ನವದೆಹಲಿ: ಒಂದೆಡೆ ಗುಂಡಿನ ಸದ್ದು(Pahalgam Attack), ಮತ್ತೊಂದೆಡೆ ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು, ತಮ್ಮ ಪ್ರೀತಿಪಾತ್ರರ ಮೃತದೇಹ ಪಕ್ಕ ನಿಂತು ಅಸಹಾಯಕತೆಯಿಂದ ರೋದಿಸುತ್ತಿರುವವರು, ರಕ್ತದಲ್ಲಿ ತೋಯುತ್ತಿರುವ ಗಾಯಾಳುಗಳ ಆರ್ತನಾದ…. ಇಂತಹ ದೃಶ್ಯಗಳನ್ನು ನೋಡಿದರೆ ಯಾರಾದರೂ ಭಯದಿಂದ ಅಲ್ಲಿಂದ ಓಡಿಹೋಗುತ್ತಾರೆ. ಆದರೆ, ಅಲ್ಲೇ ನಿಂತು ನೋವಲ್ಲಿ ಕಣ್ಣೀರು ಹಾಕುತ್ತಿರುವವರ ಹೆಗಲಿಗೆ ಹೆಗಲು ಕೊಡಲು ಧೈರ್ಯ ಬೇಕು…
ಅಂತಹ ಧೈರ್ಯವನ್ನು ಪ್ರದರ್ಶಿಸಿದವರೇ ಕಾಶ್ಮೀರಿ ಬಾಲಕಿಯರಾದ ರುಬೀನಾ(14) ಮತ್ತು ಮುಮ್ತಾಝಾ(16). ಮಂಗಳವಾರ ನಡೆದ ಪಹಲ್ಗಾಮ್ ಉಗ್ರರ ದಾಳಿಯ ವೇಳೆ ಗುಜ್ಜರ್-ಬಕೇರ್ ವಾಲಾ ಸಮುದಾಯದ ಈ ಇಬ್ಬರು ಹೆಣ್ಣುಮಕ್ಕಳ ಸಾಹಸ ಅಂತಿಂಥದ್ದಲ್ಲ.
ಇಡೀ ಬೈಸರನ್ ಪ್ರದೇಶದಲ್ಲಿ ಭಯ-ಭೀತಿ, ನರಳಾಟ ಆವರಿಸಿರುವ ಹೊತ್ತಲ್ಲಿ ಈ ಸಹೋದರಿಯರು ಅಲ್ಲಿಂದ ಓಡಿಹೋಗಲಿಲ್ಲ. ಅಲ್ಲೇ ಇದ್ದು ಪ್ರವಾಸಿಗರ ರಕ್ಷಣೆಗೆ ಪಣ ತೊಟ್ಟರು.
ತನ್ನ ಕಾಲಿಗೆ ಗಾಯವಾಗಿದ್ದರೂ ಅದರ ಬಗ್ಗೆ ಚಿಂತಿಸದೇ ಮುಮ್ತಾಜಾ ಪ್ರವಾಸಿಗರೊಬ್ಬರ ಮಗುವನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆದೊಯ್ದಳು. ಸಹೋದರಿಯರಿಬ್ಬರೂ ಸೇರಿ ಚೆನ್ನೈನಿಂದ ಬಂದಿದ್ದ ದಂಪತಿಗಳನ್ನು ರಕ್ಷಿಸಿದರು. ಅನೇಕರಿಗೆ ಬಂಡೆಗಳ ಭೂಪ್ರದೇಶದ ಮೂಲಕ ಸಾಗುವುದು ಹೇಗೆ ಎಂದು ಮಾರ್ಗದರ್ಶನ ನೀಡಿದರು. ತಮ್ಮದೇ ಪುಟ್ಟ ಮನೆಯಲ್ಲಿ ಪ್ರವಾಸಿಗರಿಗೆ ಆಶ್ರಯ ನೀಡಿದರು. ಕುಡಿಯಲು ನೀರು, ತಿನ್ನಲು ಆಹಾರ, ಜೊತೆಗೆ ಒಂದಿಷ್ಟು ಭರವಸೆಯನ್ನು ನೀಡಿದರು.
“ಆ ಕ್ಷಣದಲ್ಲಿ, ನಾವು ನಮ್ಮ ಬಗ್ಗೆ ಯೋಚಿಸಲಿಲ್ಲ” ಎಂದು ‘ಕಾಶ್ಮೀರದ ಮೊಲದ ಹುಡುಗಿ’ ಎಂದು ಕರೆಯಲ್ಪಡುವ ರುಬೀನಾ ತನ್ನ ಸಾಕು ಬನ್ನಿಯನ್ನು ಪ್ರವಾಸಿಗರಿಗೆ ಪ್ರತಿ ಫೋಟೋಗೆ ಕೆಲವು ರೂಪಾಯಿಗಳಿಗೆ ನೀಡಿದ್ದಕ್ಕಾಗಿ ಹೇಳಿದರು.
“ಆ ಕ್ಷಣದಲ್ಲಿ, ನಮಗೆ ನಮ್ಮ ಬಗ್ಗೆ ಯೋಚನೇಯೇ ಬರಲಿಲ್ಲ” ಎನ್ನುತ್ತಾಳೆ ‘ರಾಬಿಟ್ ಗರ್ಲ್ ಆಫ್ ಕಾಶ್ಮೀರ್’ ಎಂದು ಕರೆಸಿಕೊಳ್ಳುವ ರುಬೀನಾ. ಈಕೆ ತನ್ನ ಸಾಕು ಮೊಲದೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸುವ ಪ್ರವಾಸಿಗರಿಂದ ಒಂದೆರಡು ರೂಪಾಯಿಗಳನ್ನು ಪಡೆದು, ಅದರಿಂದ ಬಂದ ಆದಾಯದಿಂದ ಬದುಕು ಸಾಗಿಸುವವಳು.
“ನಮಗೆ ಅಂದು ಕಂಡಿದ್ದು ಪ್ರವಾಸಿಗರ ಆರ್ತನಾದ ಮಾತ್ರ. ಅವರಲ್ಲಿ ಕೆಲವರಿಗೆ ನಡೆಯಲೂ ಸಾಧ್ಯವಾಗುತ್ತಿರಲ್ಲ; ಎಲ್ಲರೂ ಭಯಭೀತರಾಗಿದ್ದರು. ಅವರಿಗೆ ಆಗ ಬೇಕಾಗಿದ್ದು ಸಹಾಯ ಮಾತ್ರ” ಎಂದು ರುಬೀನಾ ಹೇಳಿದ್ದಾಳೆ.
ಹೀಗಾಗಿ ನಾವು ಅವರಿಗೆ ನಮ್ಮ ಮಣ್ಣಿನ ಮನೆಯಲ್ಲೇ ಆಶ್ರಯ ನೀಡಿ, ಕುಡಿಯಲು ನೀರು ಕೊಟ್ಟೆವು. ನಂತರ ಮತ್ತೆ ನಾವು ಮನೆಯಿಂದ ಹೊರಗೆ ಕಾಲಿಟ್ಟಾಗ ಇನ್ನಷ್ಟು ಜನರು ಓಡಿಬರುತ್ತಿರುವುದನ್ನು ಕಂಡೆವು. ಇಂಥ ಸಮಯದಲ್ಲಿ ಅವರಿಗೆ ಸಹಾಯ ಮಾಡುವುದೇ ನಮ್ಮ ಕರ್ತವ್ಯ ಎಂಬ ಭಾವನೆ ನಮ್ಮಲ್ಲಿ ಮೂಡಿತು. ಅದರಂತೆ, ನಮಗೆ ಸಾಧ್ಯವಾದಷ್ಟು ಮಂದಿಗೆ ನಾವು ನಮ್ಮ ಕೈಲಾದ ಮಟ್ಟಿಗೆ ನೆರವಾದೆವು ಎಂದು ಈ ಸಹೋದರಿಯರು ಹೇಳಿದ್ದಾರೆ.