ನವದೆಹಲಿ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಭಾಷಾ ಸಮರ ಆರಂಭವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಮಿಳುನಾಡಿಗೆ ಬರಬೇಕಾಗಿದ್ದ 2,151 ಕೋಟಿ ರೂ. ಅನುದಾನಕ್ಕೆ ತಡೆ ಹಿಡಿದಿದೆ ಎಂದು ಆರೋಪಿಸಿ ಎಂ.ಕೆ. ಸ್ಟಾಲಿನ್ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಮೊರೆಹೋಗಿದೆ.

ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯ ಜೊತೆಗೆ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯನ್ನು ಕಲಿಸಿಕೊಡಬೇಕು ಎಂಬ ನೀತಿಯು ಎನ್ಇಪಿಯಲ್ಲಿದ್ದು, ಅದನ್ನು ಡಿಎಂಕೆ ಸರ್ಕಾರ ವಿರೋಧಿಸಿದೆ. ತ್ರಿಭಾಷಾ ಸೂತ್ರವು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಿಕೆ ಮಾಡುವ ಪ್ರಯತ್ನ ಎನ್ನುವುದು ತ.ನಾಡು ಸರ್ಕಾರದ ವಾದವಾಗಿದೆ. ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಭಾರತೀಯ ಭಾಷೆಗಳಿಗೆ ಉತ್ತೇಜನ ನೀಡುವುದೇ ತ್ರಿಭಾಷಾ ಸೂತ್ರದ ಉದ್ದೇಶ ಎಂದು ಹೇಳಿದೆ.
ಪ್ರೀ-ಸ್ಕೂಲ್ ನಿಂದ 12ನೇ ತರಗತಿಯವರೆಗಿನ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಮಗ್ರ ಶಿಕ್ಷಾ ಯೋಜನೆಯ ಅನ್ವಯ ಕೇಂದ್ರ ಸರ್ಕಾರವು 2,151 ಕೋಟಿ ರೂ.ಗಳನ್ನು ತಮಿಳುನಾಡಿಗೆ ನೀಡಬೇಕಿತ್ತು. ಆದರೆ, ಎನ್ಇಪಿ ಅನ್ವಯ ತ್ರಿಭಾಷಾ ಸೂತ್ರ ಅನುಸರಿಸಿಲ್ಲ ಎಂಬ ಕಾರಣಕ್ಕೆ ಈ ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಕೇಂದ್ರದ ಯೋಜನಾ ಅನುಮೋದನೆ ಮಂಡಳಿಯು ಕಳೆದ ವರ್ಷದ ಫೆಬ್ರವರಿ 16ರಂದು ಸಭೆ ಸೇರಿ, ಸಮಗ್ರ ಶಿಕ್ಷಾ ಯೋಜನೆಯ ಅಗತ್ಯತೆಗಳನ್ನು ಪಾಲಿಸುವಲ್ಲಿ ತಮಿಳುನಾಡಿನ ಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿತ್ತು. ನಂತರ ಮಂಡಳಿಯು 3585.99 ಕೋಟಿ ರೂ. ಮೊತ್ತವನ್ನು ಹಂಚಿಕೆ ಮಾಡಿತ್ತು. ಈ ಪೈಕಿ 60:40 ಅನುಪಾತದಂತೆ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರಕ್ಕೆ 2,151 ಕೋಟಿ ರೂ.ಗಳನ್ನು ಹಂಚಿಕೆ ಮಾಡಬೇಕಿತ್ತು. ಕಳೆದ ವರ್ಷದ ಏಪ್ರಿಲ್ 1ರಂದೇ ಅದನ್ನು ರಾಜ್ಯಕ್ಕೆ ಪಾವತಿಸಬೇಕಿತ್ತು. ಆದರೆ ಈ ಮೊತ್ತದ ಯಾವುದೇ ಕಂತನ್ನು ಈವರೆಗೂ ಕೇಂದ್ರ ಸರ್ಕಾರ ಪಾವತಿಸಿಲ್ಲ ಎಂದು ತಮಿಳುನಾಡು ಆರೋಪಿಸಿದೆ.
ಸಮಗ್ರ ಶಿಕ್ಷಾ ಯೋಜನೆಯ ಅನುದಾನ ತಡೆ ಹಿಡಿದಿರುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ವಿಳಂಬವೇ ಕಾರಣ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ ಎನ್ನುವುದು ತಮಿಳುನಾಡು ಸರ್ಕಾರದ ಆರೋಪವಾಗಿದೆ. ವಾಸ್ತವದಲ್ಲಿ ಎನ್ಇಪಿ ಮತ್ತು ಸಮಗ್ರ ಶಿಕ್ಷಾ ಯೋಜನೆಯು ಪ್ರತ್ಯೇಕ ಯೋಜನೆಗಳಾಗಿದ್ದು, ಎನ್ಇಪಿ ಜಾರಿ ಮಾಡಿಲ್ಲ ಎಂಬ ನೆಪ ಹೇಳಿ ಈ ಮೊತ್ತವನ್ನು ತಡೆಹಿಡಿಯುವುದು ಎಷ್ಟು ಸರಿ ಎಂಬುದು ತಮಿಳುನಾಡು ಸರ್ಕಾರದ ಪ್ರಶ್ನೆಯಾಗಿದೆ.