ಬೆಂಗಳೂರು: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಬಿಳಿಯ ಚೆಂಡಿನ ಕ್ರಿಕೆಟ್ ಸರಣಿ (ಏಕದಿನ ಹಾಗೂ ಟಿ20) ಕುರಿತು ಕಳೆದೆರಡು ತಿಂಗಳುಗಳಿಂದ ಆವರಿಸಿದ್ದ ಕಾರ್ಮೋಡಗಳು ಕರಗತೊಡಗಿವೆ. ಬಹುನಿರೀಕ್ಷಿತ ಟೀಮ್ ಇಂಡಿಯಾದ ಬಾಂಗ್ಲಾದೇಶ ಪ್ರವಾಸ ಮತ್ತೆ ಹಳಿಗೆ ಮರಳುವ ಸಾಧ್ಯತೆಗಳು ದಟ್ಟವಾಗಿವೆ. ಈ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ಶೀಘ್ರದಲ್ಲೇ ಸಂಬಂಧಪಟ್ಟ ಆಡಳಿತ ಮಂಡಳಿಗಳ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
ಟೀಮ್ ಇಂಡಿಯಾ ಮುಂದಿನ ಆಗಸ್ಟ್ ತಿಂಗಳಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. 1ನೇ ಟೆಸ್ಟ್ ಆಗಸ್ಟ್ 15ರಿಂದ ಗಾಲ್ನಲ್ಲಿ ಹಾಗೂ 2ನೇ ಟೆಸ್ಟ್ ಆಗಸ್ಟ್ 23ರಿಂದ ಕೊಲಂಬೊದಲ್ಲಿ ನಡೆಯಲಿದೆ. ಆದರೆ, ಈ ಪ್ರವಾಸಕ್ಕೆ ಕೇವಲ ಟೆಸ್ಟ್ ಪಂದ್ಯಗಳನ್ನು ಮಾತ್ರ ನಿಗದಿಪಡಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು (SLC) ‘ಡಿಟ್ವಾ’ ಚಂಡಮಾರುತ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಟೆಸ್ಟ್ ಮುಗಿದ ಬಳಿಕ 3 ಟಿ20 ಪಂದ್ಯಗಳನ್ನು ಆಡುವಂತೆ ಬಿಸಿಸಿಐಗೆ (BCCI) ಬೇಡಿಕೆ ಇಟ್ಟಿತ್ತು. ಮೊದಲು ಇದಕ್ಕೆ ಒಲವು ತೋರಿದ್ದ ಬಿಸಿಸಿಐ, ನಂತರ ಕಾರ್ಯದೊತ್ತಡ ಮತ್ತು ಆಟಗಾರರ ದೈಹಿಕ ಶ್ರಮವನ್ನು ಮುಂದಿಟ್ಟುಕೊಂಡು ಈ ಪ್ರಸ್ತಾಪವನ್ನು ತಳ್ಳಿಹಾಕಿತ್ತು. ಆದರೆ, ವರದಿಗಳ ಪ್ರಕಾರ ಬಿಬಿಸಿಐ ಈ ನಿರ್ಧಾರ ತೆಗೆದುಕೊಳ್ಳಲು ಅಸಲಿ ಕಾರಣವೇ ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಬಾಂಗ್ಲಾದೇಶ ಪ್ರವಾಸವಾಗಿದೆ. ಬಾಂಗ್ಲಾ ವಿರುದ್ಧ ಸರಣಿ ಆಡಲು ಬಿಬಿಸಿಐ ಮೊದಲೇ ಯೋಜನೆ ರೂಪಿಸಿಕೊಂಡಿದ್ದ ಕಾರಣ ಶ್ರೀಲಂಕಾದಲ್ಲಿ ಟಿ20 ಆಡುವುದನ್ನು ಕೈಬದಲಾಯಿಸಿದೆ ಎನ್ನಲಾಗಿದೆ.
ಭಾರತ ಸರ್ಕಾರದ ಅನುಮತಿಯ ನಿರೀಕ್ಷೆ
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಈಗಾಗಲೇ ತನ್ನ ತವರಿನ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಈ ಭಾರತ-ಬಾಂಗ್ಲಾ ಸರಣಿಯನ್ನು ಅಧಿಕೃತವಾಗಿ ಸೇರಿಸಿಕೊಂಡಿದೆ. ಪ್ರಸ್ತಾವಿತ ಸರಣಿಯು 3 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ಇಷ್ಟೇ ಅಲ್ಲದೆ, ಈ ಬಿಳಿಯ ಚೆಂಡಿನ ಪಂದ್ಯಗಳಿಗಾಗಿ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕುಗಳಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯನ್ನೂ ಆರಂಭಿಸಿದೆ. ಆದರೆ ಈ ಪ್ರವಾಸಕ್ಕೆ ಭಾರತ ಸರ್ಕಾರದ ಅಂತಿಮ ಅನುಮತಿ ಮಾತ್ರ ಬಾಕಿಯಿದೆ. ಸರ್ಕಾರವು ಒಮ್ಮೆ ಹಸಿರು ನಿಶಾನೆ ತೋರಿದರೆ, ಬಿಸಿಸಿಐ ಅಧಿಕೃತವಾಗಿ ಸರಣಿಯನ್ನು ಘೋಷಣೆ ಮಾಡಲಿದೆ.
ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆ
ಕಳೆದ ವರ್ಷ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ಈ ಸರಣಿ ಮುಂದೂಡಲ್ಪಟ್ಟಿತ್ತು. ಇದರ ಪರಿಣಾಮವಾಗಿ, ಈ ವರ್ಷದ 2026ರ ಟಿ20 ವಿಶ್ವಕಪ್ಗೆ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿತ್ತು. ಪರಿಣಾಮ ಸ್ಕಾಟ್ಲೆಂಡ್ ತಂಡಕ್ಕೆ ಆ ಅವಕಾಶ ಲಭಿಸಿತ್ತು. ಆದರೆ, ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರ ಅಧಿಕಾರವಧಿಯಲ್ಲಿ ಉಭಯ ದೇಶಗಳ ಬಾಂಧವ್ಯ ಸುಧಾರಿಸುತ್ತಿದೆ. ಭಾರತವು ಈಗಾಗಲೇ ಬಾಂಗ್ಲಾದೇಶದ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಿದೆ.
ಅದೇ ರೀತಿ, ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಎರಡು ಬೋರ್ಡ್ಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗತೊಡಗಿದೆ. ಕ್ರಿಕೆಟ್ ಸಂಬಂಧಗಳನ್ನು ಸುಧಾರಿಸುವಲ್ಲಿ ತಮೀಮ್ ಮಹತ್ವದ ಹೆಜ್ಜೆಯನ್ನಿಡುತ್ತಿದ್ದಾರೆ. ಸದ್ಯ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ, ಇನ್ನೊಂದೆಡೆ ಬಾಂಗ್ಲಾದೇಶ ಜಿಂಬಾಬ್ವೆ ಪ್ರವಾಸದಲ್ಲಿ ನಿರತವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ನಲ್ಲಿ ಈ ನೆರೆಹೊರೆಯ ತಂಡಗಳ ನಡುವೆ ರೋಚಕ ಕದನ ಏರ್ಪಡಲಿದೆ.



















