ಯಾದಗಿರಿ: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಆಗಾಗ ಮಳೆಯಾಗುತ್ತಿದ್ದರೂ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶದ ಜನರಂತೂ ಕಂಗಾಲಾಗಿದ್ದಾರೆ. ಬಿಸಿಲಿನಿಂದಾಗಿ ಈಗ ಹಲವಾರು ಸಮಸ್ಯೆಗಳನ್ನು ಅಲ್ಲಿನ ಜನರು ಮಕ್ಕಳು, ವಯೋವೃದ್ಧರು ಎದುರಿಸುವಂತಾಗುತ್ತಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ (Yadgir) ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ (Temperature) ದಾಖಲಾಗುತ್ತಿದೆ. ಹೀಗಾಗಿ ಆಸ್ಪತ್ರೆಯತ್ತ ಜನ ಮುಖ ಮಾಡಿದ್ದಾರೆ. ಬಿಸಿಲಿನಿಂದ ಮಕ್ಕಳಲ್ಲಿ ನಿರ್ಜಲೀಕರಣ, ಕಿಡ್ನಿ ಬಾವು ಹೆಚ್ಚಾಗುತ್ತಿರುವ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ ಎಂದು ವೈದ್ಯರು ಹೇಳುತ್ತಿದ್ದಾರೆ.
ನವಜಾತ ಶಿಶುಗಳಲ್ಲಿ ಕಿಡ್ನಿ ಮೇಲೆ ಬಾವು, ಮೂತ್ರ ವಿಸರ್ಜನೆ ಸಮಸ್ಯೆ ಹೆಚ್ಚಾಗುತ್ತಿದೆ. ತಾಯಂದಿರು ಸರಿಯಾದ ಸಮಯಕ್ಕೆ ಎದೆ ಹಾಲುಣಿಸುವ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ತೆಳ್ಳನೆ ಬಟ್ಟೆಗಳನ್ನು ತೊಡಿಸಬೇಕೆಂದು ಮಕ್ಕಳ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ರಾಜ್ಯದ ಯಾದಗಿರಿಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಉಲ್ಭಣವಾಗಿದೆ. ಕಳೆದ 15 ದಿನಗಳಿಂದ ನವಜಾತ ಶಿಶುಗಳ ದಾಖಲಾತಿ ಹೆಚ್ಚಾಗುತ್ತಿದೆ. ಬಿಸಿಲಿನಿಂದ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾಗುತ್ತಿದೆ. ಇದರಿಂದಾಗಿ ನವಜಾತ ಶಿಶುಗಳ ಕಿಡ್ನಿ ಮೇಲೆ ಬಾವು ಕಾಣಿಸಿಕೊಳ್ಳುತ್ತದೆ. ಸರಿಯಾದ ರೀತಿಯಲ್ಲಿ ಮೂರ್ತ ವಿರ್ಜನೆ ಆಗದೆ ಇರುವುದು ಉಂಟಾಗುತ್ತದೆ. ಅಲ್ಲದೇ, ಇದರೊಂದಿಗೆ ಬೇರೆ ಬೇರೆ ಕಾಯಿಲೆಗಳು ಕೂಡ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಹೀಗಾಗಿ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.