ನವದೆಹಲಿ: ಇತ್ತೀಚೆಗೆ 26 ಜನರನ್ನು ಬಲಿಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ ಒದಗಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠವು, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ ವಕೀಲ ವಿಶಾಲ್ ತಿವಾರಿ ಅವರನ್ನು ತರಾಟೆಗೆ ತೆಗೆದುಕೊಂಡಿತು. ನಿಮ್ಮ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕಂಡುಬರುತ್ತಿಲ್ಲ. ಯಾವುದೋ ದುರುದ್ದೇಶದಿಂದ ಇದನ್ನು ಸಲ್ಲಿಸಿದಂತೆ ಕಾಣುತ್ತಿದೆ. ಕೇವಲ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಜಿದಾರರ ವಿರುದ್ಧ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.
“ನೀವು ಈ ರೀತಿಯ ಅರ್ಜಿಯನ್ನು ಸಲ್ಲಿಸಿರುವುದೇಕೆ? ನಿಮ್ಮ ನೈಜ ಉದ್ದೇಶವೇನು? ಸಮಸ್ಯೆಯ ಸೂಕ್ಷ್ಮತೆ ನಿಮಗೆ ಅರ್ಥವಾಗುವುದಿಲ್ಲವೇ? ಈ ಪಿಐಎಲ್ ಸಲ್ಲಿಸಿದ್ದಾಗಿ ದಂಡ ತೆರಬೇಕಾದೀತು” ಎಂದು ಅರ್ಜಿದಾರ ತಿವಾರಿ ಅವರಿಗೆ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಇದೇ ಮೊದಲ ಬಾರಿಗೆ ದಾಳಿ ನಡೆದಿದೆ. ಆದ್ದರಿಂದ ಪ್ರವಾಸಿಗರ ಸುರಕ್ಷತೆಗಾಗಿ ನಿರ್ದೇಶನಗಳನ್ನು ಕೋರುತ್ತಿದ್ದೇನೆ ಅಷ್ಟೇ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಅರ್ಜಿದಾರರು ಒಂದರ ನಂತರ ಒಂದರಂತೆ ಪಿಐಎಲ್ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ನಮಗೆ ಕಾಣಿಸುತ್ತಿಲ್ಲ. ಕೇವಲ ಪ್ರಚಾರ ಪಡೆಯುವುದೇ ಪ್ರಾಥಮಿಕ ಉದ್ದೇಶದಂತೆ ತೋರುತ್ತಿದೆ” ಎಂದು ಹೇಳಿ ನ್ಯಾಯಪೀಠವು ಈ ಅರ್ಜಿಯನ್ನು ವಜಾಗೊಳಿಸಿತು.
ಇತ್ತೀಚೆಗಷ್ಟೇ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರ ದಾಳಿಯ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನೂ ತಿರಸ್ಕರಿಸಿದ್ದ ನ್ಯಾಯಪೀಠ, ಪರಿಸ್ಥಿತಿಯ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಿ. ಇಡೀ ದೇಶವೇ ಭಯೋತ್ಪಾದಕರ ವಿರುದ್ಧ ಹೋರಾಡಲು ಒಗ್ಗಟ್ಟಾಗಿ ನಿಂತಿರುವಾಗ ನೀವು ಸೂಕ್ಷ್ಮತೆ ಇಲ್ಲದೇ ಅರ್ಜಿ ಸಲ್ಲಿಸಿದ್ದೀರಿ. ನೀವು ಭದ್ರತಾ ಪಡೆಗಳ ಮನೋಬಲ ಕುಗ್ಗಿಸಲು ಯತ್ನಿಸುತ್ತಿದ್ದೀರಾ, ಇಂತಹ ವಿಷಯಗಳನ್ನು ಇಲ್ಲಿಗೆ ತರಬೇಡಿ ಎಂದು ಹೇಳಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದಂತಾಗಿದೆ.
ಏಪ್ರಿಲ್ 22 ರಂದು ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಹತ್ಯೆಗೈದಿದ್ದರು. ಈ ಪೈಕಿ ಹೆಚ್ಚಿನವರು ಇತರ ರಾಜ್ಯಗಳ ಪ್ರವಾಸಿಗರಾಗಿದ್ದರು.