ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಒಬ್ಬೇ ಒಬ್ಬ ಸ್ಥಳೀಯ ಸಾವನಪ್ಪಿದ್ದಾನೆ. ಆದರೆ, ಆತನ ಸಾವೀಗ ನಿಜಕ್ಕೂ ವೀರ ಮರಣ ಅಂತಲೇ ಹೇಳಲಾಗುತ್ತಿದೆ.
ಹೌದು. ಉಗ್ರರು ಹತ್ಯಾಕಾಂಡಕ್ಕೂ ಮುನ್ನ ಪ್ರತಿಯೊಬ್ಬರ ಧರ್ಮ ಪ್ರಶ್ನಿಸೋದಕ್ಕೆ ಶುರುಮಾಡಿದ್ದರು. ಕೆಲವರನ್ನು ವಿವಸ್ತ್ರಗೊಳಿಸಿ ತಮ್ಮ ಶಂಕೆಯನ್ನು ಖಚಿತಪಡಿಸಿಕೊಂಡಿದ್ದರು ನೀಚರು. ಆದರೆ ಇದೇ ವೇಳೆ ಎಕೆ 47 ಕೈಯಲ್ಲಿ ಹಿಡಿದಿದ್ದ ಜಿಹಾದಿಗಳ ವಿರುದ್ಧ ತಿರುಗಿಬಿದ್ದದ್ದೇ ಈ ಸಯೀದ್ ಆದಿಲ್ ಹುಸೇನ್ ಶಾ.
ಕಸುಬಿನಲ್ಲಿ ಕುದುರೆ ಓಡಿಸುವ ಈ ಆದಿಲ್ ನಿನ್ನೆ ಉಗ್ರರಿಗೆ ಎದೆಗೆ ಎದೆ ಕೊಟ್ಟು ಹೋರಾಡಿದ ಸಮರ ಸೇನಾನಿಯಾಗಿದ್ದಾನೆ. ಜಾತಿ ಲೆಕ್ಕ ಆರಂಭಿಸಿದ್ದ ಉಗ್ರರ ಮೇಲೆಯೇ ಎರಗಿದ್ದ ಆದಿಲ್, ಅವರ ಕೈಯಲ್ಲಿದ್ದ ಬಂದೂಕು ಕಸಿಯೋದಕ್ಕೆ ಯತ್ನಿಸಿದ್ದ. ಅಲ್ಲದೆ ಈ ಕಾರ್ಯದಲ್ಲಿ ಆತ ಯಶಸ್ಸನ್ನೂ ಕಂಡಿದ್ದ ಕೂಡ. ಆದರೆ, ದುರಾದೃಷ್ಟವಶಾತ್ ಮತ್ತೋರ್ವ ಉಗ್ರ ಆದಿಲ್ ಎದೆಗೆ ಗುಂಡಿಕ್ಕಿದ್ದ. ಅಲ್ಲಿಗೆ ಕಾಶ್ಮೀರದ ಈ ಯುವಕನ ಹೋರಾಟ ಸಮಾಪ್ತಿಯಾಗಿತ್ತು. ಆದರೆ, ತನ್ನ ಜೀವವನ್ನೇ ಬಲಿದಾನಗೈದ ಆದಿಲ್ ನ ದುಡಿಮೆಯನ್ನೇ ನಂಬಿ ಜೀವನ ದೂಡುತ್ತಿದ್ದ ಆತನ ಕುಟುಂಬವೀಗ ಅನಾಥವಾಗಿದೆ. ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ.