ಅಹಮದಾಬಾದ್ ನ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಏರ್ ಇಂಡಿಯಾ ವಿಮಾನ ಅಪ್ಪಳಿಸುತ್ತಿದ್ದಂತೆ ದೊಡ್ಡ ಮಟ್ಟದ ಶಬ್ಧ, ಹೊಗೆ ಆವರಿಸಿತ್ತು.
ಈ ವೇಳೆ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳನ್ನು ಸಾವಿನ ಕೂಪದಿಂದ ಹೊರತಂದ ಆಪತ್ಬಾಂಧವರು ಅದೆಷ್ಟೋ ಮಂದಿ. ದೊಡ್ಡ ಸದ್ದು ಕೇಳ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪಕ್ಕದಲ್ಲೇ ಇದ್ದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು, ಉರಿಯೋ ಬೆಂಕಿಯನ್ನೂ ಲೆಕ್ಕಿಸದೆ ಹಾಸ್ಟೆಲ್ ನೊಳಗೆ ನುಗ್ಗಿದ್ದಾರೆ.
ಕರೆ ಮಾಡಿ ನೆರೆಹೊರೆಯಲ್ಲಿದ್ದ ತಮ್ಮ ಮಿತ್ರರನ್ನೆಲ್ಲಾ ಜಮಾವಣೆಯಾಗುವಂತೆ ಮಾಡಿದ್ದಾರೆ. ಉರಿಯೋ ಅಗ್ನಿ ಕುಂಡದಲ್ಲಿ ನೆಗೆದು, ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೇ ಅಲ್ಲಾ ಹಾಸ್ಟೆಲ್ ಮೆಸ್ ನಲ್ಲಿದ್ದ 8ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ಹೊರಗೆ ತೆಗೆದು ಘಟಿಸಬಹುದಾಗಿದ್ದ ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ. ಈ ಯುವಕರ ಸಾಹಸಕ್ಕೆ ಸಮಸ್ತ ದೇಶವೀಗ ಬಹುಪರಾಕ್ ಹೇಳುತ್ತಿದೆ.