ಒಂದಲ್ಲಾ, ಎರಡಲ್ಲಾ… ಬರೋಬ್ಬರಿ 9 ತಾಣಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ್ ಸಾಕಾರಗೊಳಿಸಿದೆ. ಪಾಕಿಸ್ತಾನದೊಳಗೆ ನುಗ್ಗಿ, ಅಡಗಿ ಕುಳಿತಿದ್ದ ಉಗ್ರರನ್ನು ಹೊಡೆದು ತೆಗೆಯೋದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಅತ್ಯಗತ್ಯ. ಪ್ರತೀಕಾರದ ಈ ಸರ್ಜಿಕಲ್ ಸ್ಟ್ರೈಕ್ ಇವತ್ತು 100ಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಿದೆ ಅಂದ್ರೆ ಅದರ ಹಿಂದೆ ನಾರೀಶಕ್ತಿಯ ನೆರಳಿದೆ.
ಆಪರೇಷನ್ ಸಿಂಧೂರ್ ಮಹಿಳಾ ದ್ಯೋತಕ
ಇವತ್ತು ಭಾರತ ಅತಿದೊಡ್ಡ ವಿಜಯೋತ್ಸವವನ್ನು ಆಚರಿಸ್ತಿದೆ. ಪಾಕಿಗಳನ್ನು ಅದರ ನೆಲದಲ್ಲೇ ಚೆಂಡಾಡಿದ ಪರಿ ಭರತವಾಸಿಗಳನ್ನು ಹಬ್ಬದ ಸಂಭ್ರಮದಲ್ಲಿ ಮುಳುಗುವಂತೆ ಮಾಡಿದೆ. ಇಂಥಾ ಐತಿಹಾಸಿಕ ಆಪರೇಷನ್ ಸಿಂಧೂರ್ ಯಶಸ್ಸನ್ನು ಜಗತ್ತಿನ ಮುಂದೆ ತೆರೆದಿಟ್ಟದ್ದು ಭಾರತದ ವೀರವನಿತೆ. ಯೆಸ್, ಅದು ಬೇರಾರು ಅಲ್ಲ ಕರ್ನಲ್ ಸೋಫಿಯಾ ಖುರೇಶಿ.
ಬಿಪಿನ್ ರಾವತ್ ರಿಂದ ಮೆಚ್ಚುಗೆ ಗಳಿಸಿದ್ದ ಸೋಫಿಯಾ
ಮೂಲತ ಗುಜರಾತ್ ನವರಾದ ಸೋಫಿಯಾ ಖುರೇಶಿ ರಕ್ತದಲ್ಲೇ ಸೇನೆ ಆವರಿಸಿದೆ. ಸೋಫಿಯಾರ ತಾತನಿಂದ ಆರಂಭವಾದ ಆರ್ಮಿಯ ನಂಟು ಇಂದಿಗೂ ಅಚ್ಚಳಿಯದೆ ಉಳಿದಿದೆ. ಇವರ ಪತಿ ಕೂಡಾ ಆರ್ಮಿಯ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸ್ತಿದ್ದಾರೆ. 2006ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಪಡೆಯ ನೇತೃತ್ವ ವಹಿಸಿದ್ರು ಸೋಫಿಯಾ. ಕಾಂಗೋದಲ್ಲಿ ನಡೆದ ಕಾರ್ಯಾಚರಣೆಯ ಭಾಗವಾಗಿ ಅವರು ತಮ್ಮ ಪರಾಕ್ರಮ ಮೆರೆದಿದ್ರು. ಅಷ್ಟೇ ಅಲ್ಲಾ ಅಂದು ಸೋಫಿಯಾ ಖುರೇಶಿಯ ಸೇನೆಗಾಗಿನ ತುಡಿತವನ್ನು ಕಂಡಿದ್ದ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಸೋಫಿಯಾ ಇಂದು ಸೇನೆಯಲ್ಲಿರೋದು ಅವರ ಅರ್ಹತೆಯಿಂದಾಗಿಯೇ ಹೊರತು ಅವರೊಬ್ಬ ಮಹಿಳೆ ಅಂತಲ್ಲಾ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಂಥಾ ಖುರೇಶಿ ಇಂದು ಆಪರೇಷನ್ ಸಿಂಧೂರ್ ದ ಯಶಸ್ಸನ್ನು ಜಗತ್ತಿನ ಮುಂದೆ ತೆರೆದಿಡೋ ಮೂಲಕ ಮತ್ತೊಮ್ಮೆ ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ.