ಅದ್ಯಾಕೋ ಏನೋ ಈ ಸಿನಿಮಾ ಘೋಷಣೆ ಆದಾಗಿನಿಂದಲೂ ಒಂದಿಲ್ಲೊಂದು ವಿಘ್ನ ಅನುಭವಿಸುತ್ತಲೇ ಬರುತ್ತಿದೆ. ಸಮಸ್ತ ಭಾರತ ಸಿನಿರಂಗವೇ ಚಿತ್ತ ನೆಟ್ಟು ಕೂತಿರುವ ಸಿನಿಮಾವೆಂದ್ರೆ ಅದು ಸ್ಪಿರಿಟ್. ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಿ, ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಸ್ಪಿರಿಟ್ ಮತ್ತೊಮ್ಮೆ ಸುದ್ದಿಯಾಗಿದೆ. ಅದು ಕೂಡಾ ಮತ್ತೊಂದು ಕಾರಣವಲ್ಲದ ಕಾರಣಕ್ಕೆ.
ದೀಪಿಕಾ ಕ್ಯಾತೆಗೆ ಕಂಗಾಲಾದ ಚಿತ್ರ ತಂಡ
ಈ ಹಿಂದೆ ಸ್ಪಿರಿಟ್ ಸಿನಿಮಾ ತಡವಾಗೋದಕ್ಕೆ ಮೂಲ ಕಾರಣವಾಗಿದ್ದು ನಟಿ ದೀಪಿಕಾ ಪಡಕೋಣೆ. ಅವರ ಪ್ರೆಗ್ನನ್ಸಿ ಇಂದಾಗೇ ಚಿತ್ರತಂಡ ಸಿನಿಮಾವನ್ನು ಒಂದಷ್ಟು ಕಾಲ ಮುಂದೂಡಿತ್ತು. ಅಷ್ಟಕ್ಕೂ ಪ್ರಭಾಸ್ ಮತ್ತು ದೀಪಿಕಾರನ್ನು ಕಲ್ಪನೆಯಲ್ಲಿಟ್ಟುಕೊಂಡೇ ನಿರ್ದೇಶಕರು ಕತೆ ರೂಪಿಸಿದ್ದರು. ಹಾಗಾಗಿಯೇ ಕನ್ನಡತಿಗಾಗಿ ಕಾದಿದ್ದು ಈಗ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಬಟ್…ಅದೇ ದೀಪಿಕಾ ಮತ್ತೊಮ್ಮೆ ಸಿನಿಮಾದ ರಹದಾರಿಗೆ ಅಡ್ಡಗಾಲಾಗಿದ್ದಾರೆ. ಅದರಲ್ಲೂ ದೀಪಿಕಾ ಮಾಡುತ್ತಿರುವ ಡಿಮ್ಯಾಂಡ್ ಗಳನ್ನು ಪೂರೈಸೋದು ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದಿರುವ ಚಿತ್ರತಂಡ ಅವರನ್ನೇ ಈಗ ಪ್ರೊಜೆಕ್ಟ್ ನಿಂದ ಹೊರಹಾಕಿದೆ.
