ಕರ್ನಾಟಕದ ಮಗ್ಗುಲಲ್ಲೇ ಇರುವ ಆಂಧ್ರಪ್ರದೇಶ ಅದ್ಯಾಕೋ ಕರ್ನಾಟಕದ ಅನ್ನದಾತರಿಗೆ ಅನ್ಯಾಯವೆಸಗೋ ನಿರ್ಧಾರ ಕೈಗೊಂಡಿದೆ. ಕರುನಾಡಿನ ಮಣ್ಣಿನ ಮಕ್ಕಳ ದುಡಿಮೆಯ ಫಲಕ್ಕೆ ಕೊಳ್ಳಿ ಇಡುವಂಥಾ ಕ್ರಮವನ್ನು ನಾಯ್ಡು ಸರ್ಕಾರ ಕೈಗೊಂಡಿದೆ. ಆಂಧ್ರದ ಈ ನಡೆ ವಿರುದ್ಧವೀಗ ಬೆಳಗಾರರ ಆಕ್ರೋಶದ ಕಟ್ಟೆ ಕೂಡಾ ಒಡೆದಿದೆ. ಹೌದು, ಕರ್ನಾಟಕ ಸೇರಿದಂತೆ ಅನ್ಯ ರಾಜ್ಯಗಳ ತೋತಾಪುರಿ ಖರೀದಿ ಮಾಡದಂತೆ ಚಿತ್ತೂರು ಜಿಲ್ಲಾಡಳಿತ ಫರ್ಮಾನು ಹೊರಡಿಸಿದೆ. ಇದೊಂದು ನಡೆ, ಆಂಧ್ರ-ಕರ್ನಾಟಕ ಗಡಿಯ ಸಾವಿರಾರು ರೈತರಿಗೆ ಸಂಕಷ್ಟ ತಂದಿದೆ.
ಚಂದ್ರಬಾಬು ನಾಯ್ಡು ವಿರುದ್ಧ ಅನ್ನದಾತರ ಆಕ್ರೋಶ
ನಿರ್ಧಾರ ಹಿಂಪಡೆಯುವಂತೆ ಮುಖ್ಯ ಕಾರ್ಯದರ್ಶಿ ಮನವಿ
ದಶಕಗಳಿಂದಲೂ ಆಂಧ್ರ-ಕರ್ನಾಟಕದ ನಡುವೆ ಉತ್ತಮ ವ್ಯಾವಹಾರಿಕ ಸಂಬಂಧವಿದೆ. ಅದ್ರಲ್ಲೂ ಆಂಧ್ರದ ಗಡಿಗೆ ಹೊಂದಿಕೊಂಡಂತಿರುವ ಕೋಲಾರ, ಚಿಕ್ಕಬಳ್ಳಾಪುರ ವ್ಯಾಪ್ತಿಯ ಸಾವಿರಾರು ರೈತರು ತಮ್ಮ ಉತ್ಪನ್ನಗಳಿಗೆ ಆಂಧ್ರದಲ್ಲಿ ಮಾರುಕಟ್ಟೆ ಕಂಡುಕತೊಂಡಿದ್ದಾರೆ. ಈ ಹಿಂದಿನಿಂದಲೂ ಆಂಧ್ರದ ಚಿತ್ತೂರಿನೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಭಾಗದ ರೈತರು, ಇದೀಗ ಶಾಕ್ ಆಗಿದ್ದಾರೆ. ತೋತಾಪುರಿ ಖರೀದಿ ನಿರ್ಬಂಧವನ್ನು ವಾಪಾಸ್ ಪಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಂಧ್ರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
ಆಂಧ್ರದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ
ನಾಯ್ಡು ಆಡಳಿತಕ್ಕೆ ಸಿಎಂ ಖಡಕ್ ವಾರ್ನಿಂಗ್
ಕರ್ನಾಟಕದ ತೋತಾಪುರಿ ಖರೀದಿ ನಿಷೇಧಿಸಿರೋ ಆಂಧ್ರದ ನಿಲುವು ಸಿಎಂ ಸಿದ್ದರಾಮಯ್ಯರ ಕಣ್ಣು ಕೆಂಪಗಾಗಿಸಿದೆ. ನಾಯ್ಡು ಆಡಳಿತ ವಿರುದ್ಧ ಕೆಂಡಾಮಂಡಲವಾಗಿರುವ ಸಿಎಂ, ಪೂರ್ವ ಸಮಾಲೋಚನೆ ಅಥವಾ ಸಮನ್ವಯವಿಲ್ಲದೆ ತೆಗೆದುಕೊಳ್ಳುವ ಈ ರೀತಿಯ ಕ್ರಮಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿವೆ. ಇದು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದಿದ್ದಾರೆ. ಅಷ್ಟೇ ಅಲ್ಲಾ ಈಗಾಗಲೇ ರಾಜ್ಯದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಇದು ತರಕಾರಿ ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಅಡ್ಡಿಪಡಿಸಬಹುದು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಒಟ್ನಲ್ಲಿ, ಆಂಧ್ರದ ನಡೆ ವಿರುದ್ಧವೀಗ ಖುದ್ದು ಸಿಎಂ ಗರಂ ಆಗಿದ್ದು, ಮುಂದೆ ನಾಯ್ಡು ನಾಡಿನ ಜನಕ್ಕೆ ಅದ್ಯಾವ ಶಾಕ್ ನೀಡ್ತಾರೆ ಅನ್ನೋದು ಈಗಿರುವ ಪ್ರಶ್ನೆ