ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಸರ್ವಪಕ್ಷಗಳ ನಿಯೋಗಗಳು ಈಗಾಗಲೇ ವಿದೇಶಗಳಿಗೆ ತೆರಳಿ ಪಾಕ್ ಬಣ್ಣ ಬಯಲು ಮಾಡುತ್ತಿವೆ. ಈ ಪೈಕಿ ಸ್ಪೇನ್ಗೆ ತೆರಳಿರುವ ನಿಯೋಗದ ಪ್ರತಿನಿಧಿಯಾಗಿರುವ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿಯವರಿಗೆ ಅಲ್ಲಿ ಅನಿರೀಕ್ಷಿತ ಪ್ರಶ್ನೆಯೊಂದು ಎದುರಾಗಿದೆ. ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಕನಿಮೋಳಿಯವರಿಗೆ ಸ್ಪೇನ್ ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಕನಿಮೋಳಿಯವರು ಕೊಟ್ಟ ಉತ್ತರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ರಾಷ್ಟ್ರೀಯ ಭಾಷೆಯಾಗಿದೆ. ಇದೇ ಸಂದೇಶವನ್ನು ನಮ್ಮ ನಿಯೋಗಗಳು ಜಗತ್ತಿಗೆ ಸಾರಲು ಬಂದಿವೆ” ಎಂದು ಕನಿಮೋಳಿ ಉತ್ತರಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರದ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಕನಿಮೋಳಿ ಅವರಿಗೆ ಇಂಥದ್ದೊಂದು ಪ್ರಶ್ನೆ ಎದುರಾಗಿದ್ದು ಮತ್ತು ಅವರು ಅದಕ್ಕೆ ಸೂಕ್ತ ಉತ್ತರ ನೀಡಿರುವುದು ಗಮನ ಸೆಳೆದಿದೆ.
ಇದೇ ವೇಳೆ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಶ್ನೆಗೂ ಉತ್ತರಿಸಿದ ಅವರು, “ನಮ್ಮ ದೇಶದಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಿದೆ. ಆದರೆ, ದುರದೃಷ್ಟವಶಾತ್ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ನಾವು ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು. ಹಾಗಂತ ಯುದ್ಧ ಅನಗತ್ಯ. ಭಾರತವು ಸುರಕ್ಷಿತ ಸ್ಥಳವಾಗಿದ್ದು, ಕಾಶ್ಮೀರವು ಸುರಕ್ಷಿತವಾಗಿರುವಂತೆ ಸರ್ಕಾರ ನೋಡಿಕೊಳ್ಳಲಿದೆ” ಎಂದಿದ್ದಾರೆ.
ಭಾರತೀಯರಾದ ನಾವು, ಭಾರತವು ಸುರಕ್ಷಿತ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಬೇಕಿದೆ. ಅವರು ಏನು ಬೇಕೋ ಅದನ್ನು ಪ್ರಯತ್ನಿಸುತ್ತಿರಲಿ, ನಮ್ಮ ಹಳಿ ತಪ್ಪಿಸಲು ಅವರಿಂದ ಸಾಧ್ಯವಿಲ್ಲ. ಕಾಶ್ಮೀರವು ಸುರಕ್ಷಿತ ಸ್ಥಳವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಕನಿಮೋಳಿ ನೇತೃತ್ವದ ನಿಯೋಗದ 5 ದೇಶಗಳ ಪ್ರವಾಸದಲ್ಲಿ ಸ್ಪೇನ್ ಕೊನೆಯದಾಗಿದ್ದು, ಅದನ್ನು ಮುಗಿಸಿ ನಿಯೋಗವು ಸ್ವದೇಶಕ್ಕೆ ಮರಳಲಿದೆ. ಈ ತಂಡದಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ, ಬಿಜೆಪಿಯ ಬೃಜೇಶ್ ಚೌಟ, ಆಪ್ ಸಂಸದ ಅಶೋಕ್ ಮಿತ್ತಲ್, ಆರ್ ಜೆಡಿಯ ಪ್ರೇಮ್ ಚಂದ್ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ಮಂಜೀವ್ ಸಿಂಗ್ ಪುರಿ ಇದ್ದಾರೆ.