ದೀಪಿಕಾಳ ಡಿಮ್ಯಾಂಡ್ಸ್ ಗೆ ದಂಗಾದ ನಿರ್ದೇಶಕ
ಹಾಗೆ ನೋಡಿದರೆ ಈ ಹೊತ್ತಿಗಾಗಲೇ ಸ್ಪಿರಿಟ್ ಒಂದು ಹಂತದಲ್ಲಿ ಚಿತ್ರೀಕರಣ ಮುಗಿಸಿರಬೇಕಿತ್ತು. ಆದರೀಗ ದೀಪಿಕಾ ಮಾಡಿರುವ ಬೇಡಿಕೆಗಳಿಗೆ ಬೆಚ್ಚಿರೋ ಚಿತ್ರತಂಡ ಅವರ ಬದಲಿಗೆ ಹೊಸ ನಟಿಯ ಶೋಧ ಆರಂಭಿಸಿದೆ. ಇನ್ನು ದೀಪಿಕಾರ ಕಂಡೀಷನ್ ಗಳನ್ನು ನೋಡೋದಾದ್ರೆ ಮೊದಲನೆಯದಾಗಿ ಸಂಭಾವನೆ ವಿಚಾರ. ಇತ್ತೀಚೆಗೆ ದೀಪಿಕಾ ಈ ಸಿನಿಮಾಗೆ 20 ಕೋಟಿ ಚಾರ್ಜ್ ಮಾಡಿದ್ದಾರೆ ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಇದು ಅವರ ಸಿನಿ ಕರಿಯರ್ ನ ಬಲು ದೊಡ್ಡ ಸಂಭಾವನೆ. ಇದಕ್ಕೆ ಚಿತ್ರತಂಡ ಕೂಡಾ ಓಕೆ ಅಂದಿತ್ತು. ಆದ್ರೆ ಇದಕ್ಕೆ ಪೂರಕವೆನ್ನುವಂತೆ ಸಿನಿಮಾದ ಲಾಭಾಂಶದಲ್ಲೂ ದೀಪಿಕಾ ಪಾಲು ಕೇಳಿದ್ದಾರೆ ಇದು ದೊಡ್ಡ ಹಿನ್ನಡೆಗೆ ಕಾರಣವಾಗಿದೆ.
ಸಾಲದ್ದಕ್ಕೆ ಪ್ರತಿ ದಿನ 8 ಗಂಟೆಗಳ ಕಾಲ್ ಶೀಟ್ ಮಾತ್ರ ನೀಡೋದಾಗಿ ಘೋಷಿಸಿದ್ದಾರೆ. ಮೇಕಪ್ ಇತರೆ ತಯಾರಿ ಲೆಕ್ಕ ಹಾಕಿದ್ರೆ ಇದು ಕೇವಲ 6 ಗಂಟೆಗಷ್ಟೇ ಸೀಮಿತವಾಗುತ್ತೆ ಅಂತಿದ್ದಾರೆ ನಿರ್ದೇಶಕ. ಉಳಿದಂತೆ ಸಿನಿಮಾ ತೆಲುಗಿನಲ್ಲಿ ಚಿತ್ರೀಕರಣವಾಗ್ತಿದೆ. ಆದ್ರೆ ತೆಲುಗಿನಲ್ಲಿ ಸಂಭಾಷಣೆ ಹೇಳಲು ದೀಪಿಕಾ ನಿರಾಕರಿಸಿದ್ದಾರೆ. ಇದು ಸಂದೀಪ್ ರೆಡ್ಡಿ ಕಣ್ಣನ್ನ ಮತ್ತಷ್ಟು ಕೆಂಪಾಗಿಸಿದೆ. ಹೀಗಾಗಿ ಇಷ್ಟೆಲ್ಲಾ ಬೇಡಿಕೆ ಈಡೇರಿಸೋ ಬದಲು ಅವರನ್ನೇ ಚಿತ್ರದಿಂದ ಹೊರಹಾಕೋದು ಒಳಿತು ಅಂತಾ ನಿರ್ಧರಿಸಲಾಗಿದೆ. ಈ ನಡುವೆ, ನಟ ಪ್ರಭಾಸ್ ನಡೆಸಿದ ಸಂಧಾನವೂ ಫಲ ನೀಡಿಲ್ಲ. ಹೀಗಾಗಿ ಹೈಸ್ಪಿರಿಟ್ ನಲ್ಲಿದ್ದ ಚಿತ್ರ ತಂದ ದೀಪಿಕಾಳ ಕ್ಯಾತೆ ಪುರಾಣದಿಂದ ಕಳೆ ಹೀನವಾಗಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ದೃಢಪಡಿಸಿಲ್ಲ. ಬದಲಿಗೆ ಹೊಸ ನಾಯಕಿ ಆಯ್ಕೆ ಬಳಿಕವೇ ಎಲ್ಲವನ್ನೂ ಬಹಿರಂಗ ಪಡಿಸೋ ಉಮೇದಿನಲ್ಲಿದೆ.