ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ರೆಡ್ಡಿ v/s ರಾಮುಲು ಮಾತಿನ ಸಮರದ ವಿಚಾರಕ್ಕೆ ಸಂಬಂಧಿಸಿದಂತೆ, ಪಕ್ಷ ಬಿಡುವ ನಿರ್ಧಾರದಿಂದ ಬಿ.ಶ್ರೀರಾಮುಲು ಹಿಂದಕ್ಕೆ ಸರಿದಿದ್ದಾರೆ. ರೆಡ್ಡಿ v/s ರಾಮುಲು ಮಾತಿನ ಸಮರದ ನಡುವೆಯೇ ಹೈಕಮಾಂಡ್ ನಾಯಕರು ಎಂಟ್ರಿ ಕೊಟ್ಟಿದ್ದು, ಪಕ್ಷಕ್ಕೆ ನಾನು ಬೇಡವಾದ್ರೆ, ಪಕ್ಷ ಬಿಡಲು ಸಿದ್ಧ ಎಂದಿದ್ದ ಬಿ. ಶ್ರೀರಾಮುಲುಗೆ ಬುದ್ಧಿವಾದ ಹೇಳಿದ್ದಾರೆ.
ಮಾಜಿ ಸಚಿವ ಬಿ.ಶ್ರೀರಾಮುಲುಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ನಿನ್ನೆ ಜೆ. ಪಿ.ನಡ್ಡಾ ಕರೆ ಮಾಡಿದ್ದರು. ಇಂದು ಮತ್ತೊಮ್ಮೆ ಜೆ.ಪಿ.ನಡ್ಡಾರ ಕಚೇರಿಯಿಂದ ರಾಮುಲುಗೆ ಕರೆ ಬಂದಿದ್ದು ಸಾಲು ಸಾಲು ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಕಳೆದ ಮೂರು ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ರೆಡ್ಡಿ v/s ರಾಮುಲು ಮಾತಿನ ಸಮರಕ್ಕೆ ಬ್ರೇಕ್ ಹಾಕಲೇಬೇಕೆಂದು ತೀರ್ಮಾನ ಮಾಡಿದ ಬಿಜೆಪಿಯ ರಾಷ್ಟ್ರೀಯಾಧ್ಯಕ್ಷ ನಡ್ಡಾ, ರಾಧಾಮೋಹನ್ ದಾಸ್ ಅಗರ್ವಾಲ್ ಮಾತಿನಿಂದ ನಿಮಗೆ ಬೇಸರವಾಗಿದೆ. ಆದ್ರೆ ಪಕ್ಷ ಬಿಡಬೇಡಿ ಎಂದು ಸಲಹೆ ಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, ಮುಂದಿನ ವಾರ ದೆಹಲಿಗೆ ಬನ್ನಿ. ಇಲ್ಲಿ ಮಾತನ್ನಾಡೋಣ. ನಿಮ್ಮ ಹಾಗೂ ರೆಡ್ಡಿ ನಡುವೆ ಇರುವ ಭಿನ್ನಾಭಿಪ್ರಾಯವನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಿ. ಹಾದಿ ಬೀದಿ ರಂಪಾಟ ಮಾಡಿಕೊಳ್ಳಬೇಡಿ. ಕಳೆದ 35-40 ವರ್ಷದಿಂದ ನೀವಿಬ್ಬರು ಒಟ್ಟೊಟ್ಟಿಗೆ ಬೆಳೆದಿದ್ದೀರಿ. ಈಗ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ, ನಾನೊಂದು ತೀರಾ, ನೀನೊಂದು ತೀರಾ ಎಂಬಂತಾಗುವುದು ಬೇಡ. ನಿಮ್ಮಿಬ್ಬರ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು ರಾಜ್ಯದಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ. ಇನ್ನೆರಡು ದಿನದೊಳಗೆ ಈ ಗದ್ದಲಕ್ಕೆ ತೆರೆ ಬೀಳಬೇಕು. ಮುಂದಿನ ವಾರ ನೀವು ದೆಹಲಿಗೆ ಬನ್ನಿ. ಇಲ್ಲಿ ಕುಳಿತು ಮಾತನ್ನಾಡೋಣ ಎಂದು ಜೆ.ಪಿ.ನಡ್ಡಾರ ಕಚೇರಿಯಿಂದ ರಾಮುಲುಗೆ ಇಂದು ಕರೆ ಬಂದಿದೆ.
ಯಾವಾಗ ರಾಮುಲುಗೆ ನಡ್ಡಾರ ಕಚೇರಿಯಿಂದ ಕರೆ ಬಂದಿದೆಯೋ, ಸದ್ಯ ಯಾವುದೇ ಹೇಳಿಕೆ ನೀಡದಂತೆ ಸುಮ್ಮನಾಗಿದ್ದಾರೆ. ಮುಂದಿನ ವಾರ ದೆಹಲಿಗೆ ನಿಶ್ಚಿತವಾಗಿ ಬರುತ್ತೇನೆ ಎಂದು ರಾಮುಲು ತಿಳಿಸಿದ್ದು, ಹೈಕಮಾಂಡ್ ನಾಯಕರ ಆದೇಶದಂತೆ ದೆಹಲಿಗೆ ತೆರಳಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆ ರೆಡ್ಡಿ v/s ರಾಮುಲು ಮಾತಿನ ಸಮರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ರಾಮುಲು ಪಕ್ಷ ತೊರೆಯುವ ನಿರ್ಧಾರದಿಂದಲೂ ಹಿಂದಕ್ಕೆ ಸರಿದಿದ್ದಾರೆ.