ಮಂಡ್ಯ: ದೊಡ್ಡಮ್ಮನನ್ನು ಮಗನೇ ಕೊಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಮಂಡ್ಯ (Mandya)ದ ಆನೆಕೆರೆ ಬೀದಿ ನಗರದಲ್ಲಿ ಈ ಘಟನೆ ನಡೆದಿದೆ. 80 ವರ್ಷದ ಕೆಂಪಮ್ಮ ಮೃತ ವೃದ್ದೆ. 34 ವರ್ಷದ ಹರೀಶ್ ಕೊಲೆ ಆರೋಪಿ ಎನ್ನಲಾಗಿದೆ. ಆರೋಪಿ ಹರೀಶ್ ನ ತಂದೆ ರಾಮಕೃಷ್ಣ ತನ್ನ ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಅಣ್ಣ ತೀರಿ ಹೋದ ನಂತರ ರಾಮಕೃಷ್ಣ, ಕೆಂಪಮ್ಮನನ್ನು 25 ವರ್ಷಗಳ ಕೆಳಗೆ ತನ್ನ ಜೊತೆಗೆ ಕರೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದ. ಇದರಿಂದ ಕೋಪಗೊಂಡ ರಾಮಕೃಷ್ಣನ ಹೆಂಡತಿ ಗಂಡನನ್ನು ತೊರೆದು, ಬೆಂಗಳೂರಿನಲ್ಲಿ ಮಗನ ಜೊತೆ ವಾಸವಿದ್ದಳು. ಈ ವಿಚಾರಕ್ಕೆ ಹಲವು ಬಾರಿ ಗಲಾಟೆ ಕೂಡ ನಡೆದಿದ್ದವು. ಆದರೆ, ಶನಿವಾರ ಮಧ್ಯಾಹ್ನ ಹರೀಶ್ ಕುಡಿದು ಬಂದು ಜಗಳ ಮಾಡಿದ್ದಾನೆ. ಈ ವೇಳೆ ಕೆಂಪಮ್ಮಳ ಜೊತೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ನಂತರ ತಾನೇ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಪತಿ ತೀರಿ ಹೋಗುತ್ತಿದ್ದಂತೆ ಕೆಂಪಮ್ಮಳಿಗೆ ಮೈದುನ ರಾಮಕೃಷ್ಣನೇ ಆಸರೆಯಾಗಿದ್ದ. ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಮೈದುನ ರಾಮಕೃಷ್ಣನ ಜೊತೆ ಕೆಂಪಮ್ಮ ವಾಸವಿದ್ದಳು. ಆರೋಪಿ ಕೂಡ ಇವರೊಂದಿಗೆ ಇದ್ದ ಎನ್ನಲಾಗಿದೆ. ಹರೀಶ್ ಕೂಡ ಮದುವೆಯಾಗಿ ಇಬ್ಬರು ಪತ್ನಿಯರನ್ನು ಕೂಡ ತೊರೆದಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ. ಆದರೆ, ಶನಿವಾರ ಏಕಾಏಕಿ ಮನೆಗೆ ಬಂದು ಜಗಳ ತೆಗೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.