ಹಾಸನ: ಕನ್ನಡಿಗ ವಿಕಾಸ್ ಮೇಲೆ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅವನು ಕಮಾಂಡರ್ ಆಗಿದ್ದರು ಅಷ್ಟೇ. ಪ್ರಧಾನಿ ಆಗಿದ್ದರೂ ಅಷ್ಟೇ. ಸೈನ್ಯದ ಸೈನ್ಯಾಧಿಕಾರಿ ಆಗಿದ್ದರೂ ಅಷ್ಟೇ. ಈ ದೇಶದ ಸಂವಿಧಾನ ಮತ್ತು ಕಾನೂನು ಯಾರನ್ನು ಬಿಟ್ಟಿಲ್ಲ. ಕಾನೂನು ಯಾರನ್ನೂ ಹೊರತು ಪಡಿಸಿಲ್ಲ. ವಿಂಗ್ ಕಮಾಂಡರ್ ಮಾಡಿದ ಕರ್ಮಕಾಂಡ ಎಂತಹುದು ಅಂದರೆ, ಕರ್ನಾಟಕ, ಕನ್ನಡಿಗರು, ಬೆಂಗಳೂರನ್ನು ರಾಷ್ಟ್ರ ಮಟ್ಟದಲ್ಲಿ ಕೆಟ್ಟದಾಗಿ, ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗರ ವಿಚಿತ್ರವಾಗಿ ಚಿತ್ರಿಸುವ ಕೆಲಸ ಮಾಡುವಂತೆ ಮಾಡಿದ್ದ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಗೂಂಡಾಗಳು ಎನ್ನುವ ರೀತಿ ಹೇಳಿಕೊಂಡಿದ್ದ.
ರಾಷ್ಟ್ರೀಯ ಮಾಧ್ಯಮ ಕನ್ನಡಿಗರ ಅವಹೇಳನಕಾರಿಯಾಗಿ ಚಿತ್ರಿಸಿದ್ದವು. ಸಿಸಿಟಿವಿ ತೆಗೆದು ನೋಡಿದಾಗ ಆ ದೊಡ್ಡ ಖಳನಾಯಕ ಯಾರೂ ಅಂದ್ರೆ ಆ ಕಮಾಂಡರ್ ಆಗಿದ್ದ. ಕನ್ನಡದ ಯುವಕನನ್ನು ಬೀದಿಯಲ್ಲಿ ಹಾಕಿಕೊಂಡು ಕಾಲಲ್ಲಿ ತುಳಿದು ಹೊಡೆಯುವ ಕಾರ್ಯ ಮಾಡಿದ್ದಾನೆ. ಅವನನ್ನು ನೋಡಿದಾಗ ಬೀದಿಯಲ್ಲಿ ರೌಡಿಗಳಂತೆ ಕಾಳಗ ಮಾಡಿದ್ದಾನೆ ಅನಿಸಿತು. ಅವನೊಬ್ಬ ಸೈನಿಕ, ಕಮಾಂಡರ್ ಅನ್ನಿಸಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವನು ಯಾವನೇ ಇರಲಿ. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ವಿಚಾರಣಗೆ ಕರೆದಿದ್ದಾರೆ ಅಂತೆ ಕೇಳಿದ್ದೇನೆ. ಹೀಗಾಗಿ ನಮ್ಮ ಕರವೇ ಕಾರ್ಯಕರ್ತರಿಗೆ ಅಲ್ಲಿ ಹೋಗಲು ಹೇಳಿದ್ದೇನೆ. ಅವನಿಗೆ ಕನ್ನಡಿಗರು ಎಂಥವರು ಅಂತಾ ಗೊತ್ತಾಗಬೇಕು. ಹೀಗಾಗಿ ಕರ್ನಾಟಕಕ್ಕೆ ಬಂದವರು ಕನ್ನಡದ ಭಾಷೆ, ಸಂಸ್ಕ್ರತಿ ಜೊತೆಯಲ್ಲಿ ಕನ್ನಡಿಗರಲ್ಲಿ ಬೆರೆತು ಬದುಕಬೇಕು. ನಿಮ್ಮ ಭಾಷೆ, ಸಂಸ್ಕೃತಿ, ನಿಮ್ಮ ಅಹಂಕಾರ, ದುರಂಹಕಾರ, ನಿಮ್ಮ ದಾದಾಗಿರಿ ಕರ್ನಾಟಕದ ನೆಲದಲ್ಲಿ ನಡೆಯಲಿಕ್ಕೆ ಕರವೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಆತನಿಂದ ಹೊಡೆತ ತಿಂದಿರುವ ಕನ್ನಡಿಗ ವಿಕಾಸ್ ಜೊತೆ ನಾವಿದ್ದೇವೆ. ಕಾನೂನಿನ ಹೋರಾಟದ ಎಲ್ಲಾ ಖರ್ಚು ವೆಚ್ಚ ನಾವೇ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.