು ದಿನ ಮಳೆ ಬಂದರೂ ರಸ್ತೆಗಳನ್ನು ಕ್ಲೀನ್ ಮಾಡದ ಸಿಬ್ಬಂದಿ, ಈಗ ಎಲ್ಲ ರಸ್ತೆಗಳನ್ನೂ ಕ್ಲೀನ್ ಮಾಡುತ್ತಿದ್ದಾರೆ. ಸಿಎಂ ಭೇಟಿ ಫಿಕ್ಸ್ ಆಗುತ್ತಿದ್ದಂತೆ ಚರಂಡಿ,ರಾಜಕಾಲುವೆ, ಎಲ್ಲವನ್ನೂ ಕ್ಲೀನ್ ಮಾಡಿದ್ದಾರೆ. ಅಧಿಕಾರಿಗಳ ಈ ಕಣ್ಣೋರೆಸುವ ತಂತ್ರಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.