ಮುಂಬೈ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮುಂಬೈನ ಮಲಾಡ್ ಪ್ರದೇಶದ ಎರಂಗಲ್ ಗ್ರಾಮದಲ್ಲಿರುವ ಅವರ ಆಸ್ತಿಯಲ್ಲಿ ಅನಧಿಕೃತವಾಗಿ ನೆಲ ಮಹಡಿ ಮತ್ತು ಮೆಜ್ಜನೈನ್ ಮಹಡಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಈ ನೋಟಿಸ್ ನೀಡಲಾಗಿದೆ.
ಮುಂಬೈನ ಮಡ್ ಪ್ರದೇಶದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಎಂಸಿ ಈಗಾಗಲೇ ಕೈಗೊಂಡಿದೆ. ಈ ಸಂದರ್ಭದಲ್ಲಿ ಮಿಥುನ್ ಚಕ್ರವರ್ತಿ ಅವರ ಹೆಸರೂ ಕೇಳಿಬಂದಿದೆ. ಎರಂಗಲ್ ಗ್ರಾಮದಲ್ಲಿರುವ ಅವರ ಆಸ್ತಿಯಲ್ಲಿ ನಿರ್ಮಿಸಲಾಗಿರುವ ರಚನೆಗೆ ಸೂಕ್ತ ಅನುಮತಿ ಪಡೆದಿಲ್ಲ ಎಂದು ಬಿಎಂಸಿ ಆರೋಪಿಸಿದೆ. ಈ ಸಂಬಂಧ ನಟನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಸಮರ್ಪಕ ವಿವರಣೆ ನೀಡದಿದ್ದರೆ ಆ ಕಟ್ಟಡವನ್ನು ಕೆಡವಿ ಹಾಕುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಮಿಥುನ್ ಚಕ್ರವರ್ತಿ ಪ್ರತಿಕ್ರಿಯೆ:
ನೋಟಿಸ್ಗೆ ಪ್ರತಿಕ್ರಿಯಿಸಿರುವ ನಟ ಮಿಥುನ್ ಚಕ್ರವರ್ತಿ, “ನಾನು ಯಾವುದೇ ಅಕ್ರಮ ನಿರ್ಮಾಣ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ನೋಟಿಸ್ಗೆ ಸೂಕ್ತ ಉತ್ತರ ನೀಡಲು ಸಿದ್ಧತೆ ನಡೆಸುತ್ತಿರುವುದಾಗಿಯೂ ತಿಳಿಸಿದ್ದಾರೆ.

ಮುಂಬೈನ ಮಲಾಡ್ ಮತ್ತು ಮಡ್ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಎಂಸಿ ಈ ಪ್ರದೇಶಗಳಲ್ಲಿ ಕಟ್ಟಡಗಳ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಈ ಕಾರ್ಯಾಚರಣೆಯ ಭಾಗವಾಗಿ ಹಲವು ಪ್ರಮುಖ ವ್ಯಕ್ತಿಗಳ ಆಸ್ತಿಗಳ ಮೇಲೆ ನಿಗಾ ಇರಿಸಿರುವ ಬಿಎಂಸಿ, ಅಗತ್ಯ ದಾಖಲೆಗಳಿಲ್ಲದ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಮಿಥುನ್ ಚಕ್ರವರ್ತಿ ಅವರ ಆಸ್ತಿಯ ಮೇಲಿನ ಈ ಕ್ರಮವು ಈ ಕಾರ್ಯಾಚರಣೆಯ ಒಂದು ಭಾಗವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ:
ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಟ್ವೀಟರ್ನಲ್ಲಿ ಹಲವು ಬಳಕೆದಾರರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಬಿಎಂಸಿ ಕ್ರಮವನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಮಿಥುನ್ ಚಕ್ರವರ್ತಿಯಂತಹ ಹಿರಿಯ ಕಲಾವಿದರಿಗೆ ಈ ರೀತಿಯ ನೋಟಿಸ್ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಮಿಥುನ್ ಚಕ್ರವರ್ತಿಗೆ ನೀಡಲಾಗಿರುವ ಶೋಕಾಸ್ ನೋಟಿಸ್ಗೆ ಉತ್ತರಿಸಲು ಬಿಎಂಸಿ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ಸಮರ್ಪಕ ದಾಖಲೆಗಳನ್ನು ಸಲ್ಲಿಸದಿದ್ದರೆ, ಬಿಎಂಸಿ ಈ ಕಟ್ಟಡವನ್ನು ಕೆಡವಿ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